ದ್ವಂದ್ವಗಳೊಡನೆ ಆಟವಾಡುವುದು ಬಲು ಸೊಗಸು. ನಮ್ಮ ಕಪ್ಪು ಬಿಳುಪು ನೈತಿಕತೆ, ಇಬ್ಭಾಗ ಸೀಳುವ ಕತ್ತಿಯಲಗಿನ ಹರಿತ ತರ್ಕಗಳಿಗೆ ದ್ವಂದ್ವ ದುಃಸ್ವಪ್ನ. ಆದರೆ ಬದುಕಿಗೋ ಅದೇ ಸಹಜ ದಾರಿ.
ಸರಳವಾಗಿ ಹೇಳುವುದಾದರೆ ಎರಡು ಸಮಾನಾಂತರ ಕಂಬಿಗಳಿರುವ ರೈಲು ಹಳಿ, ಅದರೆರಡು ಕಂಬಿಗಳು ದ್ವಂದ್ವವೆನ್ನುವುದಾರೆ. ನಮ್ಮ ತರ್ಕ, ನೈತಿಕ ಮೌಲ್ಯಗಳು ಯಾವುದೋ ಒಂದು ಕಂಬಿಯ ಮೇಲಷ್ಟೇ ಸಾಗಬಲ್ಲ ಸೈಕಲ್ಲು. ಬದುಕೋ ಎರಡೂ ಹಳಿ ಮೇಲೆ ಹರಿದು ಸಾಗುವ ರೈಲು ಗಾಡಿ.
ಮನುಷ್ಯನಿಗೆ ಎಲ್ಲವೂ ಅಭ್ಯಾಸ, ಸಿದ್ಧಿ, ಸಾಧನೆಯಿಂದ ಲಭಿಸುವಂಥದ್ದು. ಅಭ್ಯಾಸದಿಂದ ಆನೆಯನ್ನೂ ಪಳಗಿಸಬಹುದು, ವಿಮಾನವನ್ನು ಹಾರಿಸಬಹುದು, ಹಡಗನ್ನು ತೇಲಿಸಬಹುದು. ಆದರೆ ಎಲ್ಲಾ ಅಭ್ಯಾಸ ಮರೆತ ಕ್ಷಣ ಮಾತ್ರದ ಉತ್ಕಟತೆಯಲ್ಲಿ ಮಾತ್ರ ಕಾವ್ಯ ಹುಟ್ಟಲು ಸಾಧ್ಯ. ಸಾಧನೆಯ ಬಿಗು ಸಡಿಲಾದಾಗಲೇ ಅನುಭೂತಿ ದಕ್ಕಲಿಕ್ಕೆ ಸಾಧ್ಯ. ಅವನೊಬ್ಬ ರಜನೀಶ್ ಹೇಳುತ್ತಾನೆ ನಿನ್ನ ಮನಸ್ಸನ್ನೇ ಕೈಬಿಡು.
ಧೈರ್ಯವೆನ್ನುವುದನ್ನು ಬೆಳೆಸಿಕೊಳ್ಳಬೇಕು ನಿಜ. ಪುಕ್ಕಲುತನವೇನು ಸಹಜ ಗುಣವೇ? ಭಯವೇನು ನಮ್ಮ ಸ್ವಭಾವವೇ? ಸಾಧನೆಯಿರದಿದ್ದರೆ ಭಯಪೀಡಿತನಾಗಿರುವುದಕ್ಕೆ ಸಾಧ್ಯವಿಲ್ಲ. ಭಯವೆನ್ನುವುದೇ ಸ್ವಭಾವವಾಗುವುದಕ್ಕೂ ಅಭ್ಯಾಸ ಬೇಕು. ಇಷ್ಟು ಸುಲಭಕ್ಕೆ ಎಲ್ಲವೂ ನಮ್ಮ ಕೈಲಿರುವುದೇ? ಪ್ರಶ್ನಿಸಲೇ ಬೇಡ ಹೀಗೆ. ನೀನ್ಯಾರು ಅನ್ನೋದು ಕೈಬಿಡು, ನೀನೇನಾಗಬೇಕು ಕೇಳಿಕೋ. ಹೀಗೆಂದೊಡನೆ ಅರ್ಥ ಗ್ರಹಿಸುವ ಮುಂಚೆಯೇ ಆರ್ಕೆಸ್ಟ್ರಾದಿಂದ ಉತ್ಸಾಹ ಭರಿತ ಸಂಗೀತ ಧಾರೆಯುಕ್ಕಿ, ಕಣ್ತುಂಬ ಬೆಳಕು ಕವಿಯುವುದು ಅಭ್ಯಾಸ ಬಲದಿಂದಲೇ?