ನಾವು ಅಪ್ರಯತ್ನಪೂರ್ವಕ ಅನುಭೂತಿ ಎಂದು ಕರೆಯುವುದರ ಹಿಂದೆಲ್ಲ ಕಣ್ಣಿಗೆ ಕಾಣದ ಸಾವಿರ ಎತ್ತು ಹಿಡಿ ತಳ್ಳು ತರ್ಕಗಳಿರುತ್ತವೆ. ಒಂದು ಸ್ಮಾರ್ಟ್ ಫೋನಿನಲ್ಲಿ ನಮ್ಮ ಬೆರಳ ತುದಿಯ ಸನ್ನೆಗೆ ನಾಚಿ ಪಕ್ಕಕ್ಕೆ ಜಾರಿಕೊಳ್ಳುವ ಪರದೆಯ ಹಿಂದೆ ಅದರ ಲಯವನ್ನು, ಚಲನೆಯನ್ನು ನಿರ್ದೇಶಿಸುವ ನಿರ್ದಿಷ್ಟ ನಿಯಮಗಳಿರುತ್ತವೆ. ಈ ಸೌಂದರ್ಯವನ್ನು ನಿರ್ಮಿಸಿಕೊಡಲು ಯಾಂತ್ರಿಕವಾಗಿ ಲಕ್ಷಾಂತರ ಫ್ಲಿಪ್ ಫ್ಲಾಪುಗಳು ತೆರೆದು ಮುಚ್ಚಿಕೊಳ್ಳುತ್ತಿರುತ್ತವೆ.
ಈ ಯಾಂತ್ರಿಕ ನಿಯಮಬದ್ಧ ಕೆಲಸಗಳ್ಯಾವುವನ್ನೂ ಮಾಡದೆ ಸುಮ್ಮನೆ ಇರಬಹುದಲ್ಲವೇ? ಕ್ಲೀಷೆಯಾಗಿ ಹೋಗಿರುವ ನದೀ ದಂಡೆ, ಸ್ವಚ್ಛಂದ ಆಕಾಶದೆದುರು ಈಸಿ ಚೇರಿನಲ್ಲಿ ವ್ಯಕ್ತಿಯೊಬ್ಬ ಕುಳಿತು ತೂಕಡಿಸುತ್ತಿರುವ ದೃಶ್ಯ, ಅದಕ್ಕಿಂತ ಹೆಚ್ಚು ಕ್ಲೀಷೆಯಾಗಿರುವ ಆ ವ್ಯಕ್ತಿ ಹೇಳಿದನೆನ್ನಲಾದ ಸಾಲುಗಳು. ಇಷ್ಟೆಲ್ಲ ದುಡಿದು ಸಂಪಾದಿಸಿ ಅನಂತರ ಮಾಡುವುದನ್ನೇ ತಾನು ಈಗ ಮಾಡುತ್ತಿರುವೆ.
ಈ ದುಡಿಮೆ, ಈ ದುಗುಡ, ಈ ವ್ಯಾಧಿ, ಅಂಟಿಕೊಳ್ಳುವುದು, ನೋವಾಗುವುದು, ಹಿಂಸೆ, ಬೇಸರ ಇವೆಲ್ಲ ಯಾಕೆ ಬೇಕು ಸುಮ್ಮನೆ ಇರೋದು ಕಷ್ಟವೇ? ಹೌದು, ಹೀಗನ್ನಿಸಿದರೂ ಮನುಷ್ಯ ಯಾವಾಗ ಸುಮ್ಮನಿದ್ದ? ಅತೀವ ಹಿಂಸೆಯಲ್ಲಿ ಬೆಳಿಗ್ಗೆ ಎದ್ದು ಆಫೀಸಿಗೆ ಹೊರಡುವುದು ಶಿಲಾಮಾನವನಿಗೇನು ಅನಿವಾರ್ಯವಾಗಿರಲಿಲ್ಲ ಅಲ್ಲವೇ? ಇಲ್ಲಿಗೆ ಬಂದು ತಲುಪುವುದಕ್ಕೆ ಆ ಮಾತು ಗೊತ್ತಿಲ್ಲದ, ಸಭ್ಯತೆಯಿಲ್ಲದ, ಶೂ ಪಾಲಿಶ್ ಮಾಡಲು ತಿಳಿದಿಲ್ಲದ, ಟೈ ಕಟ್ಟಲು ಗೊತ್ತಿಲ್ಲದ, ಸೀನುವ ಮುನ್ನ ಎಲ್ಲಿದ್ದರೂ ಹುಡುಕಿ ತೆಗೆದು ಮೂಗಿಗೆ ಒತ್ತಿ ಹಿಡಿಯುವ ಕರ್ಚೀಫು ಪರಿಚಯವಿಲ್ಲದ, ಸೀನಿದ ತರುವಾಯ ಕ್ಸೂಸ್ ಮಿ ಎನ್ನುವ ಸಂಸ್ಕಾರವಿಲ್ಲದ ಶಿಲಾಮಾನವನಿಗೆ ಇದ್ದ ಅನಿವಾರ್ಯಗಳಾದರೂ ಎಂಥವು?
ಇಲ್ಲಿ ಬಂದು ನಿಂತು ನಾವು ಇದೆಲ್ಲ ಏತಕ್ಕೆ ಎಂದೊಡನೆ ಪರಿಸ್ಥಿತಿ ಸುಧಾರಿಸೀತೇ?