ಪುಸ್ತಕಗಳು ಎಂದರೆ ಮೊದಲಿನಿಂದಲೂ ಅದೊಂಥರ ಮಮಕಾರ. ಹೈಸ್ಕೂಲಿನಲ್ಲಿದ್ದ ದಿನಗಳಲ್ಲಿ ಮನೆಯವರೆಲ್ಲ ಸಿನೆಮಾ ನೋಡಲು ಹೊರಟರೆ ನಾನು ಟಿಕೆಟ್ ದುಡ್ಡು ಉಳಿಸಿ ಪುಸ್ತಕ ಕೊಂಡುಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಿದ್ದೆ. ಪುಸ್ತಕ ಕೊಂಡುಕೊಳ್ಳುವುದಕ್ಕೂ, ಸಂಗ್ರಹಿಸುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ವ್ಯತ್ಯಾಸವಿದೆ ಎಂಬುದು ಬಹುಬೇಗ ಅರಿವಾಯಿತು. ಅಷ್ಟರಲ್ಲಿ ನನ್ನ ವೈಯಕ್ತಿಕ ಸಂಗ್ರಹದಲ್ಲಿ ಅನೇಕ ಪುಸ್ತಗಳು ಜಮೆಯಾಗಿದ್ದವು.
ಈಗಲೂ ಪುಸ್ತಗಳ ‘ಶೋಕಿ’ ಕಡಿಮೆಯಾಗಿಲ್ಲ. ಲ್ಯಾಪ್ ಟಾಪಿನಲ್ಲಿ ಹೆಸರೂ ನೋಡಿಲ್ಲದ ನೂರಾರು ಪುಸ್ತಕಗಳು ಜಮೆಗೊಂಡಿವೆ.ತೆಳ್ಳಗಾದಾಗ ಬೇಕಾಗಬಹುದು ಎಂದು ಜೋಪಾನ ಮಾಡಿಡುವ ಪ್ಯಾಂಟಿನ ಹಾಗೆ ಎಂದೋ
ಬೇಕಾಗಬಹುದೆಂದು ತೆಗೆದಿರಿಸಿದ ಪುಸ್ತಕಗಳ, ವೆಬ್ ಸೈಟ್ ಲಿಂಕುಗಳ ಸಂಗ್ರಹದ ಧೂಳು ಕೊಡವಲೂ ಸಾಧ್ಯವಾಗಿಲ್ಲ. ಜೊತೆಗೆ ದೊಡ್ಡ ದೊಡ್ಡ ಗ್ರಂಥಾಲಯಗಳ ಸಹವಾಸ. ಹೀಗಿದ್ದರೂ ಅಲ್ಲೆಲ್ಲೋ ಪುಸ್ತಕ ಮಾರಾಟವಿದೆಯಂತೆ ಎಂದರೆ ಕಿವಿ ನಿಮಿರುತ್ತವೆ. ಈ ತಿಂಗಳು ಅಕೌಂಟಿನಲ್ಲಿ ಬೇನಾಮಿ ಹಣ ಎಷ್ಟು ಉಳಿದಿದೆ ಎಂದು ಮೆದುಳು ಲೆಕ್ಕ ಹಾಕಲು ತೊಡಗುತ್ತದೆ.
ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಪ್ರದರ್ಶನವಿದೆ ಎಂಬ ಸುದ್ದಿ ಕಿವಿಗೆ ಬಿದ್ದಾಗ ಆದದ್ದೂ ಹೀಗೆ. ನಿನ್ನೆ ಸಂಜೆ ಈದ್ ಮಿಲಾದ್ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರು ರಸ್ತೆಗಳ ಮೇಲೆಲ್ಲಾ ಗಲಗಲ ಸದ್ದು ಮಾಡುತ್ತಾ, ಕುಣಿದಾಡುತ್ತಾ ಬಸ್ಸು, ಲಾರಿ, ಇತರೆ ವಾಹನಗಳಿಗೆಲ್ಲಾ ನಿಂತಲ್ಲೇ ನಿದ್ರೆ ಮಾಡುವ ಭಾಗ್ಯವನ್ನು ಕರುಣಿಸುತ್ತಾ ಹಬ್ಬವನ್ನಾಚರಿಸುತ್ತಿರುವಾಗ ನಾನು ಬಿ.ಎಂ.ಟಿ.ಸಿ ಬಸ್ಸೆಂಬ ಬಿಸಿಲುಗುದುರೆಯನ್ನು ಬೆನ್ನಟ್ಟುತ್ತಾ ನಡೆದು ಟೌನ್ ಹಾಲ್ ಎದುರು ತಲುಪಿಕೊಂಡಿದ್ದೆ.
ಎಲ್ಲಾ ಮಳಿಗೆಗಳಲ್ಲಿ ಕನಿಷ್ಟ ಶೇಕಡಾ ೨೫ರಷ್ಟು ರಿಯಾಯಿತಿಯನ್ನು ಪಡೆದುಕೊಂಡೇ ಹೋಗಿ ಎಂಬ ನೋಟ್ ನೋಡಿದೊಡನೇ ನನ್ನ ಹುಮ್ಮಸ್ಸು ಗಗನಕ್ಕೇರಿತು. ಒಂದು ಸಲ ಎರಡು ಸಾಲಿನಲ್ಲಿದ್ದ ಮಳಿಗೆಗಳನ್ನೆಲ್ಲಾ ಜಾಲಾಡಿ ಜೊಳ್ಳು ಗಟ್ಟಿಯನ್ನು ವಿಮರ್ಶಿಸಿ ಅನಂತರ ನಿಷ್ಕರ್ಷೆಯಾದ ಗಟ್ಟಿಯ ತೂಕವನ್ನೂ ಪರ್ಸಿನಲ್ಲಿದ್ದ ಗಾಂಧಿ ನಗೆಯ ನೋಟುಗಳನ್ನು ತೂಗಿ ನೋಡಿ ಒಂದಷ್ಟು ಪುಸ್ತಕಗಳನ್ನು ಕೊಂಡುಕೊಂಡೆ.
ಓದದೇ ಬಿಟ್ಟ, ಒಂದೆರಡು ಸಾಲು ದಾಟಿ, ಒಂದೆರಡು ಪುಟ ಮಗುಚಿ ಬಿಟ್ಟ ಅತೃಪ್ತ ಪುಸ್ತಕ ಸಮೂಹಕ್ಕೆ ಇವೊಂದಿಷ್ಟು ಸೇರ್ಪಡೆಯಾಗಿವೆ.
೧. ಹುಳಿಮಾವಿನ ಮರ – ಪಿ.ಲಂಕೇಶರ ಆತ್ಮಕತೆ
೨. ಗೃಹ ಭಂಗ – ಎಸ್.ಎಲ್.ಭೈರಪ್ಪ
೩. ಕೇಂದ್ರ ವೃತ್ತಾಂತ – ಯಶವಂತ ಚಿತ್ತಾಲ
೪. ೧೯೯೮ರ ವಿಜ್ಞಾನ ಸಾಹಿತ್ಯ – ಸಂಪಾದಕರು: ಸುಭಾಶ್ ಎನ್ ನೇಳಗೆ
೫. ೨೦೦೦ರ ವಿಜ್ಞಾನ ಸಾಹಿತ್ಯ – ಸಂಪ್: ಡಾ||ಸ.ಜ.ನಾಗಲೋಟಿ ಮಠ
೬. ಮೈಸೂರು ವಿವಿ ಪ್ರಸಾರಾಂಗ ಹೊರ ತಂದಿರುವ ಎಸ್.ವಿ.ರಂಗಣ್ಣನವರ ‘ಹಾಸ್ಯ’ ಎಂಬ ಪುಟ್ಟ ಪುಸ್ತಿಕೆ.
Filed under: ದಿನಚರಿಯ ಪುಟಗಳಿಂದ | Tagged: ಕೇಂಡ್ರ ವೃತ್ತಾಂತ, ಗೃಹ ಭಂಗ, ಪುಸ್ತಕ, ಭೈರಪ್ಪ, ಲಂಕೇಶ್, ವಿಜ್ಞಾನ, ಹಾಸ್ಯ