ಇರುವುದನ್ನು ಇರುವಂತೆ ಹೇಳುವುದು ಕೆಲವೊಮ್ಮೆ ಅಪಾಯಕಾರಿ. ಆದರೆ ಹಾಗೆ ಹೇಳುವುದು ಹಲವು ಸಂದರ್ಭಗಳಲ್ಲಿ ಅತ್ಯಗತ್ಯ. ಇರುವುದನ್ನು ಹೇಳದಿರುವುದು ಹಾಗೂ ಇಲ್ಲದಿರುವುದನ್ನು ಹೇಳುವುದು ಸುಳ್ಳು ಎಂದು ಕರೆಸಿಕೊಳ್ಳುತ್ತೆ. ಹಾಗೆ ಹೇಳಿದರೆ ಸಾಚಾ ಅಲ್ಲದ ಉದ್ದೇಶಗಳಿದ್ದೇ ಇರುತ್ತವೆಂಬ ಗುಮಾನಿ ಏಳುತ್ತದೆ. ಹೊಟ್ಟೆ ಸಣ್ಣಗೆ ಕಾಣುವಂತಹ ಕನ್ನಡಿ ಕ್ಷಣ ಮಾತ್ರ ಖುಶಿ ಕೊಡಬಲ್ಲದು ಆದರೆ ಅದನ್ನೇ ಕಣ್ಣ ಚಾಳೀಸು ಮಾಡಿಕೊಂಡರೆ ನೆಟ್ಟಗಿರುವುದನ್ನು ಕಾಣೋದಕ್ಕೇ ಸಾಧ್ಯವಿಲ್ಲ.
ಇದೇ ಸಂಗತಿ ಭಗವದ್ಗೀತೆಯಿಂದ ಹಿಡಿದು ನವಯುಗದ ಆಧ್ಯಾತ್ಮಕ್ಕೂ ಅನ್ವಯಿಸುತ್ತದೆ. ವಿಜಯಕ್ಕೆ ಏಳು, ಎಂಟು, ಇನ್ನೊಂದು ಅರ್ಧ ಮೆಟ್ಟಿಲು ಎಂದು ವ್ಯಕ್ತಿತ್ವ ವಿಕಸನದ ಗಗನ ಚುಂಬಿ ಮೆಟ್ಟಿಲುಗಳನ್ನು ತೋರಿಸುವ ಮಂದಿಗೂ ಅನ್ವಯವಾಗುತ್ತದೆ. ನೀವೆಲ್ಲರೂ ಕುರಿ ವೇಷದಲ್ಲಿರುವ ಸಿಂಹಗಳು ಪುರುಷ ಸಿಂಹಗಳು ಎಂದು ವಿವೇಕಾನಂದ ಉದ್ಘರಿಸಿದ್ದು ಕೇಳಿದೊಡನೆ ನಿಮ್ಮಲ್ಲಿ ಉಬ್ಬರಿಸಿ ಉಕ್ಕಿ ಬರುವ ಆತ್ಮವಿಶ್ವಾಸವನ್ನು ಕೊಂಚ ತಣ್ಣಗಾಗಿಸಿಕೊಂಡು ಕೇಳಿಕೊಳ್ಳಿ ಇದು ಇದ್ದದ್ದು ಹೇಳುವ ವಿಧಾನವಾ ಎಂದು?
ಯಾವತ್ತೂ ಸಾಕ್ಷಾತ್ಕರಿಸಿಕೊಳ್ಳಲಾಗದ ಯುಟೋಪಿಯಾ, ಎಂದೂ ತಲುಪಲಾಗದ ಗಮ್ಯಗಳನ್ನು ಎದುರಿಗಿಟ್ಟುಕೊಂಡು ಮಾತನಾಡುವವರಿಂದ ಕಾಲ್ಕೀಳುವುದು ಸೌಖ್ಯ. ಆತ್ಮವನ್ನು ಪರಿಶುದ್ಧ ಮಾಡಿಕೊಳ್ಳುವುದು ಹೇಗೆ ಎಂದು ಮಾತನಾಡುವವನಿಗಿಂತ ಕುಡಿಯುವ ನೀರನ್ನು ಶುದ್ಧವಾಗಿಸೋದು ಹೇಗೆ ಎಂದು ಹೇಳುತ್ತಿರುವವನಿಗೆ ಗಮನ ಕೊಡಬೇಕು. ನೀವೆಲ್ಲ ಮಲಗಿರುವ ಜ್ವಾಲಾಮುಖಿಗಳು, ಕುರಿ ವೇಷದ ಸಿಂಹಗಳು ಎಂದಾಗ ಸಾಧ್ಯತೆಯನ್ನು ನೆನೆದು ಆರ್ಗಾಸ್ಮಿಕ್ ಆಗಿ ವರ್ತಿಸುವ ಮುನ್ನ ನಿಮ್ಮನ್ನು ನೀವು ಕುರಿ ವೇಷ ತೊಟ್ಟಿರುವವರು, ಮಲಗಿರುವವರು – ಎಚ್ಚರವಿಲ್ಲದವರು ಎಂದು ಹೇಳುತ್ತಿರುವುದು ಯಾವ ಕಾರಣಕ್ಕೆ ತಿಳಿಯಿರಿ. ನಮ್ಮ ಫೇರ್ ನೆಸ್ ಕ್ರೀಮ್ ಹಚ್ಚಿದರೆ ಬೆಳ್ಳಗಾಗುವಿರಿ ಎನ್ನುವುದರಷ್ಟೇ, ನೀವು ಅವಮಾನಕಾರಿಯಾಗುವಷ್ಟು ಕಪ್ಪಗಿದ್ದೀರಿ ಎಂಬ ಭಾವನೆ ಮೂಡಿಸುವ ಪ್ರಯೋಜನಕಾರಿ ವ್ಯಾಪಾರಿ ತಂತ್ರ.