ಒಳ್ಳೆಯ ವ್ಯಕ್ತಿಯ ಕೈಲಿ ಕೆಟ್ಟದ್ದು ಮಾಡಿಸುವುದಕ್ಕೆ ಶ್ರದ್ಧೆ ಬೇಕು!

ರುಜುವಾತು ಪಡಿಸಲು ಸಾಕಷ್ಟು ಸಾಕ್ಷಿಗಳು ಇಲ್ಲದ ಸಂದರ್ಭದಲ್ಲಿಯೂ ಒಂದು ಸಂಗತಿಯನ್ನು ಗಾಢವಾಗಿ ನಂಬುವುದಕ್ಕೆ ಶ್ರದ್ಧೆ ಎನ್ನುವರು.

ಕೃಷ್ಣ ಎನ್ನುವ ಹತ್ತು ವರ್ಷದೊಳಗಿನ ಬಾಲಕ ತನ್ನ ಕಿರು ಬೆರಳಿನಲ್ಲಿ ಗೋವರ್ಧನ ಎನ್ನುವ ಹೆಸರಿನ ಬೆಟ್ಟವನ್ನು ಎತ್ತಿದ. ಅದರಡಿಯಲ್ಲಿ ಇಡೀ ಯಾದವರ ಊರು ಆಶ್ರಯವನ್ನು ಪಡೆದಿತ್ತು. ಈ ಪುರಾಣದ ಕತೆಯನ್ನು ಮನುಷ್ಯನ ಅದ್ಭುತ ಕಲ್ಪನೆಯ ಸೃಷ್ಟಿಯಾಗಿ, ಒಂದು ಪ್ರತಿಮೆಯಾಗಿ, ಸಂಕೇತವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದನ್ನು ಅಕ್ಷರಶಃ ಸತ್ಯವೆಂದು ಯಾವ ಸಾಕ್ಷಿಯೂ ಇಲ್ಲದೆ ನಂಬುವುದು ಶ್ರದ್ಧೆ ಎನ್ನಿಸಿಕೊಳ್ಳುತ್ತದೆ.

ನಮ್ಮ ಬಹುಪಾಲು ಧಾರ್ಮಿಕ ನಂಬಿಕೆಗಳು ಇಂಥವೇ.

ಧರ್ಮ, ದೇವರ ಬಗೆಗೆ ‘ಗಾಡ್ ಈಸ್ ನಾಟ್ ಗ್ರೇಟ್’ ಎಂಬ ಪುಸ್ತಕ ಬರೆದಿರುವ ಕ್ರಿಸ್ಟೋಫರ್ ಹಿಚಿನ್ಸ್ ಒಂದು ಕಡೆ ಹೀಗನ್ನುತ್ತಾನೆ. “ಒಳ್ಳೆಯ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಕೆಟ್ಟವರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ ಒಳ್ಳೆಯವ ಜನರ ಕೈಲಿ ಕೆಟ್ಟ ಕೆಲಸವನ್ನು ಮಾಡಿಸಲಿಕ್ಕೆ ಧರ್ಮ ಬೇಕು”.

ಈ ವಿಷಯ ನೆನಪಿಸಿಕೊಳ್ಳಲಿಕ್ಕೆ ಕಾರಣವಾದದ್ದು ನಾನು ಇತ್ತೀಚೆಗೆ ಓದುತ್ತಿರುವ ಬಿಚಿಯವರ ಆತ್ಮಕತೆ ‘ನನ್ನ ಭಯಾಗ್ರಫಿ’ಯಲ್ಲಿನ ಒಂದು ಘಟನೆ.

ಬೀಚಿಯವರ ಹೆಂಡತಿ ಸಂಪ್ರದಾಯಬದ್ಧವಾದ ಮಾಧ್ವ ಬ್ರಾಹ್ಮಣರ ಮನೆಯ ಹೆಣ್ಣು. ಬೀಚಿ ತುಂಬಾ ಚಿಕ್ಕ ವಯಸ್ಸಿನಲ್ಲೇ ದೇವರು, ದಿಂಡಿರು, ಜಾತಿಗಳ ಗೊಡವೆಯನ್ನು ತೊರೆದವರು.

ಬೀಚಿಯವರ ಮನೆಗೆ ವಾರನ್ನಕ್ಕಾಗಿ ಒಬ್ಬ ಹುಡುಗ ಬರುತ್ತಿರುತ್ತಾನೆ. ಒಮ್ಮೆ ಆತ ಮನೆಗೆ ಬಂದಾಗ ಜ್ವರವಿರುವುದನ್ನು ಕಂಡು ಆತನನ್ನು ತಮ್ಮ ಮನೆಯಲ್ಲಿ ಹದಿನೈದು ದಿನಗಳ ಕಾಲ ಇಟ್ಟುಕೊಂಡು ಆರೈಕೆ ಮಾಡುತ್ತಾರೆ. ಆತ ಬ್ರಾಹ್ಮಣರಲ್ಲೇ ಸ್ಮಾರ್ತ ಪಂಗಡದ ಹುಡುಗ ಎಂದು ತಿಳಿದಾಗ ಅದುವರೆಗೆ ಅತಿ ಮಮತಾಮಯಿಯಾಗಿದ್ದ ಬೀಚಿಯವರ ಹೆಂಡತಿ ಸಿಡಿಮಿಡಿಗುಟ್ಟುತ್ತಾರೆ.

ಆ ಹುಡುಗನ ತಂದೆ ತೀರಿಕೊಂಡಾಗ ಆತ ಬೀಚಿಯವರಿಗೆ ಪತ್ರವೊಂದನ್ನು ಬರೆದು ‘ಇನ್ನು ತನಗೆ ನೀವೇ ತಂದೆ’ ಎಂದು ಹೇಳಿದ್ದನ್ನು ಓದಿದಾಗ ಬೀಚಿ ಹಾಗೂ ಅವರ ಮಡದಿ ಇಬ್ಬರೂ ಕಣ್ಣೀರು ಸುರಿಸುತ್ತಾರೆ.

ಆದರೆ ಮರುಘಳಿಗೆಯೇ ಬೀಚಿಯವರ ಮಡದಿ, “ಆ ಹುಡುಗ ಕರ್ಮ ಮಾಡಿ ಸೀದ ನಮ್ಮ ಮನೆಗೆ ಬಂದರೆ ಹ್ಯಾಗ್ರೀ? ಉತ್ತರಕ್ರಿಯೆ ಮಾಡಿದವರು ವರ್ಷದ ತನಕ ಬರಬಾರದು” ಎನ್ನುತ್ತಾರೆ.

ಬೀಚಿ: “ಬಂದರೇನಾಗ್ತದೆ?”

“ಬಂದರೇನಾಗ್ತದೆ! ಮಕ್ಕಳೂ, ಮರಿ ಇರೋ ಮನಿ, ನಮಗೆ ಅರಿಷ್ಟ ಬಡೀತದೆ”

“ನಿನಗೆ ಬುದ್ಧಿ ಇದೆಯೇ? ನೀನು ಮನುಷ್ಯಳೇನೆ? ತಂದೆ ಸತ್ತ ಹುಡುಗ, ಮೇಲೆ ನಿರ್ಗತಿಕ, ನೀವೇ ತಂದೆ ಎಂದು ಬರೆದಾನೆ, ನಾನವನ್ನ ಹೋಗೂ ಅನ್ನಲಾ? ಅವನು ಎಲ್ಲಿಗೆ ಹೋಗಬೇಕು?”

“ಬ್ಯಾರೆ ಇನ್ಯಾರ ಮನಿಗಾದರೂ ಹೋಗಲಿ. ನಮಗೇನು ಬಂಧು ಅಲ್ಲ, ಬಳಗ ಅಲ್ಲ. ನಮಗೂ ಎರಡು ಮಕ್ಕಳಿವೆ. ಅವಕ್ಕೇನಾದರೂ ಕಂಣೇ ನೋಯಲಿ, ಮೂಗೇ ನೋಯಲಿ…”

ಈ ಘಟನೆಯನ್ನು ಅವಲೋಕಿಸಿದರೆ ಬೀಚಿಯವರ ಮಡದಿ, ತಾಯಿಯೊಬ್ಬಳಿಗೆ ಸಹಜವಾದ  ಮುತುವರ್ಜಿಯನ್ನು ತೋರಿದ್ದು ಕಾಣುತ್ತದೆ. ತನ್ನ ಮಕ್ಕಳ ನೆಮ್ಮದಿಯನ್ನು, ರಕ್ಷಣೆಯನ್ನು ಆಕೆ ಪ್ರಥಮ ಆದ್ಯತೆಯಾಗಿ ಕಂಡಿದ್ದು ಕಾಣುತ್ತದೆ. ಆದರೆ, ಸಾಮಾನ್ಯವಾಗಿ ಮಮತಾಮಯಿಯಾದ, ಪರರ ಕಷ್ಟಕ್ಕೆ ಕಣ್ಣೀರುಗರೆಯುವ, ತನ್ನ ಕೈಲಾದ ನೆರವನ್ನು ನೀಡಲು ಸಿದ್ಧಳಾದ ಹೆಣ್ಣು ತನ್ನ ಶ್ರದ್ಧೆಯಿಂದಾಗಿ ಹಠಮಾರಿಯಾಗುವುದು, ಕೆಲವು ಅತಿರೇಕದ ಘಟನೆಗಳಲ್ಲಿ ಸ್ಕೀಝೋಫ್ರೇನಿಕ್ ಆಗಿ ವರ್ತಿಸುವುದು – ಇವಕ್ಕೆಲ್ಲಾ ಧಾರ್ಮಿಕ ಶ್ರದ್ಧೆಯೇ ಕಾರಣ.

ಇದೇ ಘಟನೆಯ ಮುಂದುವರೆದ ಭಾಗದಲ್ಲಿ ಒಂದು ಸಣ್ಣ ತಿರುವು ಎದುರಾಗುತ್ತದೆ. ತಂದೆಯಿಲ್ಲದ ಮಗನನ್ನು ಮನೆಯವರೆಲ್ಲರ ವಿರೋಧದ ನಡುವೆಯೂ ತಮ್ಮ ಜೊತೆ ಇಟ್ಟುಕೊಂಡು ಬೀಚಿ ಸಾಕುತ್ತಾರೆ. ಒಮ್ಮೆ ಆ ಹುಡುಗ ಮನೆಗೆ ಹೋಗುವ ಹಿಂದಿನ ದಿನ ರೇಷನ್ ಅಂಗಡಿಯಿಂದ ತನ್ನ ಊರಿಗೆ ಒಯ್ಯುವುದಕ್ಕಾಗಿ ಕೆಲವು ಸಾಮಾನುಗಳನ್ನು ತಂದಿಟ್ಟುಕೊಂಡಿರುತ್ತಾನೆ, ಬೀಚಿಯವರ ಪೆನ್ನು, ಪುಸ್ತಕಗಳು, ಅವರ ಮ್ಮಕಳ ಶೂಗಳನ್ನೆಲ್ಲ ಕದ್ದು ತನ್ನ ಬ್ಯಾಗಿನಲ್ಲಿ ತುಂಬಿಸಿಕೊಂಡಿರುತ್ತಾನೆ. ಆ ಹುಡುಗನ ಕಳ್ಳತನ ಬೆಳಕಿಗೆ ಬಂದಾಗ ಬೀಚಿಯವರು ನಿರ್ದಾಕ್ಷಿಣ್ಯವಾಗಿ ಆತನನ್ನು ಮನೆಯಿಂದ ಹೊರಗೆ ಹಾಕುತ್ತಾರೆ. “ಮಗನಂತೆ ನಿನ್ನನ್ನು ನೋಡಿಕೊಂಡು ಈಗ ಮಗನನ್ನು ಮನೆಯಿಂದ ಹೊರಗೆ ಹಾಕಿದಂತೆಯೇ ಹಾಕುತ್ತಿರುವೆ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಆದರೆ ಆಗ ಅವರ ಮಡದಿ ಹುಡುಗನ ಅಪರಾಧವನ್ನು ಕ್ಷಮಿಸುವಂತೆ ಬೀಚಿಯವರಿಗೆ ವಿನಂತಿಸುತ್ತಾರೆ. ಸಣ್ಣ ಹುಡುಗ ಮಾಡಿದ ತಪ್ಪು, ಮರೆತು ಬಿಡಿ, ಅವನನ್ನು ಮನೆಯಿಂದ ಹೊರಗೆ ಹಾಕಿದರೆ ಆತ ಎಲ್ಲಿಗೆ ಹೋದಾನು ಎಂದು ಕನಿಕರಿಸುತ್ತಾರೆ! ಅವರ ತಾಯಿ ಹೃದಯ ಸಹಜವಾಗಿ ಆ ಹುಡುಗನಿಗಾಗಿ ಮಿಡಿಯುತ್ತದೆ. 

ನಿಜ, ಹಿಚಿನ್ಸ್ ಗಮನಿಸಿದ್ದು ಸರಿ ಎನ್ನಿಸುತ್ತದೆ!

ಕೃಷ್ಣ ನನಗ್ಯಾಕೆ ಇಷ್ಟ

 

ಅಳಿಕೆಯ ಕಾಲೇಜಿನಲ್ಲಿ ಪಿಯು ಓದುವ ದಿನಗಳಲ್ಲಿ ನಡೆದ ಘಟನೆಯಿದು. ಅಲ್ಲಿ ಮುಂಜಾನೆ ಐದಕ್ಕೆ ದೊಡ್ಡ ಧ್ವನಿಯ krishna_0 ಮೈಕಿನಿಂದ ಹೊರಡುವ ಸುಪ್ರಭಾತದ ಧ್ವನಿಗೆ ಎಲ್ಲರೂ ಎಚ್ಚರವಾಗುತ್ತಿದ್ದೆವು. ಇರುವ ಹದಿನೈದು ನಿಮಿಷ ಸಮಯದಲ್ಲಿ ಹಲ್ಲು ತಿಕ್ಕಿ, ಮುಖ ತೊಳೆದು ನಿದ್ದೆಯ ಜೋಂಪನ್ನು ಹೋಗಲಾಡಿಸಿಕೊಂಡು ನೀಲಿ ನಿಕ್ಕರು, ಪೂರ್ಣ ತೋಳಿನ ಬನಿಯನ್ನು ತೊಟ್ಟುಕೊಂಡು ಹಾಸಿ ಕುಳಿತುಕೊಳ್ಳಲು ದಪ್ಪನೆಯದೊಂದು ಪುಟ್ಟ ಜಮಖಾನ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ಸಾಲಿನಲ್ಲಿ ಹೋಗುತ್ತಿದ್ದೆವು. ತೂಕಡಿಸುತ್ತಲೇ ಇಪ್ಪತ್ತೊಂದು ಓಂಕಾರ ಹೇಳಿ, ಶವಾಸನ ಬರುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿ ಯೋಗಾಸನವನ್ನು ಪೂರೈಸುತ್ತಿದ್ದೆವು.  ಇದೆಲ್ಲ ಮುಗಿದ ನಂತರ ಓದಿನ ಕೋಣೆಗೆ ರವಾನೆಯಾಗುತ್ತಿದ್ದೆವು. ಆಮೇಲೆ ಸ್ನಾನವನ್ನು, ತಿಂಡಿಯನ್ನೂ ಮುಗಿಸಿದ ನಂತರ ಮತ್ತೊಮ್ಮೆ ಪ್ರಾರ್ಥನೆಗೆ ಮಂದಿರದಲ್ಲಿ ಜಮಾಣೆಯಾಗಬೇಕಿತ್ತು. ಪ್ರಾರ್ಥನೆ ಮುಗಿದ ನಂತರ ನಮ್ಮ ಸಂಸ್ಥೆಯ ಹಿರಿಯರಲ್ಲಿ ಯಾರಾದರೂ ಒಂದಿಷ್ಟು ಹಿತವಚನಗಳನ್ನು ಹೇಳುತ್ತಿದ್ದರು.

ಅಂದು ಕೃಷ್ಣ ಜನ್ಮಾಷ್ಟಮಿ. ಕಾಲೇಜಿಗೆ ರಜೆಯಿತ್ತು. ಹೀಗಾಗಿ ಪ್ರಾರ್ಥನೆ ಮುಗಿದ ನಂತರ ಕಾಲೇಜಿಗೆ ಓಡಬೇಕೆಂಬ ಧಾವಂತವಿರಲಿಲ್ಲ. ಕೃಷ್ಣನ ಬಗ್ಗೆ ಮಾತನಾಡಲು ಹಿರಿಯರೊಬ್ಬರು ಶುರು ಮಾಡಿದರು. ಅವರು ಒಳ್ಳೆಯ ವಾಗ್ಮಿಗಳು. ಸಂಸ್ಥೆಯ ಮೌತ್ ಪೀಸ್ ಎಂಬಂತಿದ್ದರು.

ಭಾಷಣದ ಮೊದಲು ಒಂದು ಘಟನೆಯನ್ನು ವಿವರಿಸಿದರು. “ನಾನು ಹೀಗೆ ಮಂಗಳೂರಿನ ಕಾಲೇಜೊಂದರಲ್ಲಿ ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾಗ ಒಬ್ಬ ಹುಡುಗ ಎದ್ದು ನಿಂತು ಪ್ರಶ್ನೆ ಕೇಳಿದ. ಕೃಷ್ಣ ನಮಗೆ ಆದರ್ಶವಾಗಬೇಕು ಅನ್ನುತ್ತೀರಿ ಹಾಗಾದರೆ ನಾವೂ ಬೆಣ್ಣೆ ಕದಿಯುವುದು, ಗೋಪಿಕೆಯರ ವಸ್ತ್ರ ಅಪಹರಿಸುವುದು, ಸುಳ್ಳು ಹೇಳುವುದು ಮಾಡಬೇಕೆ ಎಂದು ಕೇಳಿದ. ನಾನು ಹೇಳಿದೆ ‘ಹು ಮಾಡಬಹುದು. ಆದರೆ ಅದಕ್ಕೆ ಮುನ್ನ ಆತನಂತೆ ಪೂತನಿಯ ವಿಷವನ್ನು ತಿಂದು, ಕಾಳಿಂಗ ಸರ್ಪವನ್ನು ಕೊಂದು, ಗೋವರ್ಧನ ಗಿರಿಯನ್ನು ಎತ್ತಿ ತೋರಿಸು’ ಎಂದು ಹೇಳಿದ. ಆ ಹುಡುಗ ಪಾಪ ಉತ್ತರ ತೋಚದೆ ಸುಮ್ಮನಾದ”

ನಾವೆಲ್ಲರೂ ‘ಅಬ್ಬ ! ಎಂಥಾ ಉತ್ತರ’ ಅಂತಂದುಕೊಂಡು ಬೆರಗಾದೆವು. ಅವರು ಕೃಷ್ಣನ ಬಾಲ ಲೀಲೆಗಳ ಬಗ್ಗೆ, ಅವನ್ನು ತಪ್ಪಾಗಿ ಅರ್ಥೈಸಿರುವ ಬಗ್ಗೆ ಒಂದು ಗಂಟೆ ಮಾತನಾಡಿದರು.

ಅವರ ಮಾತು ಕೇಳಿ ರೂಮಿಗೆ ಹಿಂದಿರುಗುವಾಗ ಒಂದು ತರ್ಲೆ ಪ್ರಶ್ನೆ ತಲೆಯಲ್ಲಿ ಮೊಳೆಯಿತು. “ಕೃಷ್ಣ ಲೀಲೆಗಳನ್ನು ಮಾಡುವುದಕ್ಕೆ ಆತನ ಹಾಗೆ ಶೌರ್ಯ ಸಾಹಸ ಪ್ರದರ್ಶನ ಮಾಡಿರಬೇಕು ಎನ್ನುವುದಾದರೆ ಆತನ ಒಳ್ಳೆಯ ಗುಣಗಳನ್ನು ಅನುಕರಿಸುವ ಮುನ್ನವೂ ಅಂತಹ ಸಾಹಸಗಳನ್ನು ಮಾಡಿರಬೇಕು ಅಲ್ಲವೇ?” ಪ್ರಶ್ನಿಸುವ ಧೈರ್ಯ ಸಾಲದೆ ಸುಮ್ಮನಾಗಿದ್ದೆ.

ಕೃಷ್ಣ ಎಂದರೆ ನನಗೆ ಈ ಕಾರಣಕ್ಕೇ ಇಷ್ಟವಾಗುವುದು. ಆತನನ್ನು ಈ ಧಾರ್ಮಿಕರು ಅದೆಷ್ಟೇ ಕಷ್ಟ ಪಟ್ಟು ವಿವರಣೆಗಳ, ಸ್ಪಷ್ಟನೆಗಳ ನೆರವನ್ನು ಪಡೆದು, ಅತಿರೇಕದ ತರ್ಕಗಳನ್ನು ಬಳಸಿ ಏನೇ ಪ್ರಯತ್ನ ಪಟ್ಟರೂ ದೇವರ ಸ್ಥಾನಕ್ಕೆ ಏರಿಸಲಾಗದು. ಆತ ಎಂದಿಗೂ ಆಪ್ತ ಸಖನೇ ಆಗಿ ಉಳಿಯುತ್ತಾನೆ.

ಮೊದಲೇ ಸ್ಪಷ್ಟ ಪಡಿಸುವೆ. ನಾನು ಕೃಷ್ಣನನ್ನು ಇಷ್ಟ ಪಡುವುದು, ಮಹಾಭಾರತದ ಒಂದು ಪಾತ್ರವಾಗಿ. ‘ನಾಗರ ಹಾವು’ ಸಿನೆಮಾದ ರಾಮಾಚಾರಿ ಪಾತ್ರವನ್ನು ಮೆಚ್ಚಿಕೊಂಡಂತೆ.

‘ಮುಖ ಊದಿಸಿಕೊಂಡಿರುವುದು ಅಧ್ಯಾತ್ಮವಲ್ಲ ಹೊಟ್ಟೆ ಕೆಟ್ಟಿರುವುದರ ಲಕ್ಷಣ’ ಎಂದು ವಿವೇಕಾನಂದರು ಹೇಳಿದ್ದರು. ಅಧ್ಯಾತ್ಮ, ಅಲೌಕಿಕ, ದೇವರು, ಧರ್ಮಗಳ ಪ್ರಸ್ತಾಪವಾದೊಡನೆ ಜನರು ಮಾಡುವ ಮುಖಭಾವವನ್ನು ನೆನೆದರೇ ಗಾಬರಿಯಾಗುತ್ತದೆ. ದೇವಸ್ಥಾನದಲ್ಲಿ ನಗುವ ಹಾಗಿಲ್ಲ, ಜೋಕ್ ಹೇಳುವುದು ನಿಷಿದ್ಧ ಎಂಬಂಥ ಕಟ್ಟಳೆಗಳು ಹುಟ್ಟಿದ್ದಾದರೂ ಏತಕ್ಕೆ? ಇಂತಹ ಗಾಂಭೀರ್ಯದ ಹರಳೆಣ್ಣೆ ಮುಖಗಳಿಂದಾಗಿ ಅಧ್ಯಾತ್ಮವೆಂಬುದು ಎಲ್ಲಾ ಸಂತಸವನ್ನು, ಜೀವನಾಸಕ್ತಿಯನ್ನು, ಜೀವರಸವನ್ನು, ತುಂಟತನವನ್ನು ಕೊಂದುಕೊಂಡ ನಂತರ ಹುಟ್ಟುವ ಸಂಗತಿ ಎಂಬಂತಾಗಿ ಹೋಗಿದೆ.

ಕೃಷ್ಣ ಯೋಗಿಯೂ ಹೌದು, ರಸಿಕನೂ ಹೌದು. ಆತ ಗೀತಾಚಾರ್ಯನೂ ಹೌದು, ಗೋಪಿಕೆಯರ ಮನದರಸನೂ ಹೌದು. ಆತ ದ್ರೌಪದಿಯ ಆಪ್ತ ಸಖನೂ ಹೌದು ಪ್ರಖರ ರಾಜತಾಂತ್ರಿಕನೂ ಹೌದು. ನಮ್ಮ ಧರ್ಮಗಳಲ್ಲಿ ವಿಪರೀತ ಕೊರತೆಯಿರುವ ಹುಡುಗಾಟಿಕೆ (playfulness) ಭರಿಸುವ ಪಾತ್ರ ಆತನದು.

ಈಗ ಆತನ ಮತ್ತೊಂದು ಜನ್ಮದಿನ ಬಂದಿದೆ. ಜನರು ಅವವೇ ಸ್ಪಷ್ಟನೆಗಳನ್ನು, ತರ್ಕಗಳನ್ನು ಮುಂದಿಟ್ಟು ಆತನ ಹುಡುಗಾಟಿಕೆಯನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ. ‘ಆತ ಬೆಣ್ಣೆ ಕದ್ದದ್ದು ಏಕೆಂದರೆ, ಆತನಿಗೆ ಹದಿನಾರು ಸಾವಿರದ ಎಂಟು ಮಂದಿ ಮಡದಿಯರು ಏಕೆಂದರೆ, ಆತ ಕುಟಿಲ ತಂತ್ರಗಳನ್ನು ಬಳಸಿ ಯುದ್ಧಕ್ಕೆ ಪ್ರೋತ್ಸಾಹ ಕೊಟ್ಟಿದ್ದು ಏಕೆಂದರೆ’ ಎಂದು ಪಂಡಿತರು ಆತನ ಜೀವಂತಿಕೆಯ ಸುತ್ತ ಅತಿ ಗಾಂಭೀರ್ಯದ, ದೈವತ್ವದ ಹಗ್ಗ ಹೊಸೆಯುತ್ತಲೇ ಹೋಗುತ್ತಾರೆ. ಆತ ಅವೆಲ್ಲವನ್ನೂ ಕ್ಷಣ ಮಾತ್ರದಲ್ಲಿ ನಿವಾರಿಸಿಕೊಂಡು ಕೊಳಲೂದುತ ಮುಗುಳ್ನಗುತ್ತಾ ಕೂರುತ್ತಾನೆ.

ಅದಕ್ಕೇ ನನಗೆ ಕೃಷ್ಣನೆಂದರೆ ಇಷ್ಟ.

ಅನಂತದ ಉಪಾಸನೆಯಲ್ಲಿ!

ಕಳೆದೊಂದು ವಾರದಿಂದ ಇನ್ಫಿನಿಟಿ ಎಂದು ಕರೆಯಲ್ಪಡುವ ‘ಅನಂತ’ದ ನಾನಾ ಮಜಲುಗಳನ್ನು ಕೌತುಕ ಹಾಗೂ ಬೆರಗಿನಿಂದ ಅರಿಯುತ್ತಿದ್ದೇನೆ. ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಅಪಾರ ಅಧ್ಯಯನ ಮಾಡಿರುವ ಕೇಂಬ್ರಿಜ್ ವಿಶ್ವ ವಿದ್ಯಾಲಯದ ಉಪನ್ಯಾಸಕ ಜಾನ್.ಡಿ.ಬರೋ ಬರೆದಿರುವ ‘ದಿ ಇನ್ಫೈನೈಟ್ ಬುಕ್’ ಕಣ್ಣೆದುರಿನ ದಿನನಿತ್ಯದ ಜಗತ್ತನ್ನು ಮರೆಸಿ ಕ್ಷಣಕಾಲ ಅಗ್ರಾಹ್ಯವಾದ, ಅಪರಿಮಿತವಾದ ಅನಂತದ ಝಲಕ್ ತೋರಿಸುತ್ತದೆ. ನಮ್ಮ ಸೀಮಿತ ಬುದ್ಧಿ ಗ್ರಹಿಸಲು ಸಾಧ್ಯವೇ ಇಲ್ಲದ ಅನಂತದ ವಿಷಯವನ್ನು ಆದಷ್ಟು ಕುತೂಹಲಕರವಾಗಿ, ಗಣಿತ, ಭೌತಶಾಸ್ತ್ರದಲ್ಲಿ ಸಾಮಾನ್ಯ ತಿಳುವಳಿಕೆಯಿರುವ ಪ್ರತಿಯೊಬ್ಬನೂ ಸವಿಯಬಹುದಾದ ಹದದಲ್ಲಿ ಬರೋ ವಿವರಿಸುತ್ತಾರೆ.

ಹಾಗೆ ನೋಡಿದರೆ ‘ಅನಂತತೆ’ ಅಥವಾ ಇನ್ಫಿನಿಟಿ ನಮಗೆ ಅಪರಿಚಿತವಾದ ಸಂಗತಿಯೇನಲ್ಲ. ದಿನನಿತ್ಯದ ಬದುಕಿನಲ್ಲೇ ನಾವು ಇದನ್ನು ನಾನಾ ಸಂದರ್ಭಗಳಲ್ಲಿ ಬಳಸುತ್ತೇವೆ. ಇರುಳಿನ ಆಗಸದಲ್ಲಿರುವ ನಕ್ಷತ್ರಗಳ ಸಂಖ್ಯೆ, ಸಮುದ್ರದ ದಡದಲ್ಲಿ ಚಾಚಿಕೊಂಡಿರುವ ಮರಳ ರಾಶಿಯಲ್ಲಿನ ಮರಳಿನ ಕಣಗಳ ಸಂಖ್ಯೆ, ಜಗತ್ತಿನಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೀಗೆ ನಮ್ಮ ಎಣಿಕೆಗೆ ನಿಲುಕದ, ಎಣಿಸಲಾಗದ ಸಂಗತಿಗಳನ್ನು ಅನಂತ ಎಂದು ಕರೆಯುತ್ತೇವೆ. ಈ ಬ್ರಹ್ಮಾಂಡ ಅನಂತವಾದದ್ದು ಎಂದೂ, ಭಗವಂತ ಅನಂತ, ಆದಿ ಅಂತ್ಯ ಇಲ್ಲದವನು ಎಂದು ಅನೇಕ ಭಕ್ತರು ಹೇಳುವುದನ್ನು ಕೇಳುತ್ತೇವೆ. ‘ಅನಂತ’ಪದದ ಬಳಕೆ ಅದೆಷ್ಟು ಯಾಂತ್ರಿಕವಾಗಿದೆಯೆಂದರೆ ಹಾಗೆಂದರೇನು ಎಂದು ಆಲೋಚಿಸುವ ಕನಿಷ್ಠ ಮಟ್ಟದ ಕುತೂಹಲವನ್ನೂ ಅದು ಉಳಿಸಿಲ್ಲ.

ಭಗವಂತನ ಸೃಷ್ಟಿಯಲ್ಲಿ ಮನುಷ್ಯ ಸೃಷ್ಟಿ ಅದ್ಭುತವಾದದ್ದು, ಅತಿ ಶ್ರೇಷ್ಠವಾದದ್ದು ಎನ್ನುವಂತೆ ಮನುಷ್ಯನ ಸೃಷ್ಟಿಯಲ್ಲಿ ಗಣಿತ ಅದ್ಭುತವಾದದ್ದು. ಸಂಖ್ಯೆಗಳ ಆಟ, ಓಟ, ಲೀಲೆ, ಪವಾಡಗಳು ಮಾನವನ ಅದ್ಭುತ ಸೃಷ್ಟಿ ಶಕ್ತಿಯ ಪ್ರತೀಕ. ತನ್ನ ಬಳಿಯಿರುವ ಕುರಿಗಳ ಸಂಖ್ಯೆಯನ್ನೊ, ತನ್ನ ಸಂಗಡಿಗರನ್ನೋ ಎಣಿಸುವ ಸಂಗತಿ ಮನುಷ್ಯನಿಗೆ ತಲೆ ನೋವು ತಂದಿತು. ಆತ ಒಂದು ಸಣ್ಣ ಉಪಾಯ ಕಂಡುಕೊಂಡ ಒಂದು ರಾಶಿ ಸಣ್ಣ ಕಲ್ಲುಗಳನ್ನು ಕೂಡಿಟ್ಟುಕೊಂಡ. ತನ್ನ ಕುರಿ ಹಿಂಡಿನಲ್ಲಿನ ಒಂದೊಂದೇ ಕುರಿಯನ್ನು ದೊಡ್ಡಿಗೆ ಅಟ್ಟುತ್ತಾ ಒಂದು ಕುರಿಗೆ ಒಂದು ಕಲ್ಲು ಎಂದು ಕಲ್ಲಿನ ರಾಶಿಯಲ್ಲಿಂದ ಒಂದೊಂದೇ ಕಲ್ಲನ್ನು ಇನ್ನೊಂದು ಚೀಲಕ್ಕೆ ಹಾಕಿದ. ಮರುದಿನ ಆ ಕುರಿಗಳನ್ನು ಮೇಯಿಸಲು ಹೊರಡಿಸುವಾಗ ಸಹ ಹೀಗೆ ಎಣಿಸಿಕೊಂಡು ಕುರಿಗಳ ಸಂಖ್ಯೆಯಲ್ಲಿ ಏರುಪೇರಾಗಿಲ್ಲವೆಂದು ಖಚಿತಪಡಿಸಿಕೊಳ್ಳತೊಡಗಿದ.

ಆದರೆ ಕ್ರಮೇಣ ತನ್ನ ಪದ್ಧತಿ ಅಷ್ಟು ಸಮರ್ಪಕವಲ್ಲ ಎಂಬ ಅರಿವು ಆತನಿಗಾಯಿತು. ಕಲ್ಲುಗಳನ್ನು ಸಂಗ್ರಹಿಸಿ ಎಣಿಕೆ ಮಾಡುವುದಕ್ಕಿಂತ ತನ್ನ ಕೈ ಬೆರಳುಗಳನ್ನು ಬಳಸಿಕೊಂಡು ಎಣಿಸಲು ಶುರು ಮಾಡಿದ. ಮುಂದೆ ಆತನ ತಿಳುವಳಿಕೆ ಬೆಳೆಯುತ್ತ ಸಂಖ್ಯೆಗಳು ರೂಪು ಗೊಂಡವು. ಕೈ ಬೆರಳುಗಳ ಸಂಖ್ಯೆ ಹತ್ತು ಇದ್ದುದರಿಂದ ದಶಮಾಂಶ ಎಣಿಕೆ ಪದ್ಧತಿ ಜನಪ್ರಿಯವಾಯಿತು. ನಾವಿಂದು ಬಳಸುವ ಸಂಖ್ಯಾ ಪದ್ಧತಿಯೂ ಸಹ ಸೊನ್ನೆಯಿಂದ(೦) ಶುರುವಾಗಿ ಒಂಭತ್ತು(೯)ರವರೆಗಿನ ಹತ್ತು ಚಿಹ್ನೆಗಳನ್ನು ಬಳಸಿಕೊಂಡು ರೂಪುಗೊಂಡಿದೆ. ನಮ್ಮ ಎಣಿಕೆ ಸೊನ್ನೆಯಿಂದ ಒಂಭತ್ತರವರೆಗೆ ಚಿಹ್ನೆಗಳನ್ನು ಬಳಸಿ ಮುಂದಿನ ಎಣಿಕೆಗೆ ಈ ಒಂಭತ್ತು ಚಿಹ್ನೆಗಳನ್ನು ಸೂಕ್ತವಾಗಿ ಪುನರಾವರ್ತಿಸುವ ಮೂಲಕ ಎಣಿಕೆಯನ್ನು ಮುಂದುವರೆಸುತ್ತೇವೆ. ಒಂದು ವೇಳೆ ಮನುಷ್ಯನ ಕೈಗಳಲ್ಲಿ ಹನ್ನೆರಡು ಬೆರಳುಗಳಿದ್ದಿದ್ದರೆ!

ಇವೆಲ್ಲವೂ ತೀರಾ ಸಾಮಾನ್ಯ ಸಂಗತಿಗಳಾದರೂ, ಇವುಗಳ ಬಗ್ಗೆ ತಿಳಿಯುವುದರಿಂದ ಯಾವ ರೋಮಾಂಚನವೂ, ಬೆರಗೂ ಉಂಟಾಗದಿದ್ದರೂ, ಇದುವರೆಗೂ ಕೇಳಿಕೊಂಡಿರದಿದ್ದ ಒಂದು ಪ್ರಶ್ನೆ ಸಡನ್ನಾಗಿ ಸಂಖ್ಯೆಗಳ ಬಗೆಗಿನ ನಮ್ಮ ಕುತೂಹಲವನ್ನು ಬಡಿದೆಬ್ಬಿಸುತ್ತದೆ. ಸಂಖ್ಯೆಗಳ ಮಾಯಾ ಲೋಕದ ಬಾಗಿಲನ್ನು ತೆರೆಯುತ್ತದೆ. ೧,೨,೩,೪…. ಹೀಗೆ ನಮ್ಮ ಸಂಖ್ಯಾ ಪದ್ಧತಿಯಲ್ಲಿನ ಎಣಿಕೆ ಸಾಗುತ್ತದೆ. ಇದು ಮುಂದುವರೆದು ಎಲ್ಲಿಗೆ ಮುಟ್ಟುತ್ತದೆ? ನಮ್ಮ ಸಂಖ್ಯಾ ಪದ್ಧತಿಯ ಅಂತ್ಯ ಎಲ್ಲಿದೆ? ಅತಿ ದೊಡ್ಡದು ಎನ್ನಬಹುದಾದ ಸಂಖ್ಯೆ ಯಾವುದು? ಚಿಕ್ಕಂದಿನಲ್ಲಿ ತರಗತಿಯಲ್ಲಿ ಎಣಿಕೆಯನ್ನು ಕಲಿಯುವಾಗ ‘ತೊಂಭತ್ತೊಂಭತ್ತು, ನೂರು’ ಎಂಬಲ್ಲಿಗೆ ನಮ್ಮ ಎಣಿಕೆಯನ್ನು ನಿಲ್ಲಿಸಿ ನೂರು ಅತಿ ದೊಡ್ಡ ಸಂಖ್ಯೆ ಭಾವಿಸಿ ಇನ್ನು ಮುಂದೆ ಎಣಿಸುವ ಕಷ್ಟವಿಲ್ಲ ಎಂದೋ, ಮಗ್ಗಿಗಳನ್ನು ಉರುಹಚ್ಚುವಾಗ ಇಪ್ಪತ್ತರವರೆಗೆ ತಲುಪಿ ನಿಟ್ಟುಸಿರಿಟ್ಟಿದ್ದನ್ನೋ ನೆನಪಿಸಿಕೊಳ್ಳಿ. ನಾವು ಅತಿ ದೊಡ್ಡ ಸಂಖ್ಯೆ ಎಂದು ಯಾವುದನ್ನು ಕರೆಯುತ್ತೇವೆಯೋ, ಅದು ಅತಿ ದೊಡ್ಡ ಸಂಖ್ಯೆಯಾಗಬೇಕಿಲ್ಲ. ಆ ಸಂಖ್ಯೆಗೆ ಒಂದು ಕೂಡಿದ ತಕ್ಷಣ ಅದಕ್ಕಿಂತ ದೊಡ್ಡ ಸಂಖ್ಯೆ ಸೃಷ್ಟಿಯಾಗುತ್ತದೆ. ಒಂದು ರೈಲು ಡಬ್ಬಿಯನ್ನು ದಾಟಿದರೆ ಮತ್ತೊಂದು, ಅದನ್ನು ದಾಟಿದರೆ ಮಗದೊಂದು ಹೀಗೆ ಕೊನೆಯಿಲ್ಲದ ರೈಲಿನಲ್ಲಿ ಓಡಿದ ಹಾಗೆ!

ಹೀಗೆ ಅಂತ್ಯವಿಲ್ಲದ ಸಂಖ್ಯಾ ಪದ್ಧತಿಯಲ್ಲಿನ ಅತಿದೊಡ್ಡ ಸಂಖ್ಯೆಯನ್ನು ಇನ್ಫಿನಿಟಿ ಎಂದು ಕರೆದುಕೊಂಡು ಗಣಿತದ ಲೆಕ್ಕದಲ್ಲಿ ಬಳಸುವುದು ವಾಡಿಕೆಯಾದರೂ ಇನ್ಫಿನಿಟಿಯ ನಿಜವಾದ ಅರ್ಥವನ್ನು, ಅದರ ನಿಜ ಸ್ವರೂಪವನ್ನು ಅರಿಯುವುದಕ್ಕೆ ಮನುಷ್ಯನಿಗಿನ್ನೂ ಸಾಧ್ಯವಾಗಿಲ್ಲ. ಇಂತಹ ಅಪರಿಮಿತ ‘ಅನಂತ’ವನ್ನು ತಮ್ಮ ಸೀಮಿತ ಬುದ್ಧಿಯ ಬಲದಿಂದ ಮಣಿಸಿಕೊಳ್ಳುವ, ಒಲಿಸಿಕೊಳ್ಳುವ ಪ್ರಯತ್ನ ತುಂಬಾ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಭಾಸ್ಕರಾಚಾರ್ಯ, ಅರಿಸ್ಟಾಟಲ್ ರಿಂದ ಹಿಡಿದು ನಮ್ಮ ರಾಮಾನುಜಂರವರೆಗೆ ಎಲ್ಲರೂ ‘ಅನಂತ’ವನ್ನು ಕುರಿತು ಧ್ಯಾನಿಸಿದ್ದಾರೆ. ಮನುಷ್ಯ ಅನಂತವನ್ನು ಅರ್ಥ ಮಾಡಿಕೊಳ್ಳುವ ಹಾದಿಯಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ದಾಟಿದ್ದಾನೆ. ಈ ಪಯಣದಲ್ಲಿನ ರೋಮಾಂಚಕ, ಕುತೂಹಲಕಾರಿ ಘಟ್ಟಗಳನ್ನು ನವಿರಾಗಿ ನಿರೂಪಿಸುತ್ತಾರೆ ಜಾನ್ ಬರೋ. ಕಾವ್ಯ, ನಾಟಕ, ಕಾದಂಬರಿ, ಧಾರ್ಮಿಕ ಗ್ರಂಥಗಳಿಂದ ಆಯ್ದುಕೊಂಡ ಕೊಟೇಶನುಗಳಿಂದ ನಿರೂಪಣೆಗೆ ಲವಲವಿಕೆ ಲಭಿಸಿದೆ.

‘ದಿ ಇನ್ಫೈನೈಟ್ ಪುಸ್ತಕ’ದ ಓದಿನಿಂದ ನಾನನುಭವಿಸಿದ ರೋಮಾಂಚನವನ್ನು, ಆ ಪುಸ್ತಕದಲ್ಲಿನ ವಿಸ್ಮಯಕಾರಿ ಸಂಗತಿಗಳನ್ನು ಮುಂದಿನ ಕೆಲವು ಪೋಸ್ಟುಗಳಲ್ಲಿ ಹಂಚಿಕೊಳ್ಳುವೆ.

ಜಾಹಿರ್‌ನ ಅನ್ವೇಷಣೆಯಲ್ಲಿ…

ಕಾಲೇಜು ಇದ್ದಾಗಲೇ ಚೆನ್ನ ಎನ್ನಿಸುತ್ತದೆ. ಎಲೆಕ್ಷನ್ ಕೌಂಟಿಂಗಿಗಾಗಿ ನಮ್ಮ ಕಾಲೇಜು ತೆಗೆದುಕೊಂಡಿರುವ ಕಾರಣಕ್ಕೆ ಒಂದು ತಿಂಗಳು ರಜೆ ಸಿಕ್ಕಿರುವಾಗ, ಪ್ರತಿದಿನದ ಅಂತ್ಯದಲ್ಲಿ ಮೂಡುವ ಭಾವನೆಯಿದು. ದಿನವಿಡೀ ಬಿಡುವಿದ್ದರೂ ಇಷ್ಟ ಪಡುವ ಕೆಲಸವನ್ನು ಮಾಡಲು ಸಾಧ್ಯವೇ ಆಗುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ನನಗೆ ಒಂದೇ ಒಂದು ಪುಸ್ತಕವನ್ನೂ ಓದಿ ಮುಗಿಸಲಾಗಲಿಲ್ಲ. ಕಾಲೇಜು ಇದ್ದಾಗಲೇ ಎಷ್ಟೋ ವಾಸಿ. ಪ್ರತಿದಿನ ಒಂದು ತಾಸಿನಂತೆ ಸೆಂಟ್ರಲ್ ಲೈಬ್ರರಿಯಲ್ಲಿ ಕೂತು ಎ.ಎನ್.ಮೂರ್ತಿರಾಯರ ಆತ್ಮಕತೆ ‘ಸಂಜೆಗಣ್ಣಿನ ಹಿನ್ನೋಟ’, ಅಗ್ನಿ ಶ್ರೀಧರ್‌ರ ‘ದಾದಾಗಿರಿಯ ದಿನಗಳು’ ಓದಿ ಮುಗಿಸಿದ್ದೆ. ಆದರೆ ಇಪ್ಪತ್ತು ದಿನದ ರಜೆಯಲ್ಲಿ ಹಿಡಿದ ಪುಸ್ತಕಗಳ್ಯಾವೂ ಮುಗಿದಿಲ್ಲ.

ಭೈರಪ್ಪನವರ ಕಾದಂಬರಿಯೊಂದನ್ನು ಓದಲು ತೊಡಗುವ ಮುನ್ನ ನಾಲ್ಕು ಬಾರಿ ದೀರ್ಘವಾಗಿ ಉಸಿರೆಳೆದುಕೊಂಡು ಕೂರುತ್ತೇನೆ. ಅವರ ಬರಹದ, ಆಲೋಚನೆಯ ಗಾಂಭೀರ್ಯಕ್ಕೆ ಸಾಟಿಯಾಗುವ ಗಾಂಭೀರ್ಯ ನನ್ನೊಳಗೂ ನೆಲೆಗೊಳಿಸಲು ಪ್ರಯತ್ನಿಸುತ್ತೇನೆ. ಮೊದಲ ಮಾತು, ಮುನ್ನುಡಿಗಳಲ್ಲಿ ಸಿಕ್ಕುವ ಒಳನೋಟ, ವಿಷಯ ವಸ್ತುವಿನ ಬಗೆಗಿನ ವಿವರಣೆಯ ಬಗ್ಗೆ ಕೊಂಚ ತಲೆ ಕೆಡಿಸಿಕೊಳ್ಳದಿದ್ದರೆ, ಅವರ ತಂತ್ರಗಾರಿಕೆ, ಭಾಷಾ ಶೈಲಿಯ ಬಗ್ಗೆ ಸ್ವಲ್ಪ ಮಟ್ಟಿಗೆ ಪರಿಚಯ ಸಿಕ್ಕದಿದ್ದರೆ ಓದಿನ ಪೂರ್ತಿ ಸುಖ ಸಿಕ್ಕುವುದಿಲ್ಲ.

ಈ ಬಾರಿ ಅವರ ‘ಅನ್ವೇಷಣೆ’ ಕಾದಂಬರಿಯನ್ನು ಓದಲು ತೊಡಗುವ ಮುನ್ನವೂ ಅದೇ ರೀತಿ ತಯಾರಾಗಿದ್ದೆ. ಈ ಕಾದಂಬರಿಯ ಕಥಾವಸ್ತು ಯಾವುದು ಎಂಬುದು ಲೇಖಕರೂ ಸ್ಪಷ್ಟ ಪಡಿಸಿರಲಿಲ್ಲವಾದ್ದರಿಂದ ಮುಕ್ಕಾಲು ಪಾಲು ಮುಗಿಯುತ್ತ ಬಂದರೂ ನನಗೆ ಅದು ತಿಳಿಯಲಿಲ್ಲ. ಆದರೆ ಕಥನ ಕ್ರಿಯೆಯಲ್ಲಿ ಅವರು ದುಡಿಸಿಕೊಂಡಿರುವ ತಂತ್ರಗಾರಿಕೆ ಅದ್ಭುತವಾಗಿದೆ. ಕಾದಂಬರಿಯ ಕೇಂದ್ರ ಪಾತ್ರವಾದ ವಿಶ್ವನಾಥನ ಜೀವನದ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ಕಥೆ ಸಾಗುತ್ತದೆ. ಕಾದಂಬರಿಯ ಯಾವ ಭಾಗದಲ್ಲೂ ಆ ವಿಶ್ವನಾಥ ಧುತ್ತೆಂದು ಓದುಗನಿಗೆ ಎದುರುಗೊಳ್ಳುವುದಿಲ್ಲ. ಆತ ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು, ಆತನೊಂದಿಗೆ ಒಡನಾಡಿದವರ ನೆನಪಿನ ನೇವರಿಕೆಯನ್ನು ಮಾತ್ರ ನಮಗೆ ಒದಗಿಸಲಾಗುತ್ತದೆ. ಬೇರೆ ಬೇರೆ ನಿರೂಪಕರು ಒದಗಿಸುವ ಮಾಹಿತಿಯ ಮೂಲಕ ನಾವು ವಿಶ್ವನಾಥನನ್ನು ನಮ್ಮ ಕಲ್ಪನೆಯಲ್ಲಿ ಸೃಷ್ಟಿಸಿಕೊಂಡು ಆತನ ಬೆನ್ನಟ್ಟಿ ಹೊರಡಬೇಕು. ಈ ತಂತ್ರಗಾರಿಕೆ ನನಗೆ ಮೆಚ್ಚುಗೆಯಾಯಿತು. ಜೊತೆಗೆ ಭೈರಪ್ಪನವರ – ಅತಿ ಜನಪ್ರಿಯವಾದ – ಭಾಷಾ ಕುಸುರಿ ಕೆಲಸದ ಬಗೆಗೂ ಉತ್ತಮವಾದ ಪರಿಚಯ ಸಿಕ್ಕಿತು. ಭಿನ್ನವಾದ ಪ್ರದೇಶಗಳ ಜನರ ಭಾಷಾ ಬಳಕೆಯ ಸೂಕ್ಷ್ಮಗಳು, ಭಿನ್ನ ಹಿನ್ನೆಲೆಯ, ಸಂಸ್ಕಾರದ ಜನರ ಪದ ಬಳಕೆಯಲ್ಲಿನ ಭಿನ್ನತೆ, ವಿಶಿಷ್ಟತೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಕಾದಂಬರಿಯಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಅಳವಡಿಸಿರುವುದು ಗಮನಕ್ಕೆ ಬಂದಿತು.

ಕಾದಂಬರಿ ಪೂರ್ತಿಯಾಗುವುದಕ್ಕೆ ಇನ್ನು ಮುವತ್ತು ಚಿಲ್ಲರೆ ಪುಟಗಳಿರುವುದರಿಂದ ನನಗೆ ಅದರ ಸತ್ವ ಸಂಪೂರ್ಣವಾಗಿ ದಕ್ಕಿದೆಯೋ ಇಲ್ಲವೋ ಹೇಳಲಾರೆ. ಅದರ ಕಥೆಯ ತಿರುಳನ್ನೂ ನೀಡಲಾರೆ. ಓದಲು ಯೋಗ್ಯವೋ ಇಲ್ಲವೋ ಎಂಬುದರ ಬಗ್ಗೆ ನನ್ನ ಅಭಿಪ್ರಾಯವನ್ನೂ ಕೊಡಲಾರೆ. ಆದರೆ ಇದುವರೆಗಿನ ಓದು ತುಸು ಬೋರಿಂಗ್ ಅನ್ನಿಸಿತು. ಅಂದ ಹಾಗೆ ಓದಬೇಕು ಎನ್ನುವ ಆಸಕ್ತಿಯಿರುವವರಿಗೆ ಮಾಹಿತಿ : ಈ ಕಾದಂಬರಿ ಡಿ.ಎಲ್.ಐ ತಾಣದಿಂದ ಇಳಿಸಿಕೊಂಡದ್ದು.

ಇದರ ಜೊತೆಗೆ ಕಳೆದ ಹತ್ತು ಹದಿನೈದು ದಿನಗಳಿಂದ ಇನ್ನೊಂದು ಪುಸ್ತಕ ಓದಲು ಶುರುಮಾಡಿದ್ದೆ. ಇದು ಪಾಲೋ ಕೊಯ್ಲೊ ಬರೆದ ‘ದಿ ಜಾಹಿರ್’ ಎನ್ನುವ ಪುಸ್ತಕ. ಪ್ರಸಿದ್ಧವಾದ ‘ಆಲ್ಕೆಮಿಸ್ಟ್’ನ ಲೇಖಕ ಆತ. ಆತನ ಕಾದಂಬರಿಗಳಲ್ಲಿ ಅತಿಯೆನಿಸುವ ಸ್ಪಿರಿಚ್ಯುಯಾಲಿಟಿ ಕಂಡು ಬಂದರೂ ಒಳ್ಳೆಯ ಓದಿನ ಅನುಭವನ್ನು ನೀಡುವಲ್ಲಿ ಆತನ ಕೃತಿಗಳ್ಯಾವೂ ವಿಫಲವಾಗಿಲ್ಲ. ಈತನ ‘ಆಲ್ಕೆಮಿಸ್ಟ್’ ನಾನು ಮೊದಲು ಓದಿದ್ದೆ. ಅನಂತರ ಆಲ್ಕೆಮಿಸ್ಟ್‌ಗಿಂತ ತೀರಾ ಭಿನ್ನವಾದ ಕಥಾವಸ್ತುವಿರುವ ‘ಇಲೆವೆನ್ ಮಿನಿಟ್ಸ್’ ಓದಿದ್ದೆ. ಈಗ ಈ ಜಾಹಿರ್ ನನ್ನೊಳಗೆ ಇಳಿಯುತ್ತಿದೆ.

ದಂಪತಿಗಳ ನಡುವೆ ಇರುವ ಪ್ರೀತಿ ಈ ಕಾದಂಬರಿಯ ವಸ್ತು. ಜಾಹಿರ್ ಎಂದರೆ ಎರಡು ಪರಸ್ಪರ ವಿರುದ್ಧ ಭಾವಗಳು, ಗುಣಗಳು. ಗಂಡ ಹೆಂಡಿರಲ್ಲಿ ಈ ವೈರುಧ್ಯ ಹೆಚ್ಚಾದಷ್ಟೂ ಅವರ ನಡುವಿನ ಸೆಳೆತ ಹೆಚ್ಚುತ್ತದೆ ಎನ್ನುವ ಹಳೆಯ ನಂಬಿಕೆಯ ಸುತ್ತ ಕಾದಂಬರಿ ಹಬ್ಬಿಕೊಂಡಿದೆ. ಇದರ ನಿರೂಪಕ ಒಬ್ಬ ಜನಪ್ರಿಯ ಲೇಖಕ ಆತನ ಬಗೆಗಿನ ವಿವರಣೆಗಳನ್ನು, ಆತನ ಜೀವನಾನುಭವವನ್ನು, ಆತನ ಆಲೋಚನೆಯ ಸ್ಥರವನ್ನು ಗಮನಿಸಿದರೆ ಆತ ಲೇಖಕ ಪಾಲೋ ಕೊಯ್ಲೊವಿನ ಪ್ರತಿಬಿಂಬದಂತೆ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ನಿರೂಪಕ ಜನಪ್ರಿಯತೆಯ ಉತ್ತುಂಗದಲ್ಲಿರುತ್ತಾನೆ. ಆತನ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿರುತ್ತವೆ. ಹೀಗಿರುವಾಗ ಒಂದು ದಿನ ಆತನ ಹೆಂಡತಿ ಹೇಳದೆ ಕೇಳದೆ ಆತನನ್ನು ಬಿಟ್ಟು ಹೋಗುತ್ತಾಳೆ. ಯಾವ ಕಾರಣವನ್ನೂ ನೀಡದೆ ಆತನಿಂದ ದೂರವಾಗುತ್ತಾಳೆ. ಅಲ್ಲಿಂದ ನಿರೂಪಕನ ಆತ್ಮಾವಲೋಕನ ಶುರುವಾಗುತ್ತದೆ. ಈಗ ನಾನು ತಲುಪಿರುವ ಪುಟದಲ್ಲಿ ಆತನ ಹೆಂಡತಿಯನ್ನು ಆತ ಮತ್ತೆ ಭೇಟಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಕಥೆಯ ತಿರುಳು ಇನ್ನೂ ಗ್ರಹಿಸಲಾಗಿಲ್ಲವಾದರೂ ಇದುವರೆಗಿನ ಓದಿನಲ್ಲಿ ಎಲ್ಲೂ ಬೇಸರ ಬಂದಿಲ್ಲ. ಬರಹಗಾರನೊಬ್ಬನ ಬದುಕಿನ ಅತಿ ಹತ್ತಿರದ ನೋಟವನ್ನು ಈ ಕಾದಂಬರಿ ಓದುಗನಿಗೆ ಒದಗಿಸುತ್ತದೆ. ತೀರಾ ಖಾಸಗಿಯಾಗಿ ಬರಹಗಾರನಲ್ಲಿ ಹುಟ್ಟಿ ಅರಳಿಕೊಳ್ಳುವ ಭಾವ ಬರವಣಿಗೆಗೆ ಇಳಿಯುವ ಪ್ರಯಾಸದಾಯಕ ಪ್ರಕ್ರಿಯೆಯ ವಿವಿಧ ಹಂತಗಳು, ಒಮ್ಮೆ ಅದು ಬರಹಗಾರನಿಂದ ಹೊರಬಂದ ಮೇಲೆ ಆತನಿಗೆ ಸಿಗುವ ನಿರಾಳತೆ, ತನ್ನ ಸೃಷ್ಟಿಯೊಂದಿಗೆ ಲೇಖಕ ಬೆಳೆಸಿಕೊಳ್ಳುವ ಸಂಬಂಧ, ಬರು ಬರುತ್ತಾ ಕೃತಿ ಕರ್ತೃವಿಗೇ ಅಪರಿಚಿತವಾಗುತ್ತಾ ಹೋಗುವ ವೈಚಿತ್ರ್ಯ, ಜನಪ್ರಿಯತೆ ಬರಹಗಾರನಿಗೆ ಒಡ್ಡುವ ಸವಾಲುಗಳು ಇವೆಲ್ಲವನ್ನು ಪಾಲೋ ಆತ್ಮಚರಿತ್ರೆಯ ಮಾದರಿಯಲ್ಲಿ ವಿವರಿಸುತ್ತಾ ಹೋಗಿದ್ದಾನೆ.

ಜಾಹಿರ್ ಓದುವಾಗ ಇದೇ ರೀತಿಯ ಕಥಾ ವಸ್ತುವಿರುವ ಜೋಗಿಯವರ ‘ಯಾಮಿನಿ’ ಕಾದಂಬರಿ ನೆನಪಾಯಿತು. ಅವೆರಡನ್ನೂ ಹೋಲಿಸಿದಾಗ ಪತ್ರಕರ್ತರಾದ ಜೋಗಿಯವರಲ್ಲಿ ಕಂಡ ಕೊರತೆ ಯಾವುದು ಎಂಬುದು ತಿಳಿಯಿತು. ಜೋಗಿ ಬರೆದದ್ದು ಏಕೆ ಜಾಹಿರ್ ನಷ್ಟು ಆಳಕ್ಕೆ ಇಳಿಯುವುದಿಲ್ಲ ಎಂಬುದು ಕಂಡಿತು.

ಇವೆರಡು ಪುಸ್ತಕಗಳಲ್ಲಿ ಕೈ ಮುಳುಗಿಸಿದ್ದೇನೆ. ಯಶವಂತ ಚಿತ್ತಾಲರ ‘ಕೇಂದ್ರ ವೃತ್ತಾಂತ’ದಲ್ಲಿ ಮೂಗು ತೂರಿಸಿರುವೆ.

ಬೆಳಗಿನ ಬೇಸರದಲ್ಲಿ ಈ ಓದಿನ ಅನುಭವವನ್ನು ಹಂಚಿಕೊಳ್ಳೋಣ ಅನ್ನಿಸಿತು. ಇದರಿಂದ ಓದಿನ ದಾಹ ಹೆಚ್ಚಬಹುದು ಎಂಬ ಸಣ್ಣ ಸ್ವಾರ್ಥವೂ ಸೇರಿ ಈ ಬ್ಲಾಗ್ ನೋಟು ಸಿದ್ಧವಾಯಿತು!

ಇನ್ನೊಂದಿಷ್ಟು ಪುಸ್ತಕಗಳು ನನ್ನ ಸಂಗ್ರಹಕ್ಕೆ

ಪುಸ್ತಕಗಳು ಎಂದರೆ ಮೊದಲಿನಿಂದಲೂ ಅದೊಂಥರ ಮಮಕಾರ. ಹೈಸ್ಕೂಲಿನಲ್ಲಿದ್ದ ದಿನಗಳಲ್ಲಿ ಮನೆಯವರೆಲ್ಲ ಸಿನೆಮಾ ನೋಡಲು ಹೊರಟರೆ ನಾನು ಟಿಕೆಟ್ ದುಡ್ಡು ಉಳಿಸಿ ಪುಸ್ತಕ ಕೊಂಡುಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಿದ್ದೆ. ಪುಸ್ತಕ ಕೊಂಡುಕೊಳ್ಳುವುದಕ್ಕೂ, ಸಂಗ್ರಹಿಸುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ವ್ಯತ್ಯಾಸವಿದೆ ಎಂಬುದು ಬಹುಬೇಗ ಅರಿವಾಯಿತು. ಅಷ್ಟರಲ್ಲಿ ನನ್ನ ವೈಯಕ್ತಿಕ ಸಂಗ್ರಹದಲ್ಲಿ ಅನೇಕ ಪುಸ್ತಗಳು ಜಮೆಯಾಗಿದ್ದವು.

ಈಗಲೂ ಪುಸ್ತಗಳ ‘ಶೋಕಿ’ ಕಡಿಮೆಯಾಗಿಲ್ಲ. ಲ್ಯಾಪ್ ಟಾಪಿನಲ್ಲಿ ಹೆಸರೂ ನೋಡಿಲ್ಲದ ನೂರಾರು ಪುಸ್ತಕಗಳು ಜಮೆಗೊಂಡಿವೆ.ತೆಳ್ಳಗಾದಾಗ ಬೇಕಾಗಬಹುದು ಎಂದು ಜೋಪಾನ ಮಾಡಿಡುವ ಪ್ಯಾಂಟಿನ ಹಾಗೆ ಎಂದೋ festival_of_books ಬೇಕಾಗಬಹುದೆಂದು ತೆಗೆದಿರಿಸಿದ ಪುಸ್ತಕಗಳ, ವೆಬ್ ಸೈಟ್ ಲಿಂಕುಗಳ ಸಂಗ್ರಹದ ಧೂಳು ಕೊಡವಲೂ ಸಾಧ್ಯವಾಗಿಲ್ಲ. ಜೊತೆಗೆ ದೊಡ್ಡ ದೊಡ್ಡ ಗ್ರಂಥಾಲಯಗಳ ಸಹವಾಸ. ಹೀಗಿದ್ದರೂ ಅಲ್ಲೆಲ್ಲೋ ಪುಸ್ತಕ ಮಾರಾಟವಿದೆಯಂತೆ ಎಂದರೆ ಕಿವಿ ನಿಮಿರುತ್ತವೆ. ಈ ತಿಂಗಳು ಅಕೌಂಟಿನಲ್ಲಿ ಬೇನಾಮಿ ಹಣ ಎಷ್ಟು ಉಳಿದಿದೆ ಎಂದು ಮೆದುಳು ಲೆಕ್ಕ ಹಾಕಲು ತೊಡಗುತ್ತದೆ.

ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಪ್ರದರ್ಶನವಿದೆ ಎಂಬ ಸುದ್ದಿ ಕಿವಿಗೆ ಬಿದ್ದಾಗ ಆದದ್ದೂ ಹೀಗೆ. ನಿನ್ನೆ ಸಂಜೆ ಈದ್ ಮಿಲಾದ್ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರು ರಸ್ತೆಗಳ ಮೇಲೆಲ್ಲಾ ಗಲಗಲ ಸದ್ದು ಮಾಡುತ್ತಾ, ಕುಣಿದಾಡುತ್ತಾ ಬಸ್ಸು, ಲಾರಿ, ಇತರೆ ವಾಹನಗಳಿಗೆಲ್ಲಾ ನಿಂತಲ್ಲೇ ನಿದ್ರೆ ಮಾಡುವ ಭಾಗ್ಯವನ್ನು ಕರುಣಿಸುತ್ತಾ ಹಬ್ಬವನ್ನಾಚರಿಸುತ್ತಿರುವಾಗ ನಾನು ಬಿ.ಎಂ.ಟಿ.ಸಿ ಬಸ್ಸೆಂಬ ಬಿಸಿಲುಗುದುರೆಯನ್ನು ಬೆನ್ನಟ್ಟುತ್ತಾ ನಡೆದು ಟೌನ್ ಹಾಲ್ ಎದುರು ತಲುಪಿಕೊಂಡಿದ್ದೆ.

ಎಲ್ಲಾ ಮಳಿಗೆಗಳಲ್ಲಿ ಕನಿಷ್ಟ ಶೇಕಡಾ ೨೫ರಷ್ಟು ರಿಯಾಯಿತಿಯನ್ನು ಪಡೆದುಕೊಂಡೇ ಹೋಗಿ ಎಂಬ ನೋಟ್ ನೋಡಿದೊಡನೇ ನನ್ನ ಹುಮ್ಮಸ್ಸು ಗಗನಕ್ಕೇರಿತು. ಒಂದು ಸಲ ಎರಡು ಸಾಲಿನಲ್ಲಿದ್ದ ಮಳಿಗೆಗಳನ್ನೆಲ್ಲಾ ಜಾಲಾಡಿ ಜೊಳ್ಳು ಗಟ್ಟಿಯನ್ನು ವಿಮರ್ಶಿಸಿ ಅನಂತರ ನಿಷ್ಕರ್ಷೆಯಾದ ಗಟ್ಟಿಯ ತೂಕವನ್ನೂ ಪರ್ಸಿನಲ್ಲಿದ್ದ ಗಾಂಧಿ ನಗೆಯ ನೋಟುಗಳನ್ನು ತೂಗಿ ನೋಡಿ ಒಂದಷ್ಟು ಪುಸ್ತಕಗಳನ್ನು ಕೊಂಡುಕೊಂಡೆ.

ಓದದೇ ಬಿಟ್ಟ, ಒಂದೆರಡು ಸಾಲು ದಾಟಿ, ಒಂದೆರಡು ಪುಟ ಮಗುಚಿ ಬಿಟ್ಟ ಅತೃಪ್ತ ಪುಸ್ತಕ ಸಮೂಹಕ್ಕೆ ಇವೊಂದಿಷ್ಟು ಸೇರ್ಪಡೆಯಾಗಿವೆ.

೧. ಹುಳಿಮಾವಿನ ಮರ – ಪಿ.ಲಂಕೇಶರ ಆತ್ಮಕತೆ
೨. ಗೃಹ ಭಂಗ – ಎಸ್.ಎಲ್.ಭೈರಪ್ಪ
೩. ಕೇಂದ್ರ ವೃತ್ತಾಂತ – ಯಶವಂತ ಚಿತ್ತಾಲ
೪. ೧೯೯೮ರ ವಿಜ್ಞಾನ ಸಾಹಿತ್ಯ – ಸಂಪಾದಕರು: ಸುಭಾಶ್ ಎನ್ ನೇಳಗೆ
೫. ೨೦೦೦ರ ವಿಜ್ಞಾನ ಸಾಹಿತ್ಯ – ಸಂಪ್: ಡಾ||ಸ.ಜ.ನಾಗಲೋಟಿ ಮಠ
೬. ಮೈಸೂರು ವಿವಿ ಪ್ರಸಾರಾಂಗ ಹೊರ ತಂದಿರುವ ಎಸ್.ವಿ.ರಂಗಣ್ಣನವರ ‘ಹಾಸ್ಯ’ ಎಂಬ ಪುಟ್ಟ ಪುಸ್ತಿಕೆ.

(ಚಿತ್ರ: http://latimesblogs.latimes.com/lanow/books/)

ಡೇವಿಡ್ ಐಕ್ ಎಂಬ ತಿಕ್ಕಲು ಪ್ರವಾದಿ

ಡೇವಿಡ್ ಐಕ್ ಎಂಬ ವಿಚಾರವಾದಿಯ ಡಾಕ್ಯುಮೆಂಟರಿ ಸಿನೆಮಾ ಹಾಗೂ ಕೆಲವು ಲೆಕ್ಚರ್‌ಗಳನ್ನು ನೋಡುತ್ತಿರುವೆ(ಇದು ಆತನ ಅಂತರ್ಜಾಲ ತಾಣ) . ಶಕ್ತಿಶಾಲಿಯಾದ ಕೆಲವೇ ಕೆಲವು ಮಂದಿ ಇಡೀ ಮಾನವ ಕುಲವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಷ್ಟ ಹುನ್ನಾರದ ಬಗ್ಗೆ ಆತ ಕಳೆದ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಲ್ಲಿ ಮಾತನಾಡುತ್ತಿದ್ದಾನೆ. ಸರಕಾರಗಳು, ಬ್ಯಾಂಕುಗಳು, ದೊಡ್ಡ ದೊಡ್ಡ ಸಂಸ್ಥೆಗಳು, ಸಮೂಹ ಮಾಧ್ಯಮಗಳುickeicke ಹೇಗೆ ಜನ ಸಮೂಹದ ಆಲೋಚನೆಯ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತಿವೆ, ಪ್ರಜ್ಞಾಪೂರ್ವಕವಾಗಿಯೋ ಇಲ್ಲವೇ ಅಪ್ರಜ್ಞಾಪೂರ್ವಕವಾಗಿಯೋ ಹೇಗೆ ನಾವೆಲ್ಲರೂ ಆ ಬಹುದೊಡ್ಡ ಕಾನ್ಸ್ಪಿರೆಸಿಯ ಪಾಲುದಾರರಾಗಿದ್ದೇವೆ ಅನ್ನೋದನ್ನು ವಿವರವಾದ ಸಂಶೋಧನೆಯ ಆಧಾರದಲ್ಲಿ ನಿರೂಪಿಸುತ್ತಾನೆ.

  ಫುಟ್ಬಾಲ್ ಆಟಗಾರನಾಗಿ, ಬಿಬಿಸಿಗೆ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಸುದ್ದಿವಾಚಕನಾಗಿದ್ದ ಡೇವಿಡ್ ಒಂದು ದಿನ ತನಗೆ ‘ಜ್ಞಾನೋದಯ’ದ ರೀತಿಯ ಅನುಭವವಾಗಿದೆ. ಈ ಜಗತ್ತಿನ ಪವಿತ್ರಾತ್ಮಗಳು ನನ್ನೊಂದಿಗೆ ಸಂವಾದಿಸುತ್ತಿವೆ. ಅವು ನನಗೆ ಮನುಕುಲವನ್ನು ಮುಂದೊದಗಲಿರುವ ಅವಘಡದಿಂದ ಪಾರು ಮಾಡಲು ನಿರ್ದೇಶಿಸುತ್ತಿವೆ. ಈ ಭೂಮಿಯನ್ನು ಉಳಿಸುವುದಕ್ಕಾಗಿ ನಾನು ‘ಸತ್ಯ’ವನ್ನು ಜನರೆಡೆಗೆ ತೆಗೆದುಕೊಂಡು ಹೋಗಬೇಕು. ನಾನೊಬ್ಬನೇ ಅಲ್ಲ, ಪ್ರತಿಯೊಬ್ಬರೂ ಸಹ ದೇವರ ಮಕ್ಕಳು ಎಂದು ಹೇಳಲು ಶುರು ಮಾಡಿದ. ಪಾಸಿಟಿವ್ ಆಲೋಚನೆ, ಪಾಸಿಟಿವ್ ವರ್ತನೆಗಳಿಂದ ಈ ಭೂಮಿಯಲ್ಲಿರುವ ಪಾಸಿಟಿವಿಟಿಯನ್ನು ಹೆಚ್ಚಿಸುವ ಮೂಲಕ ನಾವು ಭೂಮಿಯನ್ನು ಉಳಿಸಬಹುದು ಎಂದು ಟಿವಿ ಶೋಗಳ ಸಂದರ್ಶನಗಳಲ್ಲಿ ಹೇಳಿಕೊಳ್ಳಲು ಶುರು ಮಾಡಿದ.

‘ತಾನು ದೇವರ ಮಗ’ ಎನ್ನುವ ಈತನನ್ನು ಜನ ಲೇವಡಿ ಮಾಡಿದರು. ಈತ ಹೇಳುವ ಯಾವ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಳ್ಳಲು ಜನರು ಸಿದ್ಧರಿರಲಿಲ್ಲ. ಪ್ರಖ್ಯಾತ ಟಿವಿ ಶೋ ಒಂದರಲ್ಲಿ ಡೇವಿಡ್‌ನನ್ನು ಅಪಹಾಸ್ಯಕ್ಕೆ ಗುರಿಮಾಡಲಾಯಿತು. ಇಡೀ ರಾಷ್ಟ್ರದೆದುರು ಅಂದು ‘ನಿಮಗೆ ನಾನು ಸತ್ಯವನ್ನು ತಿಳಿಸಬಯಸುತ್ತೇನೆ.’ ಎಂದು ಹೇಳಿದ ಯುವಕನನ್ನು ಅವಮಾನಿಸಲಾಯಿತು. ಅಂದಿನಿಂದ ಡೇವಿಡ್ ಅಪಹಾಸ್ಯ, ಕೊಂಕು, ಲೇವಡಿ, ಅವಮಾನಗಳಿಲ್ಲದೆ ರಸ್ತೆಯಲ್ಲಿ ತಲೆಯೆತ್ತಿ ತಿರುಗಾಡುವುದು ಅಸಾಧ್ಯವಾಯಿತು. 

ಆದರೆ ಆತನಿಗೆ ತಾನು ಕಂಡುಕೊಂಡ ಸಂಗತಿಗಳ ಬಗ್ಗೆ ಸ್ಪಷ್ಟವಾದ ನಂಬಿಕೆಯಿತ್ತು. ತಾನು ನಡೆಯುತ್ತಿರುವ ದಾರಿಯ ಚಿತ್ರಣ ಸ್ಫುಟವಾಗಿ ಆತನೆದುರು ಇತ್ತು. ಜನರ ಅಸಡ್ಡೆ, ಹೀಗಳೆಯುವಿಕೆಯಿಂದ ಆತ ವಿಚಲಿತನಾಗಲಿಲ್ಲ. ಟಿವಿಗಳಿಗೆ ಸಂದರ್ಶನ ಕೊಡುವುದು ಕಡಿಮೆ ಮಾಡಿದ. ಏಕಾಂತದಲ್ಲಿ ತನ್ನ ಅಧ್ಯಯನ, ಸುತ್ತಾಟ, ಪ್ರಯೋಗ, ತನಿಖೆಗಳನ್ನು ಮುಂದುವರೆಸಿದ. ಸಾಲು ಸಾಲಾಗಿ ಪುಸ್ತಕಗಳನ್ನು ಬರೆದ. ತನ್ನ ಸಹಮನಸ್ಕರ, ತನ್ನ ಮಾತನ್ನು ಕೇಳುವ, ಆಲೋಚಿಸುವ ತಾಳ್ಮೆ ಉಳ್ಳವರ ಎದುರು ತನ್ನ ಆಲೋಚನೆಗಳನ್ನು ಹರಿಬಿಟ್ಟ. ದೇಶ ವಿದೇಶದ ವಿದ್ಯಮಾನಗಳ ಬಗ್ಗೆ, ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದವುಗಳಾಗಿ  ಕಾಣುವ ಘಟನೆಗಳ ಹಿಂದಿನ ಸತ್ಯದ ಬಗ್ಗೆ ಸರಳವಾಗಿ ಜನರಿಗೆ ವಿವರಿಸುತ್ತಾ ಹೋದ.

ಮೊದಲ ವಿಶ್ವಯುದ್ಧ, ಎರಡನೆಯ ವಿಶ್ವಯುದ್ಧ, ವಿಯಟ್ನಾಂ, ಇತ್ತೀಚಿನ ಇರಾಕ್ ಯುದ್ಧಗಳಲ್ಲಿ ಅಮೇರಿಕಾ ಮೇಲ್ನೋಟಕ್ಕೆ ಆಕಸ್ಮಿಕವಾಗಿ ಯುದ್ಧರಂಗವನ್ನು ಪ್ರವೇಶಿಸಿದಂತೆ ಕಂಡರೂ ನಾಲ್ಕೂ ಪ್ರಮುಖ ಯುದ್ಧದ ಹಿಂದೆ ಅಮೇರಿಕಾದ ಕೆಲವೇ ಕೆಲವು ‘ಎಲೀಟ್’ ಕುಟುಂಬಗಳು ನಡೆಸಿದ ಕರಾಮತ್ತು, ಅಭಿವೃದ್ಧಿ ಹೊಂದುತ್ತಿರುವ, ಬಡ ದೇಶಗಳ ಆರ್ಥಿಕತೆಯನ್ನು, ಕೃಷಿ ಸ್ವಾವಲಂಬನೆಯನ್ನು ಕಸಿದುಕೊಂಡು ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳ, ಒಪ್ಪಂದಗಳ ಅಡಿಯಾಳಾಗಿಸುವುದರ ಹಿಂದಿನ ಮರ್ಮ, ಇಡೀ ಜಗತ್ತಿಗೆ ಒಂದೇ ಸರಕಾರ, ಒಂದೇ ಸೇನೆ, ಒಂದೇ ಬ್ಯಾಂಕು ಸ್ಥಾಪಿಸಿ ಜನರ ಆರ್ಥಿಕತೆಯನ್ನು, ಅವರ ಆಲೋಚನೆ, ವರ್ತನೆ, ಆಸೆ- ಮಹತ್ವಾಕಾಂಕ್ಷೆ ಒಟ್ಟಿನಲ್ಲಿ ಇಡೀ ಮನುಷ್ಯ ಕುಲದ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ಸ್ಥಾಪಿಸುವ ಬೃಹತ್ ಹುನ್ನಾರವನ್ನು ವಿವರಿಸಿದ. ಈ ಪ್ರಕ್ರಿಯೆ ಭಾಗವಾಗಿ ರೂಪುಗೊಂಡ ವಿಶ್ವ ಸಂಸ್ಥೆ, ವಾಣಿಜ್ಯ ಒಪ್ಪಂದಗಳು, ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ, ಒಂದೇ ಕುಟುಂಬದ ಅಡಿಯಲ್ಲಿರುವ ಸಮೂಹ ಮಾಧ್ಯಮಗಳು, ಬೃಹತ್ ಕಾರ್ಖಾನೆಗಳು, ಬ್ಯಾಂಕುಗಳು, ಬೇಕೆಂದಾಗ ಆರ್ಥಿಕತೆಯನ್ನು ಸುಧಾರಿಸುವ, ಹಿಂಜರಿತ ಉಂಟು ಮಾಡುವ ತಂತ್ರಗಳು, ರಕ್ಷಣೆಗಾಗಿ ಜನರು ಸರಕಾರಗಳನ್ನು ಅನಿವಾರ್ಯವಾಗಿ ಅವಲಂಬಿಸಲು ಆ ಮೂಲಕ ಸರಕಾರ ತನ್ನ ಅಧಿಕಾರವನ್ನು, ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡುವ ಹುನ್ನಾರಗಳು ಇವೆಲ್ಲವನ್ನೂ ಸ್ಪಷ್ಟವಾಗಿ ನಿರೂಪಿಸ ತೊಡಗಿದ.

ಆತ ಹೇಳುತ್ತಿರುವುದರಲ್ಲಿ ಎಲ್ಲವೂ ಸತ್ಯ ಎಂದು ನಂಬ ಬೇಕಿಲ್ಲ. ಹಾಗೆ ನಂಬಿ ಎಂದು ಆತನೂ ಕೇಳುವುದಿಲ್ಲ. ನಮ್ಮ ಬುದ್ಧಿಶಕ್ತಿಯನ್ನು, ಆಲೋಚನೆಯ ದಿಕ್ಕನ್ನು, ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರಿ, ನಿದ್ರಿಸ ಬೇಡಿ ಎಚ್ಚೆತ್ತುಕೊಳ್ಳಿ ಎನ್ನುವುದಷ್ಟೇ ಆತನ ಸಂದೇಶ.

ಆತನ ವಿಚಾರಧಾರೆಯ ಆಳಕ್ಕೆ ಹೋಗಲು ಇನ್ನಷ್ಟು ಪುಸ್ತಕ ಓದಬೇಕಿದೆ. ಅಧ್ಯಯನ ಬೇಕಿದೆ.

[ ಇತ್ತೀಚಿಗೆ ಕಂಡ ವಿಡಿಯೋ ತುಣುಕೊಂದರಲ್ಲಿ ನನ್ನ ಗಮನಸೆಳೆದ ಹೇಳಿಕೆ ಇದು:

Just look at us. Everything is backwards; everything is upside down. Doctors destroy health ; lawyers destroy justice; universities destroy knowledge, governments destroy freedom; the major media destroy information and religions destroy spitituality.
                                                                                            - Mivhael Ellner

ಇತ್ತೀಚೆಗೆ ಓದಿ ಮುಗಿಸಿದ ಮಹಾತ್ಮ ಗಾಂಧಿಯವರ ‘ಹಿಂದ್ ಸ್ವರಾಜ್’ನಲ್ಲೂ ಈ ಹೇಳಿಕೆ ಪ್ಯಾರಲಲ್ ಆದ ಗಾಂಧಯ ವಿಚಾರಗಳು ಕಂಡಿದ್ದವು. ಗಾಂಧಿ ಆಧುನಿಕತೆಯ ಫಲಗಳಾದ ಲಾಯರುಗಳು, ವೈದ್ಯರು, ರೇಲ್ವೆ, ಯಂತ್ರೋಪಕರಣಗಳು, ದೊಡ್ಡ ನಗರಗಳು, ವಿಶ್ವವಿದ್ಯಾಲಯಗಳನ್ನು ಕಟುವಾಗಿ ವಿರೋಧಿಸುತ್ತಾರೆ. ]  

ಒಂದು ಬೆಳಗು

 

ಎಚ್ಚರವಾಯ್ತು. ರೆಕ್ಕೆಗಳಲ್ಲಿ ಹಿಂದಿನ ರಾತ್ರಿಯ ದಣಿವಿನ ಗೋರಿ. ನಿನ್ನೆಯ ಸ್ಮರಣೆಯ ನಾಜೂಕಾದ ಎಳೆ. ಗುಡ್ಡದ ತುದಿಯಿಂದ ಉರುಳಲು ಸಿದ್ಧವಾದ ಬಂಡೆಯಂಥ ಶಕ್ತಿ. ರೆಕ್ಕೆ ಫಡಫಡಿಸಿ ಕಣ್ಣು ನಿಚ್ಚಳವಾದರೂ ಬೆಳಕು ಹರಿದಿಲ್ಲ. ಅಲರಾಂ ಬಡಿದಿಲ್ಲ ಎನ್ನುವುದು ಸ್ಪಷ್ಟ. ರೂಮಿನ ಏಕೈಕ ಬೆಳಕಿನ ಕಿಂಡಿಯಾದ ಕಿಟಕಿಯ ಗಾಜಿನ ಮೇಲಿನ ಇಬ್ಬನಿ ಬೀದಿ ಟ್ಯೂಬ್ ಲೈಟಿನ ಬೆಳಕನ್ನು ಮಬ್ಬು ಮಬ್ಬಾಗಿಸಿ ಒಳಕ್ಕೆ ತಳ್ಳುತ್ತಿದೆ. ನಿದ್ರಾ ದೇವಿಯ ಅಮಲನ್ನು ಹೆಚ್ಚಾಗಿಸುವ ಹುನ್ನಾರದಂತೆ!

ಪಕ್ಕದಲ್ಲಿನ ರೂಂ ಮೇಟ್‌ಗೆ ಯಾವುದೋ ಸಿಹಿಗನಸು, ಅರಿವಿಲ್ಲದೆ ತುಟಿಯರಳಿದೆ. ಆತನ ಸಿಹಿಗನಸಿನ ವಿಳಾಸ ಹುಡುಕಹೊರಟು ನಾನೇಕೆ ಸಂಕಟಪಡಲಿ ಎಂದು ಕೊಂಡು ಕಾಲು ಜಾಡಿಸಿದೆ. ಅಸ್ತವ್ಯಸ್ತವಾದ ತಲೆಗೂದಲು, ಹಾಸಿಗೆ, ಬೆಡ್ ಶೀಟಿನಲ್ಲಿ ತಣ್ಣಗೆ ಯಾರೋ ಕುಳಿತಂತೆ ಕಾಣಿಸಿದ್ದು ಕನಸಲ್ಲ. ಕಣ್ಣಿನ ಪಿಸುರನ್ನು ಉಜ್ಜಿಕೊಳ್ಳುತ್ತಾ, ಲೈಟು ಹಚ್ಚಿ ಮಬ್ಬುಗತ್ತಲೆಯ ಧ್ಯಾನವನ್ನು ಭಂಗ ಪಡಿಸುವ ಮನಸ್ಸಾಗದೆ ತಡಕಾಡುತ್ತಾ ಕೈಗೆ ಸಿಕ್ಕ ಬ್ರಶಿಗೆ ಪೇಸ್ಟು ಮೆತ್ತಿ ಬಾಗಿಲು ತೆರೆಯುತ್ತಿದ್ದಂತೆಯೇ ಶೀತಲವಾದ ಗಾಳಿ ಪ್ರಿಯತಮೆಯನ್ನಪ್ಪುವ ಪ್ರೇಮಿಯ ಹಾಗೆ ಮುತ್ತಿಕೊಂಡದ್ದು ಆಹ್ಲಾದವೆನಿಸಿತು. ಕೊರೆಯುವ ನಲ್ಲಿ ನೀರಿನೆದುರು ಭಕ್ತನ ಹಾಗೆ ನಿಂತು ಪೂಜಾ ವಿಧಿ ಪೂರೈಸುವಾಗಲೂ ಮನಸ್ಸಿಗೆ ಶಾಂತಿ ಇಲ್ಲ. ಬಹುದೊಡ್ಡ ಕಾಯಕ ಯೋಗಿಯ ಹಾಗೆ ಇಡೀ ದಿನ ಪೂರೈಸಬೇಕಾದ ಕೆಲಸಗಳ ಪಟ್ಟಿ ತಯಾರಿಸುವಲ್ಲಿ ಮಗ್ನವಾಗಿದೆ. ಕೆಲಸಗಳ ನೆನಪಾಗುತ್ತಿದ್ದಂತೆಯೇ ರೆಕ್ಕೆಗಳಲ್ಲಿ, ಕಾಲುಗಳಲ್ಲಿ, ಪಿಸುರು ಕಳೆದ ಕಣ್ಣಿನಲ್ಲಿ ಮಾಂಸ ಖಂಡಗಳು ಬಿಗಿಯಾಗುತ್ತಿವೆ, ಮೆಲ್ಲಗೆ ಅಗೋಚರವಾದ ಕಾವು ಮೈಯನ್ನೆಲ್ಲಾ ವ್ಯಾಪಿಸಿ ಚಳಿಯನ್ನು ಹಿತವಾಗಿಸುತ್ತಿದೆ. ಕಣ್ಣಿನ ಪಿಸುರು ಕಳೆಯುತ್ತಿದ್ದ ಹಾಗೆ ಕಿವಿಯೂ ಬಾಗಿಲು ತೆರೆದಂತೆ ಕಾಣುತ್ತದೆ. ಆಗಲೇ ರಸ್ತೆಗಿಳಿದಿರುವ ಕೆಲವು ವಾಹನಗಳ ಇಂಜಿನ್ನಿನ ಸದ್ದು ಬಿಟ್ಟರೆ ಸುತ್ತಲೂ ನಮ್ಮದೇ ಕಲರವ. ಕಾಗೆ, ಕಾಜಾಣ, ಕೋಗಿಲೆ, ಗುಬ್ಬಿಗಳೆನ್ನದೆ ಎಲ್ಲವೂ ಚಿಲಿಪಿಲಿ ಗುಟ್ಟುತ್ತಿವೆ. ಇದ್ಯಾವುದೋ ಪ್ರಾತಃ ಕಾಲದ ಪ್ರಾರ್ಥನೆಯನ್ನು ನಾನು ಮರೆತುಬಿಟ್ಟೆನಾ ಎಂಬ ಆತಂಕದಲ್ಲಿ ಆಗಸ ದಿಟ್ಟಿಸುತ್ತೇನೆ, ರಾತ್ರಿಯ ರಕ್ಷಣೆಯ ಕರ್ತವ್ಯವನ್ನು ಮುಗಿಸಿದ ಸಂತೃಪ್ತಿಯಲ್ಲಿ ಚಂದಿರ ನಗುತ್ತಿದ್ದಾನೆ, ಮೆಲ್ಲಗೆ ಅಕ್ಬರನ ಸೈನ್ಯದ ಆಗಮನವನ್ನು ಸಾರುವ ಧೂಳಿನ ಹಾಗೆ ಚಿನ್ನದ ಕಿರಣಗಳು ದಾಳಿಯಿಡುತ್ತಿವೆ.

ಕನ್ನಡಿಯಲ್ಲಿ ಪ್ರತಿದಿನ ಕಾಣುವ ಮುಖದಲ್ಲೇನಾದರೂ ಬದಲಾವಣೆಯಾಗಿದೆಯಾ ಎಂದು ನೋಡಿಕೊಂಡದಾಯ್ತು. ಅಕಸ್ಮಾತ್ ಒಂದು ದಿನ ಕನ್ನಡಿ ನನ್ನ ಮುಖದ ಬದಲು ಬೇರೇನನ್ನೋ ತೋರಿಸಿಬಿಟ್ಟರೆ ಎಂಬ ಅನವಶ್ಯಕ ದುಗುಡವನ್ನು ಹತ್ತಿಕ್ಕಿ ಕನ್ನಡಿಯ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿಕೊಂಡೆ. ಕೆದರಿದ ಕೂದಲಿಗೊಂದು ನಿಯಮ ಹಾಕಿಕೊಟ್ಟು ಚಪ್ಪಲಿ ಮೆಟ್ಟಿಕೊಂಡು ಹೊರಗೆ ಕಾಲಿಟ್ಟೆ.

ಮುಖಕ್ಕೆ ರಾಚುವಂಥ ಶೀತಲ ಗಾಳಿಯನ್ನು ಆಸ್ವಾದಿಸಲೇ ಇಲ್ಲ, ಪಕ್ಷಿಗಳ ಬಳಗದ ವೇದ ಘೋಷಕ್ಕೆ ಕಿವಿಯಾಗಲೇ ಎಂದು ಗೊಂದದಲ್ಲಿ ಹೆಜ್ಜೆ ಹಾಕುತ್ತಿರುವಾಗ ಹೊರಟಿದ್ದು ಎಲ್ಲಿಗೆ ಎಂಬ ಅತಿ ಮಹತ್ವದ, ಅಪಾರ ಆಧ್ಯಾತ್ಮಿಕ ಮೌಲ್ಯದ ಪ್ರಶ್ನೆಯನ್ನು ಮನಸ್ಸು ಎಸೆಯಿತು. ಬೆಳ್‌ಬೆಳೆಗ್ಗೆ ಇಂಥ ಕಬ್ಬಿಣದ ಕಡಲೆಯಂಥ ಆಧ್ಯಾತ್ಮದ ಪ್ರಶ್ನೆಯೊಂದಿಗೆ ಮುಖಾಮುಖಿಯಾಗುವ ಧೈರ್ಯ ಸಾಲದೆ ಕಾಫಿ ಹೀರಿ ಬರಲು ಎಂದು ಉತ್ತರಿಸಿದೆ. ಕಾಫಿಯ ಆಮಿಷಕ್ಕೆ ಬಲಿಯಾಗಿ ಮನಸ್ಸು ಆ ಪ್ರಶ್ನೆಯನ್ನು ಆಚೆಗೆಸೆಯಿತು. ಅದು ಅನಾಥ ಪ್ಲಾಸ್ಟಿಕ್ ಕವರಿನ ಹಾಗೆ ಮಂಜು ಅಪ್ಪಿಕೊಂಡ ಟಾರ್ ರೋಡಿನ ಮೇಲೆ ತೇಲುತ್ತಾ ಹೋಯಿತು.

ಮೆಲ್ಲಗೆ ಕಣ್ಣು, ಕಿವಿ, ಚರ್ಮಗಳು ಕೆಲಸ ಚಾಲು ಮಾಡುವ ಹಾಗೆ ಹೊರಗಿನ ಜಗತ್ತಿನ ಗಿರಾಕಿಗಳನ್ನು ವಿಚಾರಿಸಿಕೊಳ್ಳಲು ಶುರುಮಾಡಿದವು. ಕಿವಿಗೆ ಮೌನದಲ್ಲಿ ಸದ್ದನ್ನು ಹುಡುಕುವ ಹಂಬಲ. ಅಪರಿಚಿತವೆನಿಸುವ ಹಕ್ಕಿಗಳ್ ಚಿಲಿಪಿಲಿಯದೇ ಸಾಮ್ರಾಜ್ಯವಾದರೂ ಬಜಾಜ್ ಆಟೋ ಇಂಜಿನ್ನು ಎಂಬ ಬಂಡಾಯಗಾರನನ್ನು ಕಡೆಗಣಿಸಲಾಗದು ಅದೆಷ್ಟೇ ದೂರವಿದ್ದರೂ ತನ್ನ ಇರುವನ್ನು ನೆನಪಿಸುವ ಸಾಲಕೊಟ್ಟ ಸಾಹುಕಾರನ ಹಾಗೆ ಗುಟುರು ಹಾಕುತ್ತದೆ. ‘ಇರು, ಒಮ್ಮೆ ನಮ್ಮ ದೊಡ್ಡ ಬಸ್ಸುಗಳು ರಸ್ತೆಗಿಳಿಯಲಿ ನಿನ್ನ ಗುಟುರು ಎಲ್ಲಿ ಹೋಗುತ್ತದೆ ನೋಡೋಣ’ ಎಂದು ರಸ್ತೆ ಹಂಗಿಸುತ್ತಿದೆ. ರಸ್ತೆ ಬದಿಯಲ್ಲಿ ನಿಂತ ಕಾರುಗಳ ಗಾಜಿನ ಮೇಲೆ ಇಬ್ಬನಿಯ ಪರದೆ. ರಾತ್ರಿಯಿಡೀ ಪರಿಶ್ರಮದಿಂದ ಕಟ್ಟಿಕೊಂಡ ಸಾಮ್ರಾಜ್ಯವನ್ನು ಸೂರ್ಯನ ರಶ್ಮಿಗಳು ಕುಟ್ಟಿ ಕೆಡವಲು ಕ್ಷಣ ಗಣನೆ ಶುರುವಾಗಿದೆ. ರಸ್ತೆಗಳೆಲ್ಲಾ ಮೈಮರೆತು ಮಲಗಿರುವ ಗಂಡಸಿನ ತೆರೆದ ಎದೆಯಂತೆ ಕಾಣುತ್ತಿವೆ. ಆಗೊಮ್ಮೆ ಈಗೊಮ್ಮೆ ಬಜಾಜ್, ಟಿವಿಸ್ ಇಂಜಿನ್ನುಗಳು ಸದ್ದು ಮಾಡುತ್ತವೆ.

ಹಾಸ್ಟೆಲಿನ ಸಾಮಾನ್ಯ ರೋಡನ್ನು ದಾಟಿ ಮುಖ್ಯ ರಸ್ತೆಗ ತಲುಪಿಕೊಳ್ಳುವಷ್ಟರಲ್ಲಿ ಸೂರ್ಯನ ಆಗಮನದ ಮುನ್ಸೂಚನೆಗಳು ಗಾಢವಾಗತೊಡಗಿವೆ. ಮುಖ್ಯ ರಸ್ತೆಯೂ ಗತ್ತಿನಲ್ಲಿ ಮಲಗಿದೆ. ಅದರ ಬೈತಲೆಗೆ ಬಳಿದ ಲೇನ್ ಲೈನುಗಳು, ಫುಟ್ ಪಾತಿನ ಹಳದಿ, ಕಪ್ಪು ಜೀಬ್ರಾ ಪಟ್ಟಿ ಇಬ್ಬನಿಯಲ್ಲಿ ನೆಂದು ಹೊಳೆಯುತ್ತಿವೆ. ಶಟರ್ ಎಳೆದ ಮಳಿಗೆಗಳ ಎದುರು ಪೇಪರ್ ಬಂಡಲುಗಳನ್ನು ಕಟ್ಟಿಕೊಳ್ಳುವ ಹುಡುಗರ ಮೇಳ. ಸೈಕಲ್ ಸ್ಟ್ಯಾಂಡುಗಳ ಸದ್ದು. ಪೇಪರುಗಳಿಗೆ ಪುರವಣಿಗಳನ್ನು ತೂರಿಸುತ್ತಾ, ಎಣಿಸಿ ಎಣಿಸಿಕೊಂಡು ಬಂಡಲು ಕಟ್ಟುವ ಕೆಲಸದಲ್ಲಿ ಇವರು ತಲ್ಲೀನರಾಗಿದ್ದರೂ ಕಿವಿಗೆ ಸಿಕ್ಕಿಸಿಕೊಂಡ ರೇಡಿಯೋ ಭಕ್ತಿ ಗೀತೆಗಳನ್ನೋ, ಭಾವಗೀತೆಗಳನ್ನೇ, ಭೀತ ಗೀತೆಗಳನ್ನೋ ಬಿತ್ತರಿಸುತ್ತಿದೆ. ರೇಡಿಯೋಗೆ ತನ್ನ ಕೇಳುತ್ತಿರುವವರಲ್ಲಿ ಎಷ್ಟು ಮಂದಿಗೆ ಒಂದೇ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಕೆಲಸವನ್ನು ಮಾಡುವ ಹುಮ್ಮಸ್ಸಿದೆಯೋ, ಎಷ್ಟು ಮಂದಿಗೆ ಕೆಲಸ ಮಾಡುವಾಗ ಯೋಚನೆಗಳು ಮೆರೆಯಬಾರದೆಂಬುದಕ್ಕಾಗಿ ರೇಡಿಯೋ ಸದ್ದು ಬೇಕೋ ಎಂಬುದು ತಿಳಿದಿಲ್ಲ. ಪೇಪರುಗಳಲ್ಲಿ ಹಿಂದಿನ ರಾತ್ರಿಯೇ ಅಂತರ್ಜಾಲದಲ್ಲಿ ಕುಪ್ಪಳಿಸಿ ಕುಳಿತ ಸುದ್ದಿಗಳ ನೆನಪು.

ಕಾಫಿ ಬಾರಿನ ಎದುರಿನ ಕಟ್ಟಡದ ಕಟ್ಟೆಯನ್ನು ಆವರಿಸಿರುವ ಮುತ್ಸದ್ಧಿಗಳಲ್ಲಿ ಆಗಲೇ ದೇಶದ ಭವಿಷ್ಯದ ಚಿಂತನೆ. ರಾಜಕೀಯ ವಿದ್ಯಮಾನಗಳ ಚರ್ಚೆಯ ಕಾರ್ಯಾಗಾರ. ಕಾಫಿ ತಂದುಕೊಡುವ, ಖಾಲಿ ಗಾಜು ತೆಗೆದುಕೊಂಡು ಹೋಗುವ ಹುಡುಗನಿಗೆ ಅರ್ಥವಾಗುತ್ತಿರುವ ನಿರರ್ಥಕತೆ ಈ ಪಂಡಿತರಿಗೆ ಪವಾಡ, ಉಡಾಫೆ. ‘ಏನಿದು ಪುನೀತ್ ರಾಜ್ ಕುಮಾರ್ ಸಂಗತಿ…?’ ‘ರಾಧಿಕಾ ಬಗ್ಗೆ ಗೊತ್ತಾಯ್ತಾ…’ ಎಂಬ ಜಾಹೀರಾತಿನಂತಹ ಸಾಲುಗಳಿಂದ ಕಾರ್ಯಾಗಾರದತ್ತ ಚಿತ್ತ ಹರಿದರೂ ಮನಸ್ಸಿಗೆ ಕಾಫಿಯ ಚಪಲ. ಕಾಫಿ ಹೀರಿ ವಾಪಸ್ಸಾಗುವಾಗ ಹಾಲು, ತರಕಾರಿ ಗಾಡಿಗಳ ವೇಗ, ರಾತ್ರಿಯಿಡಿ ಬಳಲಿ ಬಸವಳಿದ ಟೆಕ್ಕಿಗಳನ್ನು ಹೊತ್ತು ನುಗ್ಗುವ ಫೋರ್ಸ್ ಮಿನಿ  ಬಸ್ಸುಗಳ(ಹಿಂದಿದ್ದ ಇಂಡಿಕಾಗಳನ್ನು ಇವು ರಿಪ್ಲೇಸ್ ಮಾಡಿರುವುದು ನೆನಪಾದರೆ ಜಗತ್ತಿನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾನ್ಯ ಅರಿವಿದೇ ಎಂದೇ ಅರ್ಥ) ಆವೇಗದಿಂದ ಪಾರಾಗಿ ರೂಮು ಸೇರಿಕೊಂಡದ್ದಾಯ್ತು.

ಕನ್ನಡಿಯಲ್ಲಿ ಮತ್ತೆ ಮುಖ ಕಾಣುವ ಹಂಬಲ.  ಮರೆತುಹೋದ ಅಸೈನ್ ಮೆಂಟ್ ನೆನಪಾಗುತ್ತದೆ. ರೆಕ್ಕೆಗಳೆಲ್ಲೋ ಮಾಯವಾಗಿ ಬಿಟ್ಟಿವೆ.  

………………………..

ಶೇಷ ವಿಶೇಷ: ಜಾಗತೀಕರಣದ ಕೆಡುಕುಗಳ ಬಗ್ಗೆ, ಅದರ ಕರಾಳ ಮುಖದ ಬಗ್ಗೆ ಒಂದು ಕಾಲದಲ್ಲಿ ನಮ್ಮೆಲ್ಲಾ ಚಿಂತಕರು ತಲೆಕೆಡಿಸಿಕೊಂಡಿದ್ದರು. ಬಹಳ ಆಸ್ಥೆಯಿಂದ ಅದನ್ನು ಎದುರಿಸುವ ವಿಧಾನಗಳನ್ನು ಚರ್ಚಿಸುತ್ತಿದ್ದರು. ಪುಂಖಾನುಪುಂಖವಾಗಿ ಲೇಖನಗಳು ಮೂಡಿ ಬರುತ್ತಿದ್ದವು. ಆದರೆ ಇತ್ತೀಚೆಗೆ ಈಕೋ ಈ ಧ್ವನಿ ಅಷ್ಟಾಗಿ ಕೇಳುತ್ತಲೇ ಇಲ್ಲ. ಬಹುಶಃ ಜಾಗತೀಕರಣ ಎಂಬುದು ಮುಖ್ಯವಾಹಿನಿಯಾಗಿ ಹೋಗಿದೆಯೇನೋ! ಇಲ್ಲವೇ ಅದರ ವಿರುದ್ಧ ಮಾತಾಡುವವರು ಸಹ ಅದರ ಫಲಗಳ ಮೇಲೆ ಅವಲಂಬಿತರಾಗಿ ಭ್ರಷ್ಠರಾದ ಗಿಲ್ಟಿನಲ್ಲಿದ್ದಾರೇನೋ…
ಇತ್ತೀಚೆಗೆ ‘ಅಗ್ನಿ’ ಪತ್ರಿಕೆಯ ಅಂಕಣವೊಂದರಲ್ಲಿ ಜಯಂತ್ ಕಾಯ್ಕಿಣಿಯವರ ಪ್ರತಿಕ್ರಿಯೆಯೊಂದು ನನ್ನ ಗಮನ ಸೆಳೆಯಿತು. ಜಾಗತೀಕರಣದ ಬಗ್ಗೆ ಅತ್ಯಂತ ವಾಸ್ತವವಾದ ನೆಲೆಯಲ್ಲಿ ನಿಂತು ವಿಶ್ಲೇಷಿಸಿರುವ ರೀತಿ ನನಗೆ ಇಷ್ಟವಾಯಿತು. ನಿಮಗೂ ಇದು ಚಿಂತನೆಗೆ ಹಚ್ಚಬಹುದು ಎಂಬ ಉದ್ದೇಶದಿಂದ ಅದನ್ನಿಲ್ಲಿ ಕೊಟ್ಟಿರುವೆ:
“ ಯಾವುದನ್ನು ಹಳ್ಳಿ ಅಂತ ಬ್ರಾಕೆಟ್ ಹಾಕಿ ಕರೀತೇವಲ್ಲ. ಇದು ನಮ್ಮದು ಹೀಗಾಗಿ ಈ ಎಲ್ಲ ಗುಣಗಳು; ಅದು ಮುಗ್ಧತೆ ಇರಬಹುದು. ಕೌಟುಂಬಿಕ ವಿನೋದ ಇರಬಹುದು. ಕುಟುಂಬ ವತ್ಸಲಗುಣ ಇರಬಹುದು. ಈಗೆಲ್ಲ ಏನಾಗಿದೆ; ಜಾಗತಿಕರಣದ ಬಗ್ಗೆ ಮಾತಾಡಬೇಕಾದರೆ, ಇದನ್ನೆಲ್ಲ ಬಿಟ್ಟು ಉಳಿದದ್ದೇನನ್ನೋ ಮಾತಾಡುತ್ತೇನೆ. ಮಾತು, ಭಾಷಣ, ಮೋರ್ಚಾಗಳಿಂದ ಆಗುವಂಥದ್ದಲ್ಲ. ನಮ್ಮ ನೆಲೆಗಳಲ್ಲಿ ನಮ್ಮ ನಮ್ಮ ಕೆಲಸಗಳನ್ನು ತನ್ಮಯತೆಯಿಂದ ಮಾಡುವುದೇ ಎಂಥ ಜಾಗತೀಕರಣಕ್ಕೂ ಕೊಡುವಂಥ ಉತ್ತರ.”

ಸ್ಪೋರ್ಟ್ಸ್ ಡೇ ನೆನಪು ಹಾಗೂ ಶಾರುಖ್ ಸಿನೆಮಾ

ಬ್ಲಾಗ್ ಎಂಬ ವಿಲಕ್ಷಣ ಹೆಸರಿನ್ನು ಪರಿಚಯ ಮಾಡಿಕೊಳ್ಳುತ್ತಾ ಮೆಲ್ಲ ಮೆಲ್ಲಗೆ ಮ್ಯಾನುಯಲ್ ಓದಿ ವಾಷಿಂಗ್ ಮಶೀನು ಶುರು ಮಾಡುವ ಹಾಗೆ ಹಂತ ಹಂತವಾಗಿ ಬ್ಲಾಗಿನ ಅಂಗಳವನ್ನು ಪರಿಚಯಿಸಿಕೊಂಡು ನನ್ನದೇ ಒಂದು ಬ್ಲಾಗನ್ನು ತೆರೆದುಕೊಂಡು ಹೊಸ ಆಟಿಕೆ ಕಂಡ ಮಗುವಿನಂತೆ ಸಂಭ್ರಮಿಸುತ್ತಾ ಹತ್ತಾರು ಆಟಿಕೆಗಳನ್ನು ಸುತ್ತಲೂ ಹರಡಿಕೊಂಡು ಕಡೆಗೆ ಎಲ್ಲದರಲ್ಲೂ ಆಸಕ್ತಿ ಬತ್ತಿ ಹೋಗಿ ಎಲ್ಲವನ್ನೂ ಒದ್ದು ಹೊರಟು ಹೋಗಿದ್ದೆ. ಆದರೆ ಅದ್ಯಾವುದೋ ಮೋಹ ನನ್ನನ್ನು ಮತ್ತೆ ಬ್ಲಾಗಿಂಗಿಗೆ ಎಳೆದು ತಂದಿತು. ಈ ಸರಳವಾದ ಅನೂಹ್ಯವಾದ ಮೋಹವನ್ನು ಪಾಶ್ಚಾತ್ಯ ಸಂಶೋಧಕರು, ಮನೋವಿಜ್ಞಾನಿಗಳು ದೊಡ್ಡ ದೊಡ್ಡ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಪುಟಗಟ್ಟಲೆ ವ್ಯಾಖ್ಯಾನಗಳನ್ನು ಕೊಡುತ್ತಾರೆ! ನನ್ನ ಪಾಲಿಗಿದು ಅಪ್ಪಟ ಮಾಯಾವಿ ಮೋಹವಷ್ಟೇ.


ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಏಳುವ ಅಭ್ಯಾಸ ನನಗೆ ಮೊದಲಿನಿಂದಲೂ ಇಲ್ಲ. ಸುಮ್ಮನೆ ಸೂರ್ಯನೊಂದಿಗೆ ಪೈಪೋಟಿಗೆ ಬಿದ್ದು ಆತನಿಗಿಂತ ಮೊದಲೇ ಏಳಬೇಕೆಂದು ಪ್ರಯತ್ನಿಸುವುದರ ಮೂಲಕ ಆತನಿಗೆ ಪೈಪೋಟಿ ನೀಡಿ ಏಕೆ ಟೆನ್ಷನ್ ಮಾಡುವುದು ಎನ್ನುವ ಕೆಟಗರಿಯವನು ನಾನು. ಇವತ್ತು ಪ್ರ್ಯಾಕ್ಟಿಕಲ್ ಪರೀಕ್ಷೆ ಇದ್ದುದರಿಂದ, ಅದೂ ಬೆಳಿಗ್ಗೆ ಎಂಟಕ್ಕೇ ಇದ್ದುದರಿಂದ ಆರಕ್ಕೇ ಒಲ್ಲದ ಮನಸ್ಸಿನಿಂದ ಏಳಬೇಕಾಯ್ತು. ಚಳಿಗಾಲದಲ್ಲಿ ಎಂದೂ ಏಳಕ್ಕೆ ಮುಂಚೆ ಎದ್ದು ಅಭ್ಯಾಸವಿಲ್ಲದುದರಿಂದ ಕತ್ತಲೆ ಕವಿದ ಆಕಾಶವನ್ನು ನೋಡಿ ಆಗ ಆಗಲೇ ಆರುಗಂಟೆಯಾಗಿತ್ತು ಎಂಬುದನ್ನು ನಂಬಲು ಕಷ್ಟವಾಯಿತು. ಎರಡು ಮೂರು ವಾಚುಗಳನ್ನು, ಲ್ಯಾಪ್ ಟಾಪಿನ ಗಡಿಯಾರವನ್ನೂ ನೋಡಿ ಖಾತರಿ ಪಡಿಸಿಕೊಂಡ ಮೇಲೆಯೇ ಸಮಾಧಾನವಾದದ್ದು. ಏಕೆಂದರೆ ಗಡಿಯಾರದ ತಪ್ಪಿನಿಂದಾಗಿ, ಬ್ಯಾಟರಿಯ ಕಾರ್ಯಕ್ಷಮತೆಯ ಲೋಪದಿಂದಾಗಿ ನಾನು ನನ್ನ ಅಮೂಲ್ಯವಾದ ನಿದ್ದೆಯ ಸಮಯವನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಆರಕ್ಕೆ ಎದ್ದು ರೂಮಿನಿಂದ ಹೊರಗೆ ಕಾಲಿಟ್ಟರೆ ಮೂಳೆಯವರೆಗೆ ತಲುಪುವಷ್ಟು ಥಂಡಿ! ದಭದಭನೆ ಬಿಸಿನೀರು ಸುರಿದುಕೊಂಡು ರೂಮಿಗೆ ಬಂದು ಬೆಚ್ಚಗೆ ಕುಳಿತರೂ ಹೊರಗಿನ ಛಳಿ ಕೆಟ್ಟ ಕನಸಿನ ಹಾಗೆ ನೆನಪಾಗುತ್ತಿತ್ತು.


ಪರೀಕ್ಷೆ ಮುಗಿಸಿಕೊಂಡು ಅದಕ್ಕಾಗಿ ಎರಡು ದಿನ ಪಟ್ಟ ಕಷ್ಟವನ್ನು ನೆನೆಸಿಕೊಂಡು ಸೇಡು ತೀರಿಸಿಕೊಳ್ಳುವವನ ಹಾಗೆ ಯಾವ್ಯಾವ ಸಿನೆಮಾ ನೋಡಬೇಕು, ಏನೇನೆಲ್ಲಾ ತಿನ್ನಬೇಕು ಎಂದು ಮನಸ್ಸಿನಲ್ಲಿಯೇ ಪಟ್ಟಿ ಮಾಡಿಕೊಂಡು ಹಾಸ್ಟೆಲಿಗೆ ಧಾವಿಸುತ್ತಿರುವಾಗ ಕೋಟೆ ಹೈಸ್ಕೂಲಿನ ಬಯಲಿನಲ್ಲಿ ಹುಡುಗರು ಹುಡುಗಿಯರು ಜಮಾಯಿಸಿದ್ದು ಕಾಣಿಸಿತು. ಇಂದು ಅವರಿಗೆ ಸ್ಪೋರ್ಟ್ಸ್ ಡೇ ಇದ್ದಿರಬಹುದು ಬಯಲಿನಲ್ಲಿ ಓಟಕ್ಕಾಗಿ ಟ್ರ್ಯಾಕುಗಳನ್ನು ಬರೆದಿದ್ದರು. ವಾಲಿಬಾಲ್ ಕೋರ್ಟಿಗೆ ಗಡಿಗಳನ್ನು ಕೊರೆದು ನೆಟ್ ಕಟ್ಟಿದ್ದರು. ಅಲ್ಲಲ್ಲಿ ಹುಡುಗರು ಆಟದ ಉಡುಪು ಧರಿಸಿ ಕಸರತ್ತು ನಡೆಸುತ್ತಿದ್ದರು. ಕೆಲವರು ಮೈದಾನದ ಅಂಚಿನಲ್ಲಿ ನಿಂತಿದ್ದ ಪಾನಿಪೂರಿ, ಹಣ್ಣಿನ ಗಾಡಿಗಳಿಗೆ ಲಗ್ಗೆಯಿಟ್ಟಿದ್ದರು. ಇನ್ನೂ ಕೆಲವರು ತಂಪಾದ ನೆರಳಿರುವ ಜಾಗವನ್ನು ಆಯ್ದುಕೊಂಡು ಕುಳಿತು ಪಂದ್ಯಾವಳಿಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಒಡನೆಯೇ ಮನಸ್ಸು ನನ್ನ ಹೈಸ್ಕೂಲು ದಿನಗಳ ಆಟ ಓಟದ ನೆನಪಿನ ಕೋಣೆಗೆ ಜಿಗಿಯಿತು. ಮೂರ್ನಾಲ್ಕು ವರ್ಷಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಒಂದು ತಗಡಿನ ಹಾಳೆಯನ್ನೂ ಗೆಲ್ಲದಿದ್ದರೂ ಆ ಕ್ರೀಡಾಕೂಟಗಳ, ಅವುಗಳಲ್ಲಿ ಭಾಗವಹಿಸಿದ ಅನುಭವದ ಸರಕು ನನ್ನಲ್ಲಿ ಹೇರಳವಾಗಿದೆ. ನಾಲ್ಕು ಮಂದಿಯ ರಿಲೇ ಓಟದಲ್ಲಿ ನಮ್ಮ ಶಾಲೆಯ ಮೂರು ಮಂದಿ ವೇಗದೂತ ಓಟಗಾರರ ಪರಿಶ್ರಮವನ್ನೂ, ಕೌಶಲ್ಯವನ್ನೂ, ಹೋರಾಟವನ್ನು ಯಶಸ್ವಿಯಾಗಿ ಹಾಳು ಮಾಡಿದ ಕೀರ್ತಿ ನಾಲ್ಕನೆಯವನಾದ ನನಗೆ ಸಂದಿತ್ತು. ರನ್ನಿಂಗ್ ರೇಸಿನಲ್ಲಿ ಕಣ್ಣು ಕತ್ತಲೆ ಬರುವಷ್ಟು ಜೋರಾಗಿ ಓಡಿದರೂ ಕೊನೆಯಿಂದ ಎರಡನೆಯವನಾಗಿ ಗುರಿ ತಲುಪಿದ ಹಿರಿಮೆ ನನ್ನದು. ಖೊ ಖೊ ಎಂಬ ಗುಂಪು ಆಟದಲ್ಲಿ ಗುಂಪಲ್ಲಿ ಗೋವಿಂದ ಎನ್ನೋಣವೆಂದರೆ ನಮ್ಮ ಶಾಲೆಯ ಇಡೀ ಗುಂಪಿನಲ್ಲಿದ್ದವರೆಲ್ಲಾ ನನ್ನಂತೆಯೇ ಗೋವಿಂದ ಎನ್ನಲು ಬಂದವರು! ಈ ಆಟ ಓಟ, ಬೆವರು, ಮೈಕೈ ನೋವು, ಗಾಯಗಳೆಲ್ಲಾ ನನಗೆ ಹೇಳಿ ಮಾಡಿಸಿದ್ದು ಅಲ್ಲ ಅಂದುಕೊಂಡು ಕ್ರೀಡಾಂಗಣದಲ್ಲಿ ಪಡೆದ ಅದ್ಭುತ ವೈಫಲ್ಯದ ಕಹಿ ನೆನಪನ್ನು ಡಿಬೇಟು, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೃಂಭಿಸಿ ನಿವಾರಿಸಿಕೊಳ್ಳುತ್ತಿದ್ದೆ.


ಅಂದುಕೊಂಡ ಕೆಲಸವನ್ನು ಮಾಡಿಮುಗಿಸುವುದಕ್ಕೆ ನನಗೇಕೆ ಸಾಧ್ಯವಾಗುವುದಿಲ್ಲ ಎಂದು ಡೈರಿಯ ಅಸಂಖ್ಯಾತ ಪುಟಗಳಲ್ಲಿ ಕೊರೆದಿಟ್ಟ ಸಾಲುಗಳನ್ನು ಸುಳ್ಳು ಮಾಡುವ ಹಾಗೆ ಪಟ್ಟಾಗಿ ಕುಳಿತು ರಬ್ ನೇ ಬನಾ ದೀ ಜೋಡಿನೋಡಿ ಮುಗಿಸಿದೆ. ನನ್ನ ಬಗ್ಗೆ ನನಗೆ ಅಪಾರ ಹೆಮ್ಮೆಯೆನಿಸಿತು. ಹೀಗೇ ಸಣ್ಣ ಸಣ್ಣ ಯಶಸ್ಸುಗಳನ್ನು ನನ್ನದಾಗಿಸುತ್ತಾ ಹೋದರೆ ಮುಂದೊಂದು ದಿನ ಯಶಸ್ಸಿಗೆ ಇಷ್ಟೇ ಮೆಟ್ಟಿಲುಎಂಬ ಟಾಪ್ ಸೆಲ್ಲಿಂಗ್ ಪುಸ್ತಕವನ್ನು ಬರೆಯುವಷ್ಟು ಯಶಸ್ವಿಯಾಗಬಹುದು ಅನ್ನಿಸಿತು. ಈ ಸಿನೆಮಾದ ಸ್ಕ್ರಿಪ್ಟು ಆಸ್ಕರ್‌ಗೆ ನಾಮಿನೇಟ್ ಆಗಿದೆ ಎಂದು ಗೆಳೆಯ ಹೇಳಿದಾಗ ಆತನ ಮಾತನ್ನು ಸಂಶಯಿಸಿ ಗೂಗಲಿಸಿದರೆ ಅವನ ಸ್ನೇಹಕ್ಕೆ ದ್ರೋಹ ಬಗೆದಂತಾಗುವುದೆಂದು ಯೋಚಿಸಿ ಸುಮ್ಮನಾದೆ. ಸಿನೆಮಾದ ಬಗ್ಗೆ ಏನಾದರೂ ಬರೆಯಬೇಕು ಎಂದುಕೊಂಡೆನಾದರೂ ಅದು ಥಿಯೇಟರುಗಳಿಂದ ಎತ್ತಂಗಡಿಯಾದ ಮೇಲೆ ನೋಡೋಣ ಎಂದುಕೊಂಡು ತಣ್ಣಗಾದೆ.

…………………………………………………………….

ಶೇಷ ವಿಶೇಷ: ತುಂಬಾ ಚಿಕ್ಕಂದಿನಿಂದಲೂ ಪ್ರಜಾವಾಣಿ ಪತ್ರಿಕೆಯನ್ನು ಓದುತ್ತಿದ್ದೆನಾದರೂ ತೀರಾ ಮೆಚ್ಚುವಂಥದ್ದು ಏನೂ ನನಗೆ ಆಗ ಕಂಡಿರಲಿಲ್ಲ. ಭಾನುವಾರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ರಾಮನ್ ಪ್ರಾಣ್ ಕಾರ್ಟೂನನ್ನೂ, ವಿಜ್ಞಾನ ವಿಸ್ಮಯಗಳನ್ನು ಓದುವುದಕ್ಕೆ ನನ್ನ ಆಸಕ್ತಿ ಸೀಮಿತವಾಗಿತ್ತು. ವಿಜಯ ಕರ್ನಾಟಕ ಬಿರುಗಾಳಿಯಂತೆ ಮುನ್ನುಗ್ಗುವ ಕಾಲಕ್ಕೆ ಸರಿಯಾಗಿ ಪತ್ರಿಕೆಯನ್ನು ಆಸಕ್ತಿಗಾಗಿ ಓದುವ ಅಭ್ಯಾಸವು ಬೆಳೆದಿತ್ತು. ಅಂಕಣ ಬರಹಗಳಿಂದಲೇ ಪತ್ರಿಕೆಯ ಓದು ಶುರು ಮಾಡುವ ನನಗೆ ಪ್ರಜಾವಾಣಿಯ ನಾಗೇಶ್ ಹೆಗಡೆಯವರ ಅಂಕಣ ಅಚ್ಚುಮೆಚ್ಚಿನದಾಗಿತ್ತು. ಉಳಿದವು ಅಷ್ಟು ಅರ್ಥವಾಗುತ್ತಿರಲಿಲ್ಲವಾದ್ದರಿಂದ ರುಚಿಸುತ್ತಿರಲಿಲ್ಲ.


ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಬಗ್ಗೆ ತುಂಬಾ ನೇರವಾಗಿ ಏಕಮುಖಿ ಅಭಿಪ್ರಾಯವನ್ನು ಬೆಂಬಲಿಸಿ ಬರೆಯುವ ಪ್ರತಾಪ್ ಸಿಂಹರ ಅಂಕಣ ಆಗ ಎಲ್ಲರಂತೆ ನನಗೆ ಇಷ್ಟವಾಗಿತ್ತು. ಭಾವನೆಗಳು ಉದ್ದೀಪನವಾಗುವಂತೆ, ಅಂಕಣ ಓದಿದ ನಂತರ ಕೆಚ್ಚು ಹುಟ್ಟುವಂತೆ ಮಾಡುವ ಶೈಲಿ ಆಗ ಪ್ರಿಯವಾಗಿತ್ತು.


ಆದರೆ ಇತ್ತೀಚೆಗೆ ಆಳವಾದ ಅಧ್ಯಯನವಿರುವ, ಸೂಕ್ಷ್ಮ ಒಳನೋಟಗಳಿರುವ, ಶಾಂತ ಮನಸ್ಸಿನಿಂದ ಬರೆದ ಲೇಖನಗಳು ನನ್ನ ಪ್ರಭಾವಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ನಾನು ಆಸಕ್ತಿಯಿಂದ ಓದಲು ಶುರು ಮಾಡಿರುವುದು ಕುಲ್ ದೀಪ್ ನಾಯರ್‌ರ ಅಂಕಣ ಬರಹ. ಇತ್ತೀಚಿನ ಅಂಕಣದಲ್ಲಿ ಅವರು ಪಾಕಿಸ್ತಾನದ ಸಮಸ್ಯೆಯನ್ನು ವಿಶ್ಲೇಷಿಸಿರುವ ಪರಿ ನೋಡಿ ಹೇಗಿದೆ

ಮೇಕಪ್ ಕಳಚಿದ ಹೀರೊಗಳು!

news-paper-man

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.

ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!

ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು.  ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ – ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ  ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.

ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!

Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು  ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.

………………
ಏನನ್ನೋ ಬರೆಯಲು ಹೊರಟು ಅದು ಮತ್ತೇನೋ ಆಗಿಬಿಟ್ಟ ನನ್ನ ಹಲವು ಬರಹಗಳ ಸಾಲಿಗೆ ಇದೂ ಸೇರುತ್ತದೆ. ಅಸಲಿಗೆ ನಾನು ಬರೆಯಬೇಕೆಂದಿದ್ದದ್ದು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು ಶಾರದಾ ಪ್ರಸಾದರು ನಿಧನರಾದಾಗ ಸಂಭಾವನೆಗೆ ಸಂಬಂಧಿಸಿದ ಹಾಗೆ ಬರೆದುಕೊಂಡಿದ್ದ ಹಸಿ ಹಸೀ ಸುಳ್ಳು ಹಾಗೂ ಇತ್ತೀಚಿಗಿನ ಮತಾಂತರ ಸಂವಾದದಲ್ಲಿ ಪ್ರಕಟವಾದ ತಾರಿಣಿಯವರ ಲೇಖನದ ಪ್ರಕರಣದ ಬಗ್ಗೆ. ಪ್ರತಿವಾರ ಪತ್ರಿಕೋದ್ಯಮದ ಆದರ್ಶಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಭಟ್ಟರು ಹೀಗೆ ಮಾಡಿರುವುದು ತಿಳಿದು ಅರಗಿಸಿಕೊಳ್ಳಲು ಕೊಂಚ ಕಷ್ಟವಾಯಿತು. ಹಿಂದೆ ಅವರ ಲೇಖನಗಳಲ್ಲಿನ ಎರರ್ಸ್ ಬಗ್ಗೆ ಓದಿದಾಗಲೂ ಹೀಗೇ ಅನ್ನಿಸಿತ್ತು. ಆ ಬಗ್ಗೆ ಬರೆಯೋಣ ಅಂತ ಹೊರಟು ಎಲ್ಲೆಲ್ಲೋ ತಲುಪಿ ಕಡೆಗೆ ಏನೋ ಆಗಿ ಹೋಯಿತು. ಮದುವೆ ಮುಗಿದ ಮೇಲೆ ನೋಡಿದರೆ ಮದುವೆ ಗಂಡೇ ಬದಲಾಗಿದ್ದಾನೆ ಎಂಬ ಪಾಡು!

ಹಕ್ಕಿಗೆ ಹಾಡು ನೆನಪಾಗಿದೆ!

ಹಕ್ಕಿಯ ಕೊರಳಿಗೆ ಮತ್ತೆ ಜೀವಬಂದಿದೆ. ಸುತ್ತಲಿನ ನಿಸರ್ಗಕ್ಕೆ ಹಸಿರು ಬಂದಿದೆ. ಹಕ್ಕಿ ಕೊರಳು ಬಿಚ್ಚಿ ಹಾಡುತ್ತಲಿದೆ…

ಹಕ್ಕಿಯು ಗಂಟಲು ತೆರೆದು ದನಿ ಹೊರಡಿಸಿದಾಗ ಹಾಡು ಮೈತಳೆಯುತ್ತದಾ ಇಲ್ಲವೇ ಹಾಡು ತಾನಾಗಿ ಕೃಪೆ ತೋರಿ ಹಕ್ಕಿಯ ಗಂಟಲು ತುಂಬಿ ಹೊರಹೊಮ್ಮುತ್ತದಾ ಎಂದು ನನ್ನ ಕೇಳಿಕೊಳ್ಳುತ್ತೇನೆ.

ನಿಶ್ಚಲವಾದ ಮರದ ಕೊಂಬೆಯ ಮೇಲೆ ನೆಮ್ಮದಿಯಿಂದ ಕೂತು ಧ್ವನಿ ಪೆಟ್ಟಿಗೆ ಬಿಚ್ಚಲು ಶುರುಮಾಡಿದ ಹಕ್ಕಿಗೆ ಬಿಟ್ಟು ಬಂದ ಗೂಡು, ಅದರೊಳಗಿನ ಹಸಿವಿನ ಆಕ್ರಂದನ ಕೇಳಿದರೆ ಹಾಡಿನ ಶೃತಿಯ ನೆನಪು ಉಳಿದೀತೆ ಎಂದು ವಿಸ್ಮಯಗೊಳ್ಳುತ್ತೇನೆ.

ಹಕ್ಕಿಯ ಹಾಡಿನ ಇಂಪಿನ ಮೇಲೆ ತನ್ನ ರೆಕ್ಕೆಗೇ ಅಸೂಯೆ ಹುಟ್ಟಿದರೆ  ಮನಸ್ಸು ನೆಮ್ಮದಿಯಿಂದಿರಬಹುದೇ, ಹಾಡು, ಹಾರಾಟ ಸಾಮರಸ್ಯವ ಕಂಡುಕೊಳ್ಳಲು ಸಾಧ್ಯವೆ ಎಂದು ಚಿಂತಿಸುತ್ತೇನೆ.

ಉತ್ತರ ಕೊಡುವ ಯಾವ ಗೋಜಿಗೂ ಹೋಗದೆ ಹಕ್ಕಿ ಹಾಡುತ್ತದೆ, ಕೊರಳು ಬಿಚ್ಚಿ ಹಾಡುತ್ತದೆ!