ಮುಟ್ಟಲಾಗದು ತಬ್ಬಲಾಗದು

ಹುಡುಗಿ
ನಿನ್ನಹಂಕಾರದ ಜೊಲ್ಲು ನಾಯಿಗೆ
ಸಾಕಾಗಿದೆ ಮೂಳೆ
ಎಸೆದೆಸೆದು
ಕೆಲವೊಮ್ಮೆ
ಮುಗ್ಧವಾಗಿ ನನ್ನದೇ
ಕೈಬೆರಳು, ಎದೆಗೂಡಿನ
ಎಲುಬು ಮುರಿದು
ಮತ್ತೆ ಕೆಲವೊಮ್ಮೆ
ಅಲ್ಯುಮಿನಿಯಂ ಫಾಯಿಲ್
ಅವುಚಿದ ಬಿಕರಿಗಿಟ್ಟ
ಬೋನ್ ಪೀಸು

ನೀನೆಂದೆ
ನನಗೊಂದು
ರಮ್ಯ ಕವನ ಬರೆದುಕೊಡು
ಏಕಾಂತದಲ್ಲಿ
ನಿನ್ನೆದೆಗೊರಗಿರುವಾಗ
ಗಂಟಲು ತಲುಪದ
ಹೃದಯದ ಭಾಷೆಯಲ್ಲಿ
ಹಾಡಿಬಿಡು
ಗೊತ್ತಿಲ್ಲ ನಿನಗೆ
ಬೆತ್ತಲಾಗಿ ಬರುವ ನಿನ್ನೆದುರಿಸಲು
ನನ್ನ ಸೇನೆ ಸನ್ನದ್ಧ
ನೀಶೆ, ಫ್ರಾಯ್ಡು, ಪತಂಜಲಿ
ನಿಂತಲ್ಲಿ ಮುತ್ತು
ಕೊಡೆನ್ನುವೆ ನೀನು Continue reading

ಇಲ್ಲಿಗೆ ಬಂದು ನಿಲ್ಲುವ ಅನಿವಾರ್ಯತೆಯಾದರೂ ಎಂಥದ್ದು?‌

ನಾವು ಅಪ್ರಯತ್ನಪೂರ್ವಕ ಅನುಭೂತಿ ಎಂದು ಕರೆಯುವುದರ ಹಿಂದೆಲ್ಲ ಕಣ್ಣಿಗೆ ಕಾಣದ ಸಾವಿರ ಎತ್ತು ಹಿಡಿ ತಳ್ಳು ತರ್ಕಗಳಿರುತ್ತವೆ. ಒಂದು ಸ್ಮಾರ್ಟ್ ಫೋನಿನಲ್ಲಿ ನಮ್ಮ ಬೆರಳ ತುದಿಯ ಸನ್ನೆಗೆ ನಾಚಿ ಪಕ್ಕಕ್ಕೆ ಜಾರಿಕೊಳ್ಳುವ ಪರದೆಯ ಹಿಂದೆ ಅದರ ಲಯವನ್ನು, ಚಲನೆಯನ್ನು ನಿರ್ದೇಶಿಸುವ ನಿರ್ದಿಷ್ಟ ನಿಯಮಗಳಿರುತ್ತವೆ. ಈ ಸೌಂದರ್ಯವನ್ನು ನಿರ್ಮಿಸಿಕೊಡಲು ಯಾಂತ್ರಿಕವಾಗಿ ಲಕ್ಷಾಂತರ ಫ್ಲಿಪ್ ಫ್ಲಾಪುಗಳು ತೆರೆದು ಮುಚ್ಚಿಕೊಳ್ಳುತ್ತಿರುತ್ತವೆ.

ಈ ಯಾಂತ್ರಿಕ ನಿಯಮಬದ್ಧ ಕೆಲಸಗಳ್ಯಾವುವನ್ನೂ ಮಾಡದೆ ಸುಮ್ಮನೆ ಇರಬಹುದಲ್ಲವೇ? ಕ್ಲೀಷೆಯಾಗಿ ಹೋಗಿರುವ ನದೀ ದಂಡೆ, ಸ್ವಚ್ಛಂದ ಆಕಾಶದೆದುರು ಈಸಿ ಚೇರಿನಲ್ಲಿ ವ್ಯಕ್ತಿಯೊಬ್ಬ ಕುಳಿತು ತೂಕಡಿಸುತ್ತಿರುವ ದೃಶ್ಯ, ಅದಕ್ಕಿಂತ ಹೆಚ್ಚು ಕ್ಲೀಷೆಯಾಗಿರುವ ಆ ವ್ಯಕ್ತಿ ಹೇಳಿದನೆನ್ನಲಾದ ಸಾಲುಗಳು. ಇಷ್ಟೆಲ್ಲ ದುಡಿದು ಸಂಪಾದಿಸಿ ಅನಂತರ ಮಾಡುವುದನ್ನೇ ತಾನು ಈಗ ಮಾಡುತ್ತಿರುವೆ.

ಈ ದುಡಿಮೆ, ಈ ದುಗುಡ, ಈ ವ್ಯಾಧಿ, ಅಂಟಿಕೊಳ್ಳುವುದು, ನೋವಾಗುವುದು, ಹಿಂಸೆ, ಬೇಸರ ಇವೆಲ್ಲ ಯಾಕೆ ಬೇಕು ಸುಮ್ಮನೆ ಇರೋದು ಕಷ್ಟವೇ? ಹೌದು, ಹೀಗನ್ನಿಸಿದರೂ ಮನುಷ್ಯ ಯಾವಾಗ ಸುಮ್ಮನಿದ್ದ? ಅತೀವ ಹಿಂಸೆಯಲ್ಲಿ ಬೆಳಿಗ್ಗೆ ಎದ್ದು ಆಫೀಸಿಗೆ ಹೊರಡುವುದು ಶಿಲಾಮಾನವನಿಗೇನು ಅನಿವಾರ್ಯವಾಗಿರಲಿಲ್ಲ ಅಲ್ಲವೇ? ಇಲ್ಲಿಗೆ ಬಂದು ತಲುಪುವುದಕ್ಕೆ ಆ ಮಾತು ಗೊತ್ತಿಲ್ಲದ, ಸಭ್ಯತೆಯಿಲ್ಲದ, ಶೂ ಪಾಲಿಶ್ ಮಾಡಲು ತಿಳಿದಿಲ್ಲದ, ಟೈ ಕಟ್ಟಲು ಗೊತ್ತಿಲ್ಲದ, ಸೀನುವ ಮುನ್ನ ಎಲ್ಲಿದ್ದರೂ ಹುಡುಕಿ ತೆಗೆದು ಮೂಗಿಗೆ ಒತ್ತಿ ಹಿಡಿಯುವ ಕರ್ಚೀಫು ಪರಿಚಯವಿಲ್ಲದ, ಸೀನಿದ ತರುವಾಯ ಕ್ಸೂಸ್ ಮಿ ಎನ್ನುವ ಸಂಸ್ಕಾರವಿಲ್ಲದ ಶಿಲಾಮಾನವನಿಗೆ ಇದ್ದ ಅನಿವಾರ್ಯಗಳಾದರೂ ಎಂಥವು?

ಇಲ್ಲಿ ಬಂದು ನಿಂತು ನಾವು ಇದೆಲ್ಲ ಏತಕ್ಕೆ ಎಂದೊಡನೆ ಪರಿಸ್ಥಿತಿ ಸುಧಾರಿಸೀತೇ?‌

ಕುರಿ ವೇಷದಲ್ಲಿರುವ ಪುರುಷ ಸಿಂಹರೇ ಎದ್ದೇಳಿ!

ಇರುವುದನ್ನು ಇರುವಂತೆ ಹೇಳುವುದು ಕೆಲವೊಮ್ಮೆ ಅಪಾಯಕಾರಿ. ಆದರೆ ಹಾಗೆ ಹೇಳುವುದು ಹಲವು ಸಂದರ್ಭಗಳಲ್ಲಿ ಅತ್ಯಗತ್ಯ. ಇರುವುದನ್ನು ಹೇಳದಿರುವುದು ಹಾಗೂ ಇಲ್ಲದಿರುವುದನ್ನು ಹೇಳುವುದು ಸುಳ್ಳು ಎಂದು ಕರೆಸಿಕೊಳ್ಳುತ್ತೆ. ಹಾಗೆ ಹೇಳಿದರೆ ಸಾಚಾ ಅಲ್ಲದ ಉದ್ದೇಶಗಳಿದ್ದೇ ಇರುತ್ತವೆಂಬ ಗುಮಾನಿ ಏಳುತ್ತದೆ. ಹೊಟ್ಟೆ ಸಣ್ಣಗೆ ಕಾಣುವಂತಹ ಕನ್ನಡಿ ಕ್ಷಣ ಮಾತ್ರ ಖುಶಿ ಕೊಡಬಲ್ಲದು ಆದರೆ ಅದನ್ನೇ ಕಣ್ಣ ಚಾಳೀಸು ಮಾಡಿಕೊಂಡರೆ ನೆಟ್ಟಗಿರುವುದನ್ನು ಕಾಣೋದಕ್ಕೇ ಸಾಧ್ಯವಿಲ್ಲ.

ಇದೇ ಸಂಗತಿ ಭಗವದ್ಗೀತೆಯಿಂದ ಹಿಡಿದು ನವಯುಗದ ಆಧ್ಯಾತ್ಮಕ್ಕೂ ಅನ್ವಯಿಸುತ್ತದೆ. ವಿಜಯಕ್ಕೆ ಏಳು, ಎಂಟು, ಇನ್ನೊಂದು ಅರ್ಧ ಮೆಟ್ಟಿಲು ಎಂದು ವ್ಯಕ್ತಿತ್ವ ವಿಕಸನದ ಗಗನ ಚುಂಬಿ ಮೆಟ್ಟಿಲುಗಳನ್ನು ತೋರಿಸುವ ಮಂದಿಗೂ ಅನ್ವಯವಾಗುತ್ತದೆ. ನೀವೆಲ್ಲರೂ ಕುರಿ ವೇಷದಲ್ಲಿರುವ ಸಿಂಹಗಳು ಪುರುಷ ಸಿಂಹಗಳು ಎಂದು ವಿವೇಕಾನಂದ ಉದ್ಘರಿಸಿದ್ದು ಕೇಳಿದೊಡನೆ ನಿಮ್ಮಲ್ಲಿ ಉಬ್ಬರಿಸಿ ಉಕ್ಕಿ ಬರುವ ಆತ್ಮವಿಶ್ವಾಸವನ್ನು ಕೊಂಚ ತಣ್ಣಗಾಗಿಸಿಕೊಂಡು ಕೇಳಿಕೊಳ್ಳಿ ಇದು ಇದ್ದದ್ದು ಹೇಳುವ ವಿಧಾನವಾ ಎಂದು?

ಯಾವತ್ತೂ ಸಾಕ್ಷಾತ್ಕರಿಸಿಕೊಳ್ಳಲಾಗದ ಯುಟೋಪಿಯಾ, ಎಂದೂ ತಲುಪಲಾಗದ ಗಮ್ಯಗಳನ್ನು ಎದುರಿಗಿಟ್ಟುಕೊಂಡು ಮಾತನಾಡುವವರಿಂದ ಕಾಲ್ಕೀಳುವುದು ಸೌಖ್ಯ. ಆತ್ಮವನ್ನು ಪರಿಶುದ್ಧ ಮಾಡಿಕೊಳ್ಳುವುದು ಹೇಗೆ ಎಂದು ಮಾತನಾಡುವವನಿಗಿಂತ ಕುಡಿಯುವ ನೀರನ್ನು ಶುದ್ಧವಾಗಿಸೋದು ಹೇಗೆ ಎಂದು ಹೇಳುತ್ತಿರುವವನಿಗೆ ಗಮನ ಕೊಡಬೇಕು. ನೀವೆಲ್ಲ ಮಲಗಿರುವ ಜ್ವಾಲಾಮುಖಿಗಳು, ಕುರಿ ವೇಷದ ಸಿಂಹಗಳು ಎಂದಾಗ ಸಾಧ್ಯತೆಯನ್ನು ನೆನೆದು ಆರ್ಗಾಸ್ಮಿಕ್ ಆಗಿ ವರ್ತಿಸುವ ಮುನ್ನ ನಿಮ್ಮನ್ನು ನೀವು ಕುರಿ ವೇಷ ತೊಟ್ಟಿರುವವರು, ಮಲಗಿರುವವರು – ಎಚ್ಚರವಿಲ್ಲದವರು ಎಂದು ಹೇಳುತ್ತಿರುವುದು ಯಾವ ಕಾರಣಕ್ಕೆ ತಿಳಿಯಿರಿ. ನಮ್ಮ ಫೇರ್ ನೆಸ್ ಕ್ರೀಮ್ ಹಚ್ಚಿದರೆ ಬೆಳ್ಳಗಾಗುವಿರಿ ಎನ್ನುವುದರಷ್ಟೇ, ನೀವು ಅವಮಾನಕಾರಿಯಾಗುವಷ್ಟು ಕಪ್ಪಗಿದ್ದೀರಿ ಎಂಬ ಭಾವನೆ ಮೂಡಿಸುವ ಪ್ರಯೋಜನಕಾರಿ ವ್ಯಾಪಾರಿ ತಂತ್ರ.

ಕ್ಲಿಷ್ಟವೆನ್ನುವುದದೆಷ್ಟು ಸುಲಭ!

ದ್ವಂದ್ವಗಳೊಡನೆ ಆಟವಾಡುವುದು ಬಲು ಸೊಗಸು. ನಮ್ಮ ಕಪ್ಪು ಬಿಳುಪು ನೈತಿಕತೆ, ಇಬ್ಭಾಗ ಸೀಳುವ ಕತ್ತಿಯಲಗಿನ ಹರಿತ ತರ್ಕಗಳಿಗೆ ದ್ವಂದ್ವ ದುಃಸ್ವಪ್ನ. ಆದರೆ ಬದುಕಿಗೋ ಅದೇ ಸಹಜ ದಾರಿ.

ಸರಳವಾಗಿ ಹೇಳುವುದಾದರೆ ಎರಡು ಸಮಾನಾಂತರ ಕಂಬಿಗಳಿರುವ ರೈಲು ಹಳಿ, ಅದರೆರಡು ಕಂಬಿಗಳು ದ್ವಂದ್ವವೆನ್ನುವುದಾರೆ. ನಮ್ಮ ತರ್ಕ, ನೈತಿಕ ಮೌಲ್ಯಗಳು ಯಾವುದೋ ಒಂದು ಕಂಬಿಯ ಮೇಲಷ್ಟೇ ಸಾಗಬಲ್ಲ ಸೈಕಲ್ಲು. ಬದುಕೋ ಎರಡೂ ಹಳಿ ಮೇಲೆ ಹರಿದು ಸಾಗುವ ರೈಲು ಗಾಡಿ.

ಮನುಷ್ಯನಿಗೆ ಎಲ್ಲವೂ ಅಭ್ಯಾಸ, ಸಿದ್ಧಿ, ಸಾಧನೆಯಿಂದ ಲಭಿಸುವಂಥದ್ದು. ಅಭ್ಯಾಸದಿಂದ ಆನೆಯನ್ನೂ ಪಳಗಿಸಬಹುದು, ವಿಮಾನವನ್ನು ಹಾರಿಸಬಹುದು, ಹಡಗನ್ನು ತೇಲಿಸಬಹುದು. ಆದರೆ ಎಲ್ಲಾ ಅಭ್ಯಾಸ ಮರೆತ ಕ್ಷಣ ಮಾತ್ರದ ಉತ್ಕಟತೆಯಲ್ಲಿ ಮಾತ್ರ ಕಾವ್ಯ ಹುಟ್ಟಲು ಸಾಧ್ಯ. ಸಾಧನೆಯ ಬಿಗು ಸಡಿಲಾದಾಗಲೇ ಅನುಭೂತಿ ದಕ್ಕಲಿಕ್ಕೆ ಸಾಧ್ಯ. ಅವನೊಬ್ಬ ರಜನೀಶ್ ಹೇಳುತ್ತಾನೆ ನಿನ್ನ ಮನಸ್ಸನ್ನೇ ಕೈಬಿಡು.

ಧೈರ್ಯವೆನ್ನುವುದನ್ನು ಬೆಳೆಸಿಕೊಳ್ಳಬೇಕು ನಿಜ. ಪುಕ್ಕಲುತನವೇನು ಸಹಜ ಗುಣವೇ? ಭಯವೇನು ನಮ್ಮ ಸ್ವಭಾವವೇ? ಸಾಧನೆಯಿರದಿದ್ದರೆ ಭಯಪೀಡಿತನಾಗಿರುವುದಕ್ಕೆ ಸಾಧ್ಯವಿಲ್ಲ. ಭಯವೆನ್ನುವುದೇ ಸ್ವಭಾವವಾಗುವುದಕ್ಕೂ ಅಭ್ಯಾಸ ಬೇಕು. ಇಷ್ಟು ಸುಲಭಕ್ಕೆ ಎಲ್ಲವೂ ನಮ್ಮ ಕೈಲಿರುವುದೇ? ಪ್ರಶ್ನಿಸಲೇ ಬೇಡ ಹೀಗೆ. ನೀನ್ಯಾರು ಅನ್ನೋದು ಕೈಬಿಡು, ನೀನೇನಾಗಬೇಕು ಕೇಳಿಕೋ. ಹೀಗೆಂದೊಡನೆ ಅರ್ಥ ಗ್ರಹಿಸುವ ಮುಂಚೆಯೇ ಆರ್ಕೆಸ್ಟ್ರಾದಿಂದ ಉತ್ಸಾಹ ಭರಿತ ಸಂಗೀತ ಧಾರೆಯುಕ್ಕಿ, ಕಣ್ತುಂಬ ಬೆಳಕು ಕವಿಯುವುದು ಅಭ್ಯಾಸ ಬಲದಿಂದಲೇ?

 

ನಾನ್ ಸ್ಟಾಪ್ ಇಂಡಿಯಾ: ಮಾರ್ಕ್ ಟುಲಿಯ ಭಾರತ ದರ್ಶನ

(ಈ ಬರಹ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಕಲಕತ್ತೆಯಲ್ಲಿ ಹುಟ್ಟಿ ಮುವತ್ತು ವರ್ಷಗಳ ಕಾಲ ಬಿಬಿಸಿ ಸುದ್ದಿ ಸಂಸ್ಥೆಯ ವರದಿಗಾರನಾಗಿ ಕೆಲಸ ಮಾಡಿದ ಮಾರ್ಕ್ ಟುಲ್ಲಿಗೆ ಭಾರತದ ಮೇಲಿನ ಅದಮ್ಯ ಪ್ರೀತಿ, ಕಾಳಜಿಗೆ ಅವರು ಭಾರತವನ್ನು ಕುರಿತು ಬರೆದಿರುವ ಪುಸ್ತಕಗಳು ಸಾಕ್ಷಿ. ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯ’ ಅವರ ಮೊದಲ ಕೃತಿ.

ತೀರಾ ಇತ್ತೀಚಿನ ಪ್ರಕಟಣೆ ‘ನಾನ್ ಸ್ಟಾಪ್ ಇಂಡಿಯ’ ಮಾರ್ಕ್ ತಮ್ಮ ಎಪ್ಪತ್ತಾರರ ವಯಸ್ಸಿನಲ್ಲೂ ಕಾಯ್ದಿರಿಕೊಂಡಿರುವ ಮಗುವಿನ ಮುಗ್ಧತೆ, ವರದಿಗಾರಿಕೆಯಲ್ಲಿನ ಅಚ್ಚುಕಟ್ಟು, ತಿಳಿಯಾದ ಚಿಂತನೆಗಳು ‘ನಾನ್ ಸ್ಟಾಪ್ ಇಂಡಿಯ’ ದಲ್ಲಿನ ಹತ್ತೂ ಪ್ರಬಂಧಗಳಲ್ಲಿ ಪ್ರಮುಖವಾಗಿ ಕಾಣುತ್ತವೆ. ಟೀಕೆಗಳನ್ನು ಪ್ರತಿರೋಧವಿಲ್ಲದೆ ಸ್ವೀಕರಿಸುವಂತೆ ಮಾಡುವ ಅವರ ವರದಿಗಾರಿಕೆಯಲ್ಲಿನ ನಂಜಿಲ್ಲದ ಕಾಳಜಿ ಹಾಗೂ ಮಾರ್ದವ ಒಂದು ಸಾಹಿತ್ಯ ಕೃತಿಯಾಗಿಯೂ ನಾವು ಅವರ ವರದಿಗಾರಿಕೆಯನ್ನು ಓದುವಂತೆ ಪ್ರೇರೇಪಿಸುತ್ತವೆ.

ಭಾರತದ ಪ್ರೇಕ್ಷಣೀಯ ಇಲ್ಲವೇ ತೀರ್ಥ ಕ್ಷೇತ್ರಗಳ ಇತಿಹಾಸ, ಪೌರಾಣಿಕ ಹಿನ್ನೆಲೆ ತಿಳಿಸುತ್ತ ಭಾರತ ದರ್ಶನ ಮಾಡಿಸುವುದನ್ನು ನಾವು ಕಂಡಿದ್ದೇವೆ. ಮಾರ್ಕ್ ರದ್ದು ಸಹ ಇಂಥದ್ದೇ ಭಾರತ ದರ್ಶನ. ಆದರಿಲ್ಲಿ ಅನಾವರಣಗೊಳ್ಳುವ ಭಾರತ ವಾಸ್ತವದ್ದು. ತನ್ನ ಶಕ್ತಿ, ಉತ್ಸಾಹ, ಕನಸು, ಆಕಾಂಕ್ಷೆಗಳ ಜೊತೆ ಜೊತೆಗೆ ತನ್ನ ದೌರ್ಬಲ್ಯ, ಆಲಸ್ಯ, ಕ್ರೌರ್ಯಗಳನ್ನು ಭಾರತವೆಂಬ ಸಹಸ್ರ ಮುಖಗಳ ದೇಶ ಪ್ರಕಟಿಸುತ್ತಾ ಹೋಗುತ್ತದೆ.

೨೦೧೧ರಲ್ಲಿ ಪ್ರಕಟವಾದ `ನಾನ್ ಸ್ಟಾಪ್ ಇಂಡಿಯ’  ಭಾರತದವನ್ನು ಒಂದು ದೇಶವಾಗಿ ಅದರ ಎಲ್ಲಾ ಸಮಸ್ಯೆಗಳು ಹಾಗೂ ಅವಕಾಶಗಳೊಂದಿಗೆ ಅರ್ಥ ಮಾಡಿಕೊಳ್ಳುವುದಕ್ಕೆ ಹೊರ ದೇಶದ ಓದುಗರಿಗೆ ಅತ್ಯುತ್ತಮವಾದ ಕೈಪಿಡಿ. ಮಾರ್ಕ್ ಸಹ ಭಾರತದ ಕೆಲವು ಕ್ಲಿಷ್ಟ ಸಂಗತಿಗಳನ್ನು  ಭಿನ್ನ ಸಂಸ್ಕೃತಿಯ, ಭಿನ್ನ ನಾಗರೀಕತೆಯ ಓದುಗ ಅರ್ಥ ಮಾಡಿಕೊಳ್ಳುವಂತೆ ಕೆಲವೆಡೆ ಸರಳಗೊಳಿಸಿದ್ದಾರೆ. ಆದರೆ ಭಾರತೀಯರಿಗೆ ಇದು ಹೊರಗಿನವನೊಬ್ಬನ (ಮಾರ್ಕ್ ಭಾರತದಲ್ಲೇ ಹುಟ್ಟಿ ವಾಸಿಸಿದ್ದರೂ) ಪೂರ್ವಗ್ರಹ ಪೀಡಿತ ಅಭಿಪ್ರಾಯಗಳ ಮೂಟೆ ಅನ್ನಿಸುವುದಿಲ್ಲ. ಏಕೆಂದರೆ ಮಾರ್ಕ್ ತಮ್ಮ ಅಭಿಪ್ರಾಯ, ಮಾತುಗಳನ್ನು ತೀರಾ ಕ್ಲುಪ್ತವಾಗಿಸಿ, ಭಾರತೀಯರನ್ನೇ ಮಾತಿಗೆ ಹಚ್ಚುತ್ತಾರೆ. ಸಮಸ್ಯೆಯ ನಾನಾ ಆಯಾಮಗಳನ್ನು ತೆರೆದಿರಿಸುತ್ತಾ ಬಾಧ್ಯಸ್ಥರ ಅಭಿಪ್ರಾಯಗಳನ್ನೆಲ್ಲ ಸಂಗ್ರಹಿಸಿ ನೇರವಾಗಿ ಕ್ಷೇತ್ರ ಅಧ್ಯಯನದಿಂದ ಗ್ರಹಿಸಿದ ಸಂಗತಿಗಳನ್ನು ನಿರ್ಮೋಹದಿಂದ ದಾಖಲಿಸುತ್ತಾರೆ. ಅವರ ಅಭಿಪ್ರಾಯವೇನಿದ್ದರೂ ಪ್ರಬಂಧಕ್ಕೆ ಒಂದು ಕಟ್ಟು ಒದಗಿಸುವುದಕ್ಕೆ ಮಾತ್ರ ಸೀಮಿತ. ಇದು ಸ್ಥಳೀಯ ಭಾಷೆಗಳು ಹಿಂದಿ ಹಾಗೂ ಇಂಗ್ಲೀಷ್ ಪ್ರಭಾವದಲ್ಲಿ ಎದುರಿಸುತ್ತಿರುವ ಸವಾಲನ್ನು ಕುರಿತ ಪ್ರಬಂಧ ‘ಇಂಗ್ಲೀಷ್ ರಾಜ್’ ನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಭಾರತವನ್ನು ಕಾಡುತ್ತಿರುವ, ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಿರುವ ನಕ್ಸಲ್ ಸಮಸ್ಯೆ, ಕೋಮುವಾದ, ವೋಟ್ ಬ್ಯಾಂಕ್ ರಾಜಕೀಯ, ರಾಮನ ಹೆಸರಿನಲ್ಲಿನ ರಾಜಕಾರಣ ಇವುಗಳ ಚರ್ಚೆಯಿಂದ ಪುಸ್ತಕ ಪ್ರಾರಂಭವಾಗುತ್ತದೆ. ಈ ಸಂಗತಿಗಳನ್ನು ಭಾರತೀಯರಾದ ನಮಗೆ ಚರ್ವಿತ ಚರ್ವಣವೆನಿಸಿದ್ದರೂ ಮಾರ್ಕ್ ಸುದ್ದಿ ಗ್ರಹಿಸುವ ಮೂಲಗಳ ಹೊಸತನ ಹಾಗೂ ನಿರೂಪಣೆ ಕೊಡುವ ಹೊಸ ಹೊಳವುಗಳಿಂದ ಈ ಪ್ರಬಂಧಗಳು ನಮ್ಮನ್ನು ಹಿಡಿದಿಡುತ್ತವೆ. ‘ದಿ ರಾಮಾಯಣ ರೀವಿಸಿಟೆಡ್’ ಪ್ರಬಂಧದಲ್ಲಿ ಕೇಂದ್ರ ಸರಕಾರದ ಒಡೆತನದಲ್ಲಿದ್ದ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರವಾಗಲು ತೊಡಗಿದಾಗ ಅದು ಭಾರತದ ಸೆಕ್ಯುಲರ್ ಮನಸ್ಥಿತಿಗೆ ಘಾತುಕವಾದ ವಿದ್ಯಮಾನ ಎಂದು ಚಿಂತಕರು ವಿರೋಧಿಸಿದ್ದು, ಆ ರಾಮಾಯಣ ಹುಟ್ಟಿಸಿರಬಹುದಾದ ರಾಷ್ಟ್ರೀಯತೆಯ ಅಸ್ಮಿತೆಯ ಅಲೆಯಲ್ಲಿ ರಕ್ತದ ಹೊಳೆ ಹರಿಸಿದ ಅಯೋಧ್ಯಾ ಚಳುವಳಿಗಳ ಹಿನ್ನೆಲೆಯನ್ನು ವಿವರಿಸುತ್ತ ಇಂದು ದಿನದ ಇಪ್ಪತ್ನಾಲ್ಕು ಗಂಟೆ ಧರ್ಮವನ್ನು ನಿರ್ಲಜ್ಜವಾಗಿ ಟಿವಿ ಚಾನಲುಗಳಲ್ಲಿ ಬಿತ್ತರಿಸುತ್ತಿರುವ ಕುರಿತು ಯಾರೂ ಧ್ವನಿಯೆತ್ತದಿರುವುದನ್ನು ಗುರುತಿಸುತ್ತಾರೆ.

ಬಿಸಿ ಬಿಸಿ ಚರ್ಚೆಗಳಿಗೆ ಎಂದಿಗೂ ಅವಕಾಶ ಕಲ್ಪಿಸಿಕೊಡುವ ವಿವಾದಾಸ್ಪದ ಸಂಗತಿಗಳನ್ನು ತಟ್ಟುತ್ತಾ ಹೋಗಿ ಮಾರ್ಕ್ ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮುಟ್ಟುತ್ತಾರೆ. ಮೂಲಭೂತವಾಗಿ ವೈವಿಧ್ಯಮಯವಾದ ಭಾರತದಲ್ಲಿ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಒಡ್ಡುತ್ತಿರುವ ಸಮಸ್ಯೆಗಳನ್ನು ಚರ್ಚಿಸುತ್ತಾ ಸಣ್ಣ ಸಣ್ಣ ಸಮುದಾಯಗಳ ಜವಾಬ್ದಾರಿಗಳನ್ನು, ಅವಕಾಶಗಳನ್ನು ವಿವರಿಸುತ್ತಾರೆ. ಸರಕಾರದ NREGA ಯೋಜನೆಯ ಫಲಶ್ರುತಿ, ಅದರ ಲೋಪಗಳು, ಸೇವಾ ಮಂದಿರದಂತಹ ಸರಕಾರೇತರ ಸಂಸ್ಥೆಗಳ ಕೊಡುಗೆ , ಪಂಜಾಬಿನಲ್ಲಿ ಪೆಪ್ಸಿಕೋ ಕಂಪೆನಿ ಕೈಗೊಂಡಿರುವ ಒಪ್ಪಂದದ ವ್ಯವಸಾಯ, ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸುದ್ದಿ  ಮಾಡಿದ ಮೈಕ್ರೋ ಫೈನಾನ್ಸ್ ಖಾಸಗಿ ಉದ್ದಿಮೆಯ ಹಗರಣ ಮುಂತಾದ ವರದಿಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಸರಕಾರ, ಖಾಸಗಿ ಹಾಗೂ ಎನ್ ಜಿ ಓಗಳ ಪಾತ್ರಗಳೇನು ಅವುಗಳ ಮಿತಿಗಳೇನು ಎಂಬುದನ್ನು ಚರ್ಚಿಸುತ್ತಾರೆ.

ಭಾರತದ ಆರ್ಥಿಕ ಪ್ರಗತಿಗೆ, ಸೂಪರ್ ಪವರ್ ಆಗುವ ಅದರ ಕನಸಿಗೆ ಚೈತನ್ಯ ಕೇಂದ್ರ ಖಾಸಗಿ ಉದ್ದಿಮೆಗಳು. ೧೯೯೧ರ ಮುಕ್ತ ಆರ್ಥಿಕ ನೀತಿಯಿಂದ ಪಡೆದ ಪ್ರೋತ್ಸಾಹನ್ನು , ಆ ಮುಂಚಿನ ಲೈಸೆನ್ಸ್ ಪರ್ಮಿಟ್ ರಾಜ್ ಯುಗದಲ್ಲಿ ತನ್ನ ಸಾಮರ್ಥ್ಯವನ್ನು ಸಂಪೂರ್ಣ ಬಳಸಿಕೊಳ್ಳಲಾಗದೆ ನರಳಿ ಹೊಸ ಸ್ವಾತಂತ್ರ್ಯದಲ್ಲಿ ಐವತ್ತಕ್ಕೂ ಹೆಚ್ಚು ದೇಶಗಳಿಗೆ ವಹಿವಾಟು ವಿಸ್ತರಿಸಿಕೊಂಡು ಅರಳಿದ ಟಾಟಾ ಸ್ಟೀಲ್ ಸಂಸ್ಥೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ೨ಜಿ ತರಂಗಾಂತರ ಹಂಚಿಕೆಯ ಹಗರಣದಲ್ಲಿ ಸುದ್ದಿಗೆ ಬಂದ ರತನ್ ಟಾಟಾ ರಾಡಿಯಾ ಟೇಪ್ ಕುರಿತು ಅವರು ಟಾಟಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡುವುದರ ಮೂಲಕ ಆ ಪ್ರಬಂಧ ಪಿ. ಆರ್ ಆಗುವುದನ್ನು ತಪ್ಪಿಸಿದ್ದಾರೆ.  ಅವಸಾನದ ಅಂಚಿನಲ್ಲಿರುವ ಹುಲಿಗಳ ರಕ್ಷಣೆ ಹಾಗೂ ಸ್ವಾತಂತ್ರಾನಂತರದ ದಿನಗಳಿಂದಲೂ ಅವಗಣನೆಗೆ ಒಳಗಾಗಿರುವ ಪೂರ್ವೋತ್ತರ ರಾಜ್ಯಗಳ ಪರಿಸ್ಥಿತಿಯ ಕುರಿತ ಪ್ರಬಂಧಗಳೊಂದಿಗೆ ಪುಸ್ತಕ ಮುಗಿಯುತ್ತದೆ.

ಮಾರ್ಕ್ ಬರಹದಲ್ಲಿ ಹರಿತವಾದ ಚಿಂತನೆಗಳಿಗಿಂತ ವಿಶಾಲವಾದ ತಳಹದಿಯ ಅಧ್ಯಯನ, ವರದಿಗಾರಿಕೆ ಇರುತ್ತವೆ. ಬರವಣಿಗೆಯಲ್ಲಿನ ಮಾರ್ದವ, ಸಹಜವಾದ ಹಾಸ್ಯ, ಊಹಿಸಲಸಾಧ್ಯವಾದ ದಿಕ್ಕುಗಳಿಂದ ಒದಗಿ ಬರುವ ರೆಫರೆನ್ಸುಗಳು ಅವರ ಪುಸ್ತಕದ ಓದನ್ನು ಅರ್ಥಪೂರ್ಣವಾಗಿಸುತ್ತವೆ. ಮಾಗಿದ ಪತ್ರಕರ್ತನ ಪ್ರಬುದ್ಧ ವರದಿಗಾರಿಕೆಯಲ್ಲಿ ಭಾರತವನ್ನು ಕಾಣುವುದು ನಿಜಕ್ಕೂ ಉಲ್ಲಾಸದಾಯಕ!

(ಚಿತ್ರ ಕೃಪೆ: http://ibnlive.in.co… )

ಕಲರ್ ಫುಲ್ ಕಾಲೇಜು

(ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಕಾಲೇಜು ಬೆಂಚಿನಿಂದ ಬದುಕಿನ ಹಾದಿಗೆ ಒಂದೇ ನೆಗೆತ! ಅನೇಕರ ಪಾಲಿಗಿದು ಉಲ್ಲಾಸಮಯ ರೂಪಾಂತರ. ಕೆಲವರಿಗೆ ದಿಗ್ಭ್ರಮೆ ದಿಕ್ಕು ಕಾಣದ ಪರಿಸ್ಥಿತಿ. ಎಲ್ಲೋ ಒಂದಷ್ಟು ಮಂದಿಗೆ ಅತಿ ಘೋರ ದುರಂತ. ಏನೇ ಆಗಲಿ ಎಲ್ಲರ ಬದುಕಲ್ಲೂ ಈ ಹಂತ ಮಾತ್ರ ಗಣನೀಯ.

ಕಲರ್ ಫುಲ್ ಕಾಲೇಜು

ತಮ್ಮ ಇಡೀ ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ದಿನಗಳನ್ನು ಅತ್ಯಂತ ಸಂಭ್ರಮದಲ್ಲಿ ಅನೇಕರು ನೆನೆಯುತ್ತಾರೆ. ಏಕೆಂದರೆ ನೌಕರಿ, ದುಡಿಮೆ, ಖರ್ಚು-ವೆಚ್ಚ, ಮನೆ, ಸಂಸಾರ,ಮಕ್ಕಳು, ಟ್ಯಾಕ್ಸು – ಸೇವಿಂಗ್ಸು ಎನ್ನುವ ತಲೆ ಬಿಸಿಯಿನ್ನೂ  ಶುರುವಾಗಿರದ, ಬೆತ್ತ ಹಿಡಿದು ನಿಂತ ಟೀಚರು, ಒಪ್ಪವಾದ ಬಿಳಿ ಸಾಕ್ಸು, ಶೂ, ಮಡಿಕೆಗಳಿಲ್ಲದ ಯೂನಿಫಾರಂ, ಗೂನು ಬೆನ್ನು ಏರಿ ಕುಳಿತ ಹೋಂ ವರ್ಕು, ಅಪರೂಪದ ಪಾಕೆಟ್ ಮನಿಗಳ ಕಟ್ಟಳೆಗಳಿಲ್ಲದ ಕಾಲ ಕಾಲೇಜು ಜೀವನ. ಹೊಸತಾಗಿ ದೊರೆತ ಸ್ವಾತಂತ್ರ್ಯ, ಜವಾಬ್ದಾರಿಗಳಿಲ್ಲದ ಬದುಕು ಯಾರಿಗೆ ತಾನೆ ಹಿತವೆನಿಸುವಿದಿಲ್ಲ ಹೇಳಿ?‌

ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎನ್ನುವ ಗಾದೆಗೆ ಕೈ ಕಾಲುಗಳು ಮೊಳೆಯಲು ಪ್ರಾರಂಭವಾಗುವುದೇ ಕಾಲೇಜಿನಲ್ಲಿ. ಅಲ್ಲಿಯವರೆಗೆ ಮಾರ್ಕ್ಸ್ ಗಳಿಸಿದವನೇ ಮಹಾಶೂರ. ಹೈಸ್ಕೂಲು, ಪಿಯುಸಿವರೆಗೆ ಉರುಹೊಡೆದ ಉತ್ತರಗಳೇ ಬದುಕಿನ ಸಮಸ್ತ ಸವಾಲುಗಳ ಬೀಗಗಳಿಗೂ ಕೀಲಿಕೈ. ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದವನದಷ್ಟೇ ಬುದ್ಧಿವಂತ. ಹಿರಿಯರಿಗೆ ವಿಧೇಯ, ಯಾವುದಕ್ಕೂ ತಿರುಗಿ ಬೀಳದ, ಯಾರನ್ನೂ ಪ್ರತಿಭಟಿಸದ ಯುವರ್ಸ್ ಫೇಯಿತ್ ಫುಲ್ಲಿ ಹುಡುಗರಷ್ಟೇ ಸಮಾಜದ ಸತ್ಪ್ರಜೆಗಳು. ಮೇಷ್ಟ್ರು ಮೆಚ್ಚಿದವನೇ ಬಂಗಾರದ ಮನುಷ್ಯ.  ಪುಸ್ತಕದ ಹುಳುವೇ ಭಾರತ ಭಾಗ್ಯ ವಿಧಾತ!

ಆದರೆ ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಮೆಲ್ಲಗೆ ಬದಲಾವಣೆಗಳಾಗಲು ಶುರುವಾಗ್ತವೆ. ಅದುವರೆಗೆ ಕ್ಲಾಸಿನಲ್ಲಿ ನೋಟ್ಸು ಬರೆಯದೆ ಕವಿತೆ ಗೀಚುತ್ತ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದವನ ಫೋಟೊ ಪೇಪರಿನಲ್ಲಿ ಬರಲು ತೊಡಗುತ್ತೆ. ಮುಖಕ್ಕೆ ಪೌಡರು ಮೆತ್ತುವ ಸಮಯದ ಅರ್ಧದಲ್ಲಿ ಕೆಮಿಸ್ಟ್ರಿ ಫಾರ್ಮುಲ ಉರುಹೊಡೆದಿದ್ದರೆ ಪಾಸಾಗಿ ಮುಂದಕ್ಕೆ ಹೋಗಿರುತ್ತಿದ್ದೆ ಎಂದು ಮಂಗಳಾರತಿ ಎತ್ತಿಸಿಕೊಂಡ ಲಲನೆಯರು ರ್ಯಾಂಪಿನಲ್ಲಿ  ನಡೆದು ಟಿವಿ ಸೇರಿರುತ್ತಾರೆ. ಪ್ರತಿ ಪೇಪರಿನಲ್ಲೂ ಪಕ್ಕದವನ ಅಕ್ಷರಗಳನ್ನು ಭಟ್ಟಿ ಇಳಿಸಿ ಪರೀಕ್ಷೆಯೆಂಬ ತೂಗು ಕತ್ತಿಯಿಂದ ಪಾರಾಗಿ ಕಾಲೇಜು ಹೊಸ್ತಿಲಲ್ಲಿ ಸುಸ್ತಾಗಿ ಬಂದವನು ರಿಮೋಟ್ ಹಿಡಿದು ರೋಬಾಟ್ ಮಾನವನನ್ನು ಮಾತನಾಡಿಸುತ್ತಿರುತ್ತಾನೆ. ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಕುಕ್ಕುರುಗಾಲಲ್ಲಿ ಕೂತಿದ್ದ ಹುಡುಗ ರೇಡಿಯೋ ಜಾಕಿಯಾಗಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಿರುತ್ತಾನೆ. ಟೀಚರ್ ಕೊಟ್ಟ ಸರ್ಟಿಫಿಕೇಟ್ ಪಕ್ಕಕ್ಕೆ ಬಿಸುಟಿ  ತಮ್ಮ ಬಾಳಿನ ಕ್ಯಾನ್ವಾಸಿಗೆ ಬೇಕಾದ ಬಣ್ಣ ತುಂಬಿಕೊಳ್ಳಲು ಶುರು ಮಾಡುವುದೇ ಕಾಲೇಜಿನಲ್ಲಿ!

ಬೇಧವಿಲ್ಲದ ಬಾಂಧವ್ಯ

ಮುಂದಿನ ಬಾಳುವೆಯ ನವಜಾತ ಕನಸುಗಳು ಗರಿಗೆದರುತ್ತಿದ್ದರೂ ಬಾಳು ಅನಂತರದಲ್ಲಿ ಒಡ್ಡುವ ರೂಕ್ಷ ಸವಾಲುಗಳು, ಅಸಮಾನತೆ ಅನ್ಯಾಯಗಳ ನೆರಳೂ ಇಲ್ಲದ ಕಾಲ – ಕಾಲೇಜು. ಯಾವ ಅಪ್ಪನ ಮಗನೇ ಆಗಿರಲಿ, ಎಷ್ಟು ಜನ್ಮಗಳ ಪುಣ್ಯ ಸಂಚಯವೇ ಇರಲಿ, ಜಗತ್ತನ್ನು ಬೆಳಗುವ ಪ್ರಭೆಯ ಸುಂದರಿಯೇ ಆಗಲಿ ಎಲ್ಲರೂ ಕ್ಲಾಸ್ ರೂಮಿನ ಬೆಂಚುಗಳ ಸಾಲಿನಲ್ಲಿ ಸಾಲಾಗಿಯೇ ಕೂರಬೇಕು. ಬುದ್ಧಿವಂತನೇ ಇರಲಿ, ಅದೃಷ್ಟ ಹೀನನೇ ಇರಲಿ, ರೀಬಾಕ್ ಶೂನವನಾಗಲಿ, ಹವಾಯಿ ಚಪ್ಪಲಿಯವನಾಗಲಿ ಒಂದೇ ಸಿಲಬಸ್ ಓದಬೇಕು. ಒಂದೇ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಬೇಕು. ಸರಸ್ವತಿಯ ದೇಗುಲದಲ್ಲಿ ಬೇಧ ಭಾವಕ್ಕೆ ಆಸ್ಪದವೇ ಇಲ್ಲ.

ಭಿನ್ನತೆಯಲ್ಲೂ ಏಕತೆಯನ್ನು ಸೃಷ್ಟಿಸಿಕೊಳ್ಳುವ, ವೈವಿಧ್ಯತೆಯಲ್ಲೂ ಒಗ್ಗಟ್ಟನ್ನು ಗುರುತಿಸುವ ಅಂಶಗಳು ಕಾಲೇಜಿನಲ್ಲಿ ಅನೇಕ. ಕಾಲೇಜು ಕಾಂಪೌಂಡಿನ ಹೊರಗೆ ನಾಲಿಗೆ ಚಾಚಿ, ಮೈ ಮುರಿಯುತ್ತ, ತನ್ನ ಆಕ್ಟೋಪಸ್ ಬಳ್ಳಿ ಕೈಗಳನ್ನ ಆಡಿಸುತ್ತ ನಿಂತ ಜಾತಿ ಬೇಧ, ಆರ್ಥಿಕ ಅಂತಸ್ತು, ಭಾಷೆ- ಸಂಸ್ಕೃತಿ ವ್ಯತ್ಯಾಸ, ಕೋಮು ವೈಷಮ್ಯಗಳ ಸೋಂಕು ಇಲ್ಲದೆ ಕನಸುಗಳನ್ನು ಬಿತ್ತಿ ಮಹತ್ವಾಕಾಂಕ್ಷೆಯನ್ನು  ಗೇಯುವ ಪರಿಸರ. ಬೇಧವಿಲ್ಲದ ಬಾಂಧವ್ಯದಲ್ಲಿ ಜೀವಗಳು ಅರಳಿಕೊಳ್ಳುವ ಕಾಲ.

ಚಿಮ್ಮು ಹಲಗೆ ಜೀವನಕ್ಕೆ

ಒಡನೆಯೇ ಬದುಕೆಂಬ ಮೈದಾನಕ್ಕೆ ಜಿಗಿತ. ಈ ಬದುಕು ಅಸಲಿಗೆ ಸಾಪಾಟಾದ ಮೈದಾನವೇ ಅಲ್ಲ. ಎಲ್ಲೆಲ್ಲೂ ಎತ್ತರ ತಗ್ಗುಗಳಿರುವ, ಅಸಮಾನತೆ, ತಾರತಮ್ಯಗಳೇ ನಿಯಮಗಳಾಗಿರುವ ಪ್ರದೇಶ. ಒಮ್ಮೆ ಈ ವಾಸ್ತವದ ಜೀವನಕ್ಕೆ ಜಿಗಿದೊಡನೆ ಮೈ ಮನಸ್ಸುಗಳು ಘಾಸಿಗೊಳಗಾಗುವುದು ಸಹಜ. ಕಾಲೇಜಿನಲ್ಲಿ ಕಂಡಿದ್ದ ಕನಸುಗಳೆಲ್ಲ ಬಣ್ಣ ಕಳೆದುಕೊಂಡು ವಾಸ್ತವದಲ್ಲಿ ಕರಗಿ ಹೋಗುವುದನ್ನು, ಲೋಕ ನೀತಿಯ ಎದುರು, ಬದುಕುವ ಚಾಣಾಕ್ಷ ಕಲೆಗಳ ಎದುರು ಆದರ್ಶಗಳೆಲ್ಲ ಒಣಗಿ, ಹಾಸ್ಯಾಸ್ಪದವಾಗಿ ಉದುರುವುದನ್ನು, ಮುಗ್ಧತೆ ಒಳ್ಳೆಯತನಗಳ ಸುತ್ತ ಸ್ವಾರ್ಥ, ಲೋಕಜ್ಞಾನದ ತರಹೇವಾರಿ ಸಮರ್ಥನೆಗಳ ಹುತ್ತ ಬೆಳೆಯುವುದನ್ನು ಮೂಕವಾಗಿ ಗಮನಿಸುತ್ತ ಬಾಳೆಂಬ ವೇಗದ ತಡೆರಹಿತ ರೈಲಿನಲ್ಲಿ ಸೀಟು ಹುಡುಕಿಕೊಳ್ಳುವ ಧಾವಂತ.

ಅಧ್ಯಯನ, ಶ್ರದ್ಧೆ, ಶಿಸ್ತು, ಕಲಿಕೆ, ಕಾವ್ಯ, ಮಾತುಗಾರಿಕೆ, ಬರವಣಿಗೆ, ಸೌಂದರ್ಯ ಎಲ್ಲವೂ ತಮ್ಮ ತಮ್ಮ ಎತ್ತರ- ದಪ್ಪ ಆಕಾರಗಳನ್ನು ತ್ಯಜಿಸಿ ಹಣವೆಂಬ ಹೂಜಿಯ ಮೈಮಾಟಕ್ಕೆ ಒಗ್ಗಿಕೊಳ್ಳುವ ಅನಿವಾರ್ಯ. ಜವಾಬ್ದಾರಿಯ ನೊಗಕ್ಕೆ ಕತ್ತು ನೀಡಿ, ವಹಿಸಿಕೊಂಡ ಪಾತ್ರದ ಲಗೇಜು ಬೆನ್ನ ಮೇಲೆ ಹೇರಿಕೊಂಡು ಸಾಗುವ ತುರ್ತು.

ಕಾಲೇಜಿನಲ್ಲಿ ಹಸನ್ಮುಖಿ ಅರಳು ಮಲ್ಲಿಗೆಗಳನ್ನು ಚಿಮ್ಮುತ್ತ  ನಡೆದಾಡುತ್ತಿದ್ದ ಯುವತಿಯರೆಲ್ಲ ಹೆಜ್ಜೆಯಿಟ್ಟಲ್ಲಿ ಆಪತ್ತು ಎಂಬಂತೆ ಅನುಮಾನಗ್ರಸ್ತರಾಗುತ್ತ ಹೋಗುತ್ತಾರೆ. ದಿಕ್ಕುಗಳು ಥರಗುಡುವಂತೆ ಅಟ್ಟಹಾಸ ಗೈಯ್ಯುತ್ತ, ಉಬ್ಬಿದ ಎದೆ, ಬಂಡೆಯನ್ನಾದರು ಪುಡಿ ಮಾಡುವೆವೆನ್ನುವ ಉತ್ಸಾಹದ ಚಿಲುಮೆಗಳಾದ ಯುವಕರು ಗಾಂಭೀರ್ಯದಲ್ಲಿ ಜೋತು ಬಿದ್ದ ಮುಖಗಳನ್ನು ಹೊತ್ತು ತಿಂಗಳೊಪ್ಪತ್ತು ಏರುವ ಸಾಲದ ಬಡ್ಡಿಗೆ ಹೆದರಿ ಮುದುರಿ ಬಾಳಲು ತೊಡಗುತ್ತಾರೆ.

ಬಾಳೆಂಬ ಬಿರುಗಾಳಿಗೆ ಘಾಸಿಗೊಳ್ಳದೆ ಉಳಿದುಕೊಳ್ಳುವ ಯೌವನಿಗರು ತೀರಾ ವಿರಳ. ಕಾಲೇಜು ಜೀವನದ ಲಹರಿಯನ್ನು, ಉಲ್ಲಾಸಮಯತೆಯನ್ನು ಬಾಳಿನಿದ್ದಕ್ಕೂ ವಿಸ್ತರಿಸಿಕೊಳ್ಳುವವರು ಲಕ್ಷಕ್ಕೊಬ್ಬರು. ಕೋಮಲ ಹಸ್ತಗಳು ಬಿರುಸಾಗುತ್ತ, ಕೆನ್ನೆ, ರೆಪ್ಪೆಗಳು ಜೋತು ಬೀಳುತ್ತ, ಬಡಕಲು ಹೊಟ್ಟೆ ಸೊಂಟಗಳು ಜಾಗ ಸಿಕ್ಕಲ್ಲಿ ಆನುತ್ತಾ ಹೋದರೂ ಸಹ ಒಳಮನಸ್ಸಿನ ಅಂಗಳವನ್ನು ಹಸಿರಾಗಿ, ಹೊಸ ಕನಸುಗಳು ಚಿಗುರಬಹುದಾದ ಫಲವತ್ತು ನೆಲವಾಗಿ, ಆದರ್ಶಗಳನ್ನು ನೆಚ್ಚಿ ಒಬ್ಬಂಟಿಯಾಗಿ ನಡೆಯಬಹುದಾದ ಕೆಚ್ಚಾಗಿ ಕಾಪಾಡಿಕೊಂಡರೆ ಜಗತ್ತೇ ಕಾಲೇಜ್ ಕ್ಯಾಂಪಸ್ ಆಗುತ್ತದೆ!

ಎರಡು ಪ್ರಶ್ನೆಗಳು ಅನೇಕ ಉತ್ತರಗಳು

ಎಲೆಕ್ಟ್ರಾನಿಕ್ಸ್ ಓದಿದವರಿಗೆ ಸೆನ್ಸಾರ್ ಹಾಗೂ ಆಕ್ಚುಯೇಟರ್ ಗಳ ಪರಿಚಯವಿರುತ್ತದೆ. ಒಂದು ಸೂಕ್ಷ್ಮ, ಅತಿ ಸೂಕ್ಷ್ಮವಾಗಿ ಸಂವೇದಿಸುವ ಉಪಕರಣ. ಮತ್ತೊಂದು ಸ್ಥೂಲವಾಗಿ ಬಯಸಿದ ಫಲಿತಾಂಶ ನೀಡುವ ಕೆಲಸ ಮಾಡುವ ಉಪಕರಣ.

ಬದುಕಿನಲ್ಲಿ ಎರಡು ಬಗೆಯ ಪ್ರಶ್ನೆಗಳನ್ನು ಕೇಳಬಹುದು. ಒಂದು: ಈ ಬದುಕು ಏನು ಅಥವಾ ನಾನು ಯಾರು? ಎರಡು: ನನ್ನ ಬದುಕು ಹೇಗಿರಬೇಕು, ನಾನು ಏನಾಗಬೇಕು?

ಒಂದು ಹೊರಗನ್ನು ನಿಷ್ಕ್ರಿಯಗೊಳಿಸಿ ಒಳಗನ್ನು ಸೂಕ್ಷ್ಮ, ಸಾಂದ್ರಗೊಳಿಸುತ್ತಾ ಹೋಗುತ್ತೆ. ಮತ್ತೊಂದು ಹೊರಗನ್ನು ಸಮೃದ್ಧ,ಅರ್ಥಪೂರ್ಣಗೊಳಿಸುತ್ತ ಹೋಗುತ್ತೆ. ಎರಡೂ ಸೇರಿ ಮಾಡುವ ಕೆಲಸ ಏನು? ದ್ವಂದ್ವವಿಲ್ಲದೆ ಬದುಕು ಗ್ರಹಿಸುವುದಕ್ಕೆ ಹೇಗೆ ಸಾಧ್ಯ? ನಮಗಿರುವುದು ಎರಡು ಹೋಳುಗಳ ಮೆದುಳು, ಭೂಮಿಯಲ್ಲಿರುವುದು ಎರಡು ಧೃವಗಳು.

(ಕೊಸರು: ಇದು ದೋಸೆ ಹುಯ್ಯುವಾಗಿನ ಚಿಂತನೆ)

ತಲೆ ಹೃದಯದೊಡಗೂಡಿ ಸಿನೆಮಾ

ಸಿನೆಮಾಗಳು  ಟೈಮ್ ವೇಸ್ಟು ಎಂಬ ನಿಲುವಿನಿಂದ, ಸಿನೆಮಾಗಳು ಗ್ಲಾಮರ್ ಜಗತ್ತಿನ ಪಾಪದ ಕೂಸುಗಳಂತೆ ಕಂಡು, ಸಿನೆಮಾ ಮನರಂಜನೆಯ ಮಾಧ್ಯಮವಾಗಿ ಬೆಳೆದು, ಸಿನೆಮಾ ಗಂಭೀರ ಕಲೆಯ ಅಭಿವ್ಯಕ್ತಿಯಾಗಿ ಗೋಚರಿಸುವಲ್ಲಿ ಸೈಕಲ್ ಸ್ಟ್ಯಾಂಡ್ ನಿಲ್ಲಿಸಿರುವೆ.

ಎಲ್ಲಾ ಸಿನೆಮಾಗಳನ್ನು ತಲೆಯಿಂದ ನೋಡುವ ಅಗತ್ಯವಿಲ್ಲ, ಹೃದಯವೂ ಜೊತೆ ನೀಡಬೇಕು.

ದೇಹ ಮನಸ್ಸುಗಳ ನಡುವೆ ಒಬ್ಬ ಓಶೋ ರಜನೀಶ್!

ಮನಸ್ಸಿನ ಕುರಿತು ಮಾತನಾಡಲು ಶುರುಮಾಡಿದರೆ ಸಣ್ಣಗೆ ಭಯವಾಗಲು ಶುರುವಾಗುತ್ತದೆ. ತೀರಾ sublime, ಹಕ್ಕಿಯ ಗರಿಯಂತೆ ಓಲಾಡುತ್ತ ಗಾಳಿಗೆ ತೂರಿಕೊಂಡಂತೆ ಇರುವ ಸಂಗತಿಯನ್ನು  ಹಿಡಿಯಲು ಹೊರಟು ತೀರಾ ಒರಟೊರಟು, ಬಾಲಿಶವಾದ ವ್ಯಕ್ತಿತ್ವ ವಿಕಸನ ತತ್ವ ಸಿದ್ಧಾಂತಗಳೆಡೆಗೆ ಹೊರಳಿಬಿಡುತ್ತದೆ ಚಿಂತನೆ.

ಓಶೋ ರಜನೀಶ್ ಎಂಬ ಅಂದಕಾಲತ್ತಿಲ್ ಪ್ರಭಾವದ ಅರಿವು ಮೊನ್ನೆ ಒಂದು ದಿನ ಅಚಾನಕ್ಕಾಗಿ ಆದುದರ ಬಗ್ಗೆ ಬರೆಯಬೇಕು.

ರಜನೀಶ್ ಕುರಿತು ನಿಮಗೆ ತಿಳಿದಿರದಿದ್ದರೆ ವಿಕಿಪೀಡಿಯಾದ ಈ ಪುಟವನ್ನು ಓದಿ . ಆತನ ಪ್ರವಚನಗಳನ್ನು ಪುಸ್ತಕಗಳನ್ನು ಓದುವ ಮೊದಲು ಒಂದಂಶ ಸ್ಪಷ್ಟ ಮಾಡಿಕೊಳ್ಳಿ : ಓಶೋನ ಮಾತುಗಳು ತುಂಬಾ ಪ್ರಭಾವಶಾಲಿ. ಆತನನ್ನು ದೂರದಲ್ಲಿಟ್ಟು ಅರ್ಥ ಮಾಡಿಕೊಳ್ಳಲು ಇಲ್ಲವೆ ವಿಮರ್ಶಿಸಲು ಪ್ರಯತ್ನಿಸದಿದ್ದರೆ, ಅಥವಾ ಹಾಗೆ ದೂರ ಕಾಯ್ದಿರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆತನ ಧ್ವನಿಯ ಗತಿ, ಕೈಗಳು ಮುಖದ ಚಲನೆಯ ಓಘಕ್ಕೆ ಮೈಮರೆತು ಅನುಯಾಯಿಯಾಗಿ ಬಿಡುತ್ತೀರಿ. ಓಶೋ ಸತ್ತು ಇಷ್ಟು ವರ್ಷಗಳ ತರುವಾಯ ನೀವು ಆತನ ಅನುಯಾಯಿಯಾಗುವುದು ನಿಜಕ್ಕೂ ಹಾಸ್ಯಾಸ್ಪದ.

ನನ್ನ ಇಂಗ್ಲೀಷ್ ಬ್ಲಾಗಿನಲ್ಲಿ ಇತ್ತೀಚೆಗಷ್ಟೇ ಒಂದು ಪೋಸ್ಟ್ ಹಾಕಿದ್ದೆ. ಕಾಲೇಜು ಮುಗಿಸಿಕೊಂಡು ವೃತ್ತಿ ಜೀವನಕ್ಕೆ ಕಾಲಿಡುವುದು ಒಂದು ಬಗೆಯ ರೂಪಾಂತರವೇ ಎಂದು. ಸ್ವಚ್ಛಂದ ಓಡಾಡಿಕೊಂಡಿದ್ದವರೆಲ್ಲ ಬೇರು ಬಿಟ್ಟು  ನೆಲೆ ನಿಲ್ಲುವ ತಯಾರಿಗೆ ತೊಡಗುತ್ತಾರೆ ಎಂದು ಬರೆದಿದ್ದೆ. ಈಗ ಅದರ ವಿನೋದಮಯ ಆಯಾಮ ಕಂಡು ಬರುತ್ತಿದೆ.  ಆಫೀಸಿನ ಕ್ಯಾಬಿನ್ ಗಳಲ್ಲಿ ಕೂತಲ್ಲೇ ಕೂತು ಕೂತು ಕೂತು ಬಾಳಿನಲ್ಲಿ ಬೇರು ಬಿಡುವೆವೋ ಇಲ್ಲವೋ ಕಾಣೆ ಆದರೆ ಕಾಂಡವಂತೂ ದಶದಿಕ್ಕುಗಳಲ್ಲಿ ಮಹತ್ವಾಕಾಂಕ್ಷೆಯಿಂದ ಸಾಮ್ರಾಜ್ಯ ವಿಸ್ತರಣೆ ಕೈಗೊಳ್ಳುವುದು ಸತ್ಯ! ಅದುವರೆಗೆ ಕಣ್ಣಿಗೆ ಕಂಡು ಕೈಗೆ ಸಿಕ್ಕದ ಹಾಗಿದ್ದ ಸೊಂಟ, ಅಬ್ ಡೋಮೆನ್, ತೊಡೆಗಳು ತ್ವರಿತಗತಿಯಲ್ಲಿ ವಸಾಹತುಗಳನ್ನು ಸ್ಥಾಪಿಸಲು ಶುರುಮಾಡಿರುತ್ತವೆ.

ಈ ವಸಾಹತುಶಾಹಿ ಮಹತ್ವಾಕಾಂಕ್ಷೆಗೆ ಅಂಕುಶ ಹಾಕಲು ಎಲ್ಲಾ ನಗರವಾಸಿ ಆರೋಗ್ಯಾಕಾಂಕ್ಷಿ ಕಂಪ್ಯುಟರೋದ್ಯೋಗಿಗಳಂತೆ ನಾನೂ ಜಿಮ್ ಸೇರಿದೆ. ಜಾಗಿಂಗ್ ಮಶೀನಿನ ಮೇಲೆ ಹತ್ತು ನಿಮಿಷ ಬೆವರು ಸುರಿಸುವಷ್ಟರಲ್ಲಿ ಹತ್ತನೆಯ ತರಗತಿಯವರೆಗೆ ಮೂಗು ಮುಚ್ಚಿಕೊಂಡು ನುಂಗಿದ ಇತಿಹಾಸದ ಪುಸ್ತಕಗಳು ಕಲಿಸದ ಪಾಠ ಥಟ್ಟನೆ ಅರಿವಿಗೆ ಬಂತು. ಮೂರೇ ತಿಂಗಳಲ್ಲಿ ನೆಲಕಂಡುಕೊಂಡ ನವ-ವಸಾಹತುಗಳ ಪ್ರಭಾವ ಅದೆಷ್ಟೆಂದರೆ ಮೂರು ಮೂರು ಬಾರಿ ನೀರು ಕುಡಿದು ಸುಧಾರಿಸಿಕೊಂಡರೂ ಕಣ್ಣು ಕತ್ತಲೆ ಬಂದು ತಲೆ ಗಿರ್ರನೆ ಸುತ್ತುವುದು ನಿಲ್ಲಲಿಲ್ಲ! ಇನ್ನು ಮೇಲೆ ನವ-ವಸಾಹತು, ವಸಾಹತೋತ್ತರ ಎಂಬೆಲ್ಲ ಪದಗಳು ಕಿವಿಗೆ ಬಿದ್ದರೆ ತತ್ತರಿಸಿ ಓಡದೆ ಅನುಕಂಪದಲ್ಲಿ ಒಂದೆರಡು ಬಾರಿ ಲೊಚಗುಟ್ಟಬೇಕು ಅನ್ನಿಸಿಬಿಟ್ಟಿತು.

ಹೀಗೆ ಸಿಂಗಲ್ ಫೇಸ್ ಕರೆಂಟಿನಲ್ಲಿ ನೀರಿನ ಮೋಟರ್ ಓಡುವಾಗ ಕಣ್ಣು ತೇಲಿಸುವ ಲೈಟ್ ಬಲ್ಬಿನ ಹಾಗೆ ನನ್ನ ಪ್ರಜ್ಞೆ ಓಲಾಡುವಾಗ ಓಶೋ ಮನಸ್ಸಿನ ಬಗ್ಗೆ ಅದನ್ನು ಕೈಬಿಡುವ ಬಗ್ಗೆ ಹೇಳಿದ್ದು ನೆನಪಾಯ್ತು. ಆತನ ಹಲವು ಧ್ಯಾನದ ಪದ್ಧತಿಗಳಲ್ಲಿ ಗಿರ ಗಿರನೆ ಬುಗುರಿಯ ಹಾಗೆ ತಿರುಗಿ ಧೇನಿಸುವ whirling meditation ಸಹ ಒಂದು. ಹೀಗೆ ದೇಹವನ್ನು, ಕೆಲವು ತಂತ್ರಗಳಿಂದ ಮನಸ್ಸನ್ನು ದಣಿಸಿದಾಗ ಅವುಗಳ ಹಿಡಿತ ಕುಂದಿದಾಗ ನಮಗೆ mindless state ಪ್ರಾಪ್ತವಾಗುತ್ತೆ. ಅದು ಕ್ಷಣಾರ್ಧದ ಅನುಭೂತಿ ಮಾತ್ರ. ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿಯೂ ಮನುಷ್ಯ ಅನುಭವಿಸುವುದು ಈ ಅನುಭೂತಿಯನ್ನೇ. ಇಂತಹ ಕ್ಷಣಾರ್ಧದ ಅನುಭವವನ್ನು ನಿತ್ಯ ಸತ್ಯ ಸಂಗತಿಯಾಗಿಸಿಕೊಳ್ಳುವುದೇ ಧ್ಯಾನ ಎಂದು ಸಕ್ಕರೆಯ ಮಾತುಗಳಲ್ಲಿ ಹೇಳಲ್ಪಡುವ mindless state ಅನುಭವಿಸಲು ಪ್ರಯತ್ನಿಸಿದೆ.

ನಿಂತವನೆದುರು ನೆಲವೆಲ್ಲ ಗೋಡೆಯಾಗಿ, ಗೋಡೆ ತೇಲುವ ದೋಣಿಯಾಗಿ, ಬಿಳಿಯೆಲ್ಲ ಕಪ್ಪು ಬಣ್ಣವಾಗಿ, ಬೆಳಕು ಪ್ರವಾಹದಂತೆ ಕಣ್ಣೊಳಗೆ ಹರಿದ ಹಾಗಾಗಿ ಇನ್ನೇನು ಎರಡು ಸೆಕೆಂಡುಗಳಲ್ಲಿ ಜಿಮ್ಮಿನ ಆ ಲೋಹದ ಜಂತುವಿನ ಅಡಿಯಲ್ಲೇ ಜ್ಞಾನೋದಯವಾಗಿಬಿಡುತ್ತದೆ ಅನ್ನಿಸಿತು. ಒಡನೆಯೇ ಹೊಟ್ಟೆ ಮಂಡಿ ಮಡಚಿಕೊಂಡಂತಿದ್ದ ತನ್ನ ಕಾಲುಗಳನ್ನು ಬಿಡಿಸಿ ತಮಾಶೆ ನೋಡುತ್ತ ನಿಂತಿದ್ದ ಮೆದುಳಿಗೆ  ಜಾಡಿಸಿ ಒದ್ದಂತೆ ಭಾಸವಾಗಿ ಹುಸಿ ವಾಂತಿಯ ಕ್ರಿಯೆಯಲ್ಲಿ ನನ್ನ ಆಧ್ಯಾತ್ಮಿಕ ಕನ್ಯತ್ವವನ್ನು ಕಾಪಾಡಿತು.

ವಾಸ್ತವ, ವಸ್ತುಸ್ಥಿತಿಗಳನ್ನೆಲ್ಲ ಮರೆತು elusive ಆದಂತಹ ಆದರ್ಶವಾದದ್ದೋ, ಆಧ್ಯಾತ್ಮದ್ದೋ ನಿಶೆ ತಲೆಗೆ ಏರಿದಾಗಲೆಲ್ಲಾ ಹೀಗೆ ದೇಹ ಜಾಡಿಸಿ ಒದ್ದು ನೆಲಕ್ಕೆ ಇಳಿಸುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ?

ರವಿ ಬೆಳಗೆರೆ ಇದೀಗ ಬರೆಯೋಕೆ ಪ್ರಾರಂಭಿಸಿದ್ದರೆ?

ಮೊನ್ನೆ ಗೆಳತಿಯೊಬ್ಬಳು ವಾರಪತ್ರಿಕೆಯೊಂದಕ್ಕೆ ಬರೆದ ಲೇಖನವನ್ನು ತಿದ್ದುವುದಕ್ಕೆ ನನಗೆ ಕಳಿಸಿದ್ದಳು. ಮೊದಲಲ್ಲೇ  “ಆ ಸಿನೆಮಾ ನನ್ನನ್ನು ಎಷ್ಟು ಕಾಡಿತ್ತೆಂದರೆ ಅದರ ಡಿವಿಡಿಗಾಗಿ ಇಡೀ ಬೆಂಗಳೂರನ್ನು ಜಾಲಾಡಿದ್ದೆ. ಕಡೆಗೆ ಇಂತಲ್ಲಿ ಸಿಕ್ಕಿತು” ಎಂದು  ಶುರು ಮಾಡಿದ್ದಳು. ಇಡೀ ಬರಹ ಓದಿದ ಮೇಲೆ ಆ ಮೊದಲ ಎರಡು ಸಾಲುಗಳನ್ನಷ್ಟೇ ಪಕ್ಕಕ್ಕಿಟ್ಟು ಓದಿದೆ. ಲೇಖನಕ್ಕೆ ಬೇರೆಯದೇ ಚರ್ಯೆ ಸಿಕ್ಕಿತು.

ಅದೊಂದೇ ತಿದ್ದು ಪಡಿ ಮಾಡಿ “ಮೊದಲ ಪ್ಯಾರ ತೆಗೆದು ಹಾಕು ಅದು ಇದ್ದರೆ ಬ್ಲಾಗಿಶ್ ಅನ್ನಿಸುತ್ತೆ” ಎಂದು ಪ್ರತಿಕ್ರಿಯಿಸಿದೆ.

ಚಪಾತಿ ಒಂದೇ ಬದಿಯಲ್ಲಿ ಸೀದು ಹೋಗುವಾಗ ಥಟ್ಟನೆ ಇದು ನೆನಪಾಗಿ ಒಂದು ವೇಳೆ ರವಿ ಬೆಳಗೆರೆ ಈ ಫೇಸ್ ಬುಕ್, ಟ್ವಿಟರ್, ಬ್ಲಾಗುಗಳ ಕಾಲದಲ್ಲಿ ಬರೆಯುವುದಕ್ಕೆ ಶುರು ಮಾಡಿದ್ದರೆ ಏನಾಗುತ್ತಿತ್ತು ಎಂಬ ಆಲೋಚನೆ ಬಂದಿತು.

ಬ್ಲಾಗು ಟ್ವಿಟರುಗಳಲ್ಲಿ ಬರೆಯುವಂಥದ್ದನ್ನು ಓದೋಕೆ ದುಡ್ಡು ಕೊಟ್ಟು ಪೇಪರ್ ತಗೋಬೇಕಾ ಅಂತ ಕೆಲವರಾದರೂ ಮೂಗು ಮುರಿಯುತ್ತಿದ್ದರು ಅನ್ನಿಸುತ್ತೆ. ಹಾಗಾಗಿದ್ದರೆ ಕೆಲವು ಬೆರಳುಗಳಾದರೂ ಮಸಿಯಾಗುವುದು ತಪ್ಪುತಿತ್ತು!