ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ

ದೆಹಲಿಯಲ್ಲಿ ನಡೆದ ಅಮಾನುಷ ಕೃತ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಯಾಗುತ್ತಿರುವ ಎಷ್ಟೋ ಸಂಗತಿಗಳಲ್ಲಿ ಒಂದು ನನ್ನ ಗಮನವನ್ನು ಸೆಳೆಯಿತು.

ಮೂರು ನಾಲ್ಕು ವರ್ಷದ ಕಂದಮ್ಮಗಳನ್ನು ಬಿಡದೆ ಲೈಂಗಿಕ ಬ್ರಹ್ಮ ರಾಕ್ಷಸನಂತೆ ಗಂಡು ಮುಗಿಬೀಳುತ್ತಿದ್ದಾನೆ. ಆರೋಪಿಗಳು ದೆಹಲಿಯಂತಹ ನಾಗರೀಕ ಸಮಾಜದಲ್ಲಿ ಮಧ್ಯಮ ಮೇಲ್ಮಧ್ಯಮ ಆಧುನಿಕ ಹೆಣ್ಣನ್ನು, ಆಕೆಯ ಗೆಳೆಯನ ರಕ್ಷಣೆಯಲ್ಲಿರುವಾಗಲೇ ಹಿಂಸಿಸುವ ಧೈರ್ಯ ತೋರಿದರು. ಈ ಅಂಶ ಈಗ ದೇಶದೆಲ್ಲೆಡೆ ವ್ಯಕ್ತವಾಗಿರುವ ಆಕ್ರೋಶಕ್ಕೆ ಕಾರಣ ಎನ್ನುವುದಾದರೆ ಅದು ಈ ಪ್ರಕರಣಕ್ಕಿಂತ ಘೋರ ದುರಂತವಾದೀತು. ಅದು ಈಗ ಚರ್ಚೆಗೆ ಬೇಡ. ಆಧುನಿಕ ಜಗತ್ತಿನ ಕನೆಕ್ಟಿವಿಟಿಯ ದೆಸೆಯಿಂದ, ಹೆಚ್ಚಿದ ಸಾರ್ವಜನಿಕ ಅರಿವಿನಿಂದ ಎಲ್ಲೋ ಕತ್ತಲೆಯ ಮೂಲೆಯಲ್ಲಿ ಗೋಡೆಯ ಮರೆಯಲ್ಲಿ ಹೂತು ಹಾಕಲ್ಪಡುತ್ತಿದ್ದ ಪ್ರಕರಣಗಳು ಇಂದು ಬೆಳಕಿಗೆ ಬರುತ್ತಿವೆ ಎನ್ನುವ ವಿಚಾರವೂ ಈ ಚರ್ಚೆಗೆ ವರ್ಜ್ಯ. ಸೀಮಿತ, ಆದರೂ ತಮ್ಮ ಆಗ್ರಹವನ್ನು ಸೂಕ್ತ ವ್ಯಕ್ತಿಗಳ ಕಿವಿಗಳಿಗೆ ತಲುಪಿಸುವ ಪ್ರಭಾವವಿರುವ ಯುವ ಜನಸಮೂಹಕ್ಕೆ ಸಿಗುವ ಮನ್ನಣೆ ಸಮಾಜದ ಎಲ್ಲಾ ವರ್ಗದ ಶೋಷಿತರಿಗೆ ದೊರೆಯುತ್ತಿದೆಯೇ ಎನ್ನುವ ಪ್ರಶ್ನೆಯೂ ಈ ಚರ್ಚೆಗೆ ಸಂಬಂಧಿಸಿದ್ದಲ್ಲ. ಇವೆಲ್ಲಕ್ಕೂ ಆಧುನಿಕ ಸಮಾಜದಲ್ಲಿ ಧರ್ಮ, ನೈತಿಕ ಮೌಲ್ಯಗಳು ಅಧೋಗತಿಗಿಳಿದಿರುವುದೇ ಕಾರಣ ಎಂದು ಪರಿತಪಿಸಿ ಜೀನ್ಸ್ ತೊಟ್ಟು ಗೆಳತಿಯರೊಡನೆ ಪಬ್ಬಿಗೆ ಹೋಗುವ ಹುಡುಗಿಯನ್ನು ವಕ್ರ ದೃಷ್ಟಿಯಿಂದ ನೋಡುವ ಪ್ರಗತಿವಿರೋಧಿಗಳ ಪ್ರಸ್ತಾಪವೂ ಇಲ್ಲಿ ಬೇಡ.

ಸಮಾಜದಲ್ಲಿ ಈ ಬಗೆಯ ಪೈಶಾಚಿಕ ಮನಸ್ಥಿತಿಗೆ ನಮ್ಮ ಸಿನೆಮಾಗಳು ಎಷ್ಟರ ಮಟ್ಟಿಗೆ ಕಾರಣ ಎನ್ನುವ ಚರ್ಚೆ ನನ್ನ ಗಮನವನ್ನು ಸೆಳೆಯಿತು. ಡರ್ಟಿ ಪಿಕ್ಚರ್ ಎನ್ನುವ ಅಸಂಬದ್ಧ ಸಿನೆಮಾದ ನಿರ್ದೇಶಕ, “”ನಮ್ಮ ಸಿನೆಮಾಗಳು ಹಾಗೂ (ಅಸಹ್ಯಕರ ದ್ವಂದ್ವಾರ್ಥದ) ಹಾಡುಗಳು ಇಂತಹ ಪ್ರಕರಣಗಳಿಗೆ ಕಾರಣ ಎನ್ನುವುದನ್ನು ಒಪ್ಪಲಾಗದು. I take great offense” ಎಂಬ ಹೇಳಿಕೆ ನೀಡಿದ್ದಾನೆ.

ಕಲೆ ಸಮಾಜವನ್ನು ಅನುಕರಣೆ ಮಾಡುತ್ತದೋ ಸಮಾಜ ಕಲೆಯನ್ನು ಅನುಕರಣೆ ಮಾಡುತ್ತದೋ ಎನ್ನುವುದು ಪುರಾತನವಾದ ಜಿಜ್ಞಾಸೆ. ಇದು ಜಡ್ಡು ಹಿಡಿದ ನಾಲಿಗೆಯನ್ನು ನೆಟ್ಟಗೆ ಹೊರಳಿಸಲು ಬಳಸುವ ಟಂಗ್ ಟ್ವಿಸ್ಟರ್ ರೀತಿ. ಹೆಚ್ಚು ಬಾರಿ ಪುನರಾವರ್ತನೆಗೊಂಡಾಗಲೂ ನಮ್ಮ ಮೆದುಳಿಗೆ ಹೆಚ್ಚೆಚ್ಚು ಉತ್ತೇಜನ ಕೊಡುತ್ತಾ ಬಿಡಿಸಿಕೊಳ್ಳಲಾಗದ ಸುಳಿಯಲ್ಲಿ ಸಿಲುಕಿಸಿಡುತ್ತದೆ. ಅಮೇರಿಕಾದಲ್ಲಿ ಇದ್ದಕ್ಕಿದ್ದಂತೆ ತಲೆಕೆಟ್ಟು ಕಂಡವರನ್ನೆಲ್ಲ ಗುಂಡಿಕ್ಕಿ ಕೊಲ್ಲುವ ಪಾತಕಿಗಳು ನಮಗೆ ದೊಡ್ಡ ಮನೋವೈಜ್ಞಾನಿಕ ಜಿಜ್ಞಾಸೆಗೆ ಕಾರಣವಾಗುವುದಿಲ್ಲ. ನಾವು ಸರಳವಾಗಿ ಕೇಳ್ತೇವೆ ಅವ್ರಿಗೆಲ್ಲಿಂದ ಸಿಗುತ್ತೆ ಅಷ್ಟು ಸುಲಭಕ್ಕೆ ಗನ್ನು ಅಂತ. ಬಹುಶಃ ಅವರೂ ಅಷ್ಟೇ ಸುಲಭಕ್ಕೆ ಕೇಳಬಹುದು, ನಿಮ್ಮ ನೆಲದಲ್ಲಿ ಕಾನೂನು ಪೊಲೀಸು ಇಲ್ಲವೇ ಎಂದು.

ಅದಿರಲಿ ವಿಷಯಕ್ಕೆ ಬರೋಣ. ಡರ್ಟಿ ಸಿನೆಮಾದ ನಿರ್ದೇಶಕನನ್ನು ಗೇಲಿಯ ಧಾಟಿಯಲ್ಲಿ ಉಲ್ಲೇಖಿಸಿದ್ದರೂ ಆತನ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಸಿನೆಮಾ ಎಷ್ಟೇ ಅಸಹ್ಯಕರವಾಗಿರಲಿ, ಕೆಟ್ಟ ಅಭಿರುಚಿಯದಾಗಿರಲಿ ಅದೆಂದಿಗೂ ಬದುಕಿಗಿಂತ ದೊಡ್ಡದಲ್ಲ ಎನ್ನುವುದು ನನ್ನ ಅಭಿಪ್ರಾಯ. ಒಂದು ಸಿನೆಮಾವನ್ನ ನೋಡಿ ಅದು ಕೆಟ್ಟದಾಗಿದ್ದರೆ ಅದರ ನಿರ್ದೇಶನ ಕೀಳು ಅಭಿರುಚಿ, ಅದರಲ್ಲಿ ನಟಿಸಲು ಒಪ್ಪಿದ್ದ ಸ್ಟಾರುಗಳ ಮಂದ ಬುದ್ಧಿಯನ್ನು ಟೀಕಿಸಬಹುದು. ಆದರೆ ಸಮಾಜದಲ್ಲಿನ ಹೀನಾಯ ಕೃತ್ಯಗಳ ಜವಾಬ್ದಾರಿಯನ್ನು ಸಿನೆಮಾಗಳ ಮೇಲೆ ಹೊರಿಸುವುದು ಸರಿಯಲ್ಲ. ಅನುಕರಣೆ ಮಾಡುವವರಿಗೆ ಡರ್ಟಿ ಪಿಕ್ಚರ್ ಅಲ್ಲ ದ್ರೌಪದಿಯ ಮಾನಹರಣ ಹೇಗೆ ಭಿನ್ನವಾಗಿ ಕಂಡೀತು.

ಈ ಚರ್ಚೆಯ ಓಘದಲ್ಲೇ ಮತ್ತೊಂದು ಸಂಗತಿಯನ್ನು ಪ್ರಸ್ತಾಪಿಸಬೇಕು. ಟ್ಯಾಕ್ಸ್ ಹೆಚ್ಚು ಮಾಡಿದರೂ, ಪ್ಯಾಕುಗಳ ಮೇಲೆ ಚೇಳು, ಏಡಿ ಮೊದಲಾದ ಅಪಾಯಕಾರಿ ಪ್ರಾಣಿಗಳ ಚಿತ್ರ ಪ್ರಕಟಿಸಿದರೂ, ಪ್ರತಿಭಾವಂತ ಚಿತ್ರ ನಿರ್ದೇಶಕರು ತಮ್ಮ ಕ್ರಿಯಾವಂತಿಕೆಯನ್ನೆಲ್ಲ ಬಗೆದು ಸಮಾಜ ಸುಧಾರಣೆಗೆ (ಫೆಸ್ಟಿವಲ್ ನಲ್ಲಿ ಪ್ರೈಜ್ ಗೆಲ್ಲುವುದಕ್ಕೆ ಎಂದು ಓದಿಕೊಂಡರೆ ನೀವು ಬುದ್ಧಿವಂತರು)‌ ಕಿರುಚಿತ್ರಗಳ ನಿರ್ಮಾಣ ಮಾಡಿದರೂ ಜನರು ಸಿಗರೇಟು ಸೇದುವುದು ಕಡಿಮೆಯಾಗಿಲ್ಲ. ಇಂಥ ಜನರಿಗೆ ಥಿಯೇಟರಿನಲ್ಲಿ ಬುದ್ಧಿವಾದ ಹೇಳುವ ಯೋಜನೆ ಯಾವ ತಲೆಗೆ ಬಂತೋ ಗೊತ್ತಿಲ್ಲ. ಹಿಂದೆಲ್ಲ ಗಣಪತಿಯ ಸ್ತುತಿಯಿಂದ ಆರಂಭವಾಗುತ್ತಿದ್ದ ಬಯಲಾಟಗಳಿದ್ದಂತೆ ಇವತ್ತು ಯಾವ ಸಿನೆಮಾ ಆದರೂ ಶುರುವಾಗುವುದು ಬೀಡಿ, ಸಿಗರೇಟು, ಗುಟ್ಕಾ, ಜರ್ದಾಗಳ ಪ್ರಸ್ತಾಪದಿಂದ ಹಾಗೂ ಕೆಮ್ಮು, ಶ್ವಾಸಕೋಶದ ಕ್ಯಾನ್ಸರ್ ಗಳಂತಹ ಉಗ್ರ ರೋಗಗಳ ಅತ್ಯುಗ್ರ ಚಿತ್ರಣದ ಮೂಲಕ. ಇದೆಲ್ಲವನ್ನ ಕಣ್ಣು ಕಿವಿ ಮುಚ್ಚಿಕೊಂಡು ಇಲ್ಲವೇ ಮೊಬೈಲ್ ಪರದೆಗೆ ಕಣ್ಣು ತೆರೆದೋ ಸಹಿಸಬಹುದು ಆದರೆ ಅಸಹನೀಯವೆನಿಸುವ ಕಿರಿಕಿರಿ ಇನ್ನೊಂದಿದೆ. ಚಿತ್ರದಲ್ಲಿ ಸನ್ನಿವೇಶ ಯಾವುದೇ ಇರಲಿ, ಭಾವ ಯಾವುದೇ ಇರಲಿ ಪರದೆಯ ಮೇಲೆ ಪಾತ್ರದ ಕೈಲಿ ಸಿಗರೇಟು ಕಂಡೊಡನೆ “”ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ” ಎಂಬ ಅಡಿ ಟಿಪ್ಪಣಿ ಮುಖಕ್ಕೆ ರಾಚುತ್ತದೆ. ಸಣ್ಣಗೆ ಕಿರಿಕಿರಿಯುಂಟು ಮಾಡುತ್ತಿದ್ದ ಈ “ಎಚ್ಚರಿಕೆ’ ಫಲಕ ತೀವ್ರ ಉಪದ್ರವ ನೀಡಿದ್ದು ಎದೆಗಾರಿಕೆ ಸಿನೆಮಾ ನೋಡುವಾಗ. ಚಿತ್ರದಲ್ಲಿ ಸಂಯಮವಿಲ್ಲದೆ ಭೋರ್ಗರೆಯುವ ಹಿನ್ನೆಲೆ ಸಂಗೀತದಂತೆಯೇ ಪ್ರತಿ ಎರಡು ನಿಮಿಷಕ್ಕೊಂದು ಸಿಗರೇಟು ಬೂದಿಯಾಗುತ್ತದೆ. ಪ್ರತಿ ಸಿಗರೇಟಿಗೂ ನಮ್ಮ ಸೆನ್ಸಾರ್ ಮಂಡಳಿ (ಇವರೋ ಅಥವಾ ಮತ್ಯಾರು ಇದನ್ನು ನಿಯಮ ಮಾಡಿರುವರೋ ಅವರು)ಯ ಬಲವಂತದ ಒಬಿಚುವರಿ!

ಪರದೆಯ ಮೇಲಿನ ಪಾತ್ರ ಸಿಗರೇಟು ಸೇದಿದ ಅಂತ ತಾನು ಸಿಗರೇಟು ಸೇದಲು ಪ್ರೇರೇಪಿತನಾಗುವ ವ್ಯಕ್ತಿಗೆ ಆ ಸಿನೆಮಾದಲ್ಲಿ ಸಾವಿಗೆ ಸಿದ್ಧನಾಗಿ ನಿಂತ ಪಾತ್ರದ ಮನೋಭೂಮಿಕೆಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇರುತ್ತದಾ? ಅದು ಹೋಗಲಿ, ಕೀಳು ಅಭಿರುಚಿಯ “ಅಡ್ಡಾ’ಪ್ರೇಮಿಗಳ ದ್ವಂದ್ವಾರ್ಥದ ಹಾಡುಗಳನ್ನು ಕೇಳಿ ಮರೆಯುವ ಪ್ರಬುದ್ಧತೆ ಇರುತ್ತದಾ?‌

ನನ್ನ ಕೋರಿಕೆ ಇಷ್ಟೇ, ತೆರೆಯ ಮೇಲೆ ಪ್ರತಿ ಬಾರಿ ಸಿಗರೇಟು ಬಂದಾಗ ಮಹಾ ಪ್ರಭುಗಳು ಎಚ್ಚರಿಕೆಯ ಫಲಕವನ್ನು ತೋರಿದಂತೆಯೇ ಹೆಣ್ಣನ್ನು ಅವಹೇಳನಕಾರಿಯಾಗಿ ಬಿಂಬಿಸುವ ಚಿತ್ರಿಕೆ, ಸಂಭಾಷಣೆ, ಹಾಡು ಬಂದಾಗಲೂ “ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ” ಎಂದು ತೋರಿಸಿಬಿಡಿ.

ಸ್ವಪ್ನ ಸಾದೃಶ್ಯ ಪುಸ್ತಕ ಬಿಡುಗಡೆ, ತಪ್ಪದೇ ಬನ್ನಿ

ಇಂದಿಗೆ ಎರಡೂವರೆ ವರ್ಷಗಳ ಹಿಂದೆ ಪ್ರಕಾಶ್ ರಾಜ್ (ಕನ್ನಡದ ಪ್ರಕಾಶ್ ರೈ)‌ ನಿರ್ದೇಶಿಸಿದ “ನಾನೂ… ನನ್ನ ಕನಸು” ಕನ್ನಡ ಸಿನೆಮಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸಂವಾದ ಡಾಟ್ ಕಾಮ್ ಈ ಚಿತ್ರ ಸಂವಾದವನ್ನು ಆಯೋಜಿಸಿತ್ತು. ಸಂವಾದ ಕಾರ್ಯಕ್ರಮದ ಮುನ್ನ ಚಿತ್ರದ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಕೆಲವು ದಿನಗಳ ಹಿಂದಷ್ಟೇ ಥಿಯೇಟರಿನಲ್ಲಿ ಈ ಸಿನೆಮಾ ನೋಡಿದ್ದೆ.

ಸಂವಾದ ಕಾರ್ಯಕ್ರಮ ಆಯೋಜಿಸಿದ್ದ ಯವನಿಕಾ ಸಭಾಂಗಣದೊಳಕ್ಕೆ ಹೋದಾಗ ಅದಾಗಲೇ ಸಂಜೆಯಾಗಿತ್ತು. ಸಂವಾದ ಚಾಲ್ತಿಯಲ್ಲಿತ್ತು. ವೇದಿಕೆಯ ಮೇಲೆ ಒಂದು ಪಾರ್ಶ್ವದಲ್ಲಿ ಚಿತ್ರ ತಂಡ ಉಪಸ್ಥಿತವಿತ್ತು. ಮತ್ತೊಂದು ಪಾರ್ಶ್ವದಲ್ಲಿ ಸಂವಾದ ನಡೆಸುವುದಕ್ಕೆಂದು ಕರೆಸಲಾಗಿದ್ದ ಸಂಪನ್ಮೂಲ ವ್ಯಕ್ತಿಗಳ ತಂಡ ನೆರೆದಿತ್ತು. ನನಗೆ ಎಲ್ಲವೂ ಹೊಸತು. ನೆರೆದಿದ್ದ ಪ್ರೇಕ್ಷಕರಲ್ಲಿ ಕೆಲವರು ಸ್ಟಾರ್ ಗಳನ್ನು ಕಂಡು ಮುಟ್ಟಿ ಮಾತಾಡಿಸುವ ತವಕದಲ್ಲಿದ್ದರು. ಇನ್ನು ಕೆಲವರು ಕಟಕಟೆಯಲ್ಲಿ ನಿಂತ ಖೈದಿಯನ್ನು ಖಂಡ ತುಂಡವಾಗಿ ಪ್ರಶ್ನಿಸುವ ಉಮ್ಮೇದಿನಲ್ಲಿ ಇದ್ದವರಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಂವಾದ ಡಾಟ್ ಕಾಮ್ ನ ಹಿರಿಯರು ತಮಗಷ್ಟೇ ಅರ್ಥವಾಗುತ್ತಿದ್ದ ಪಾರಿಭಾಷಕ ಪದಗಳಿಗೆ ವೇದಿಕೆಯ ಮೇಲಿರುವ ಒಬ್ಬನಾದರೂ ಸ್ಪಂದಿಸಬಲ್ಲನೋ ಎನ್ನುವ ಅಸಹಾಯಕತೆಯಲ್ಲಿದ್ದರು.

ಮೈಕು ಹಿಡಿದು ನಾನು ಒಂದೆರೆಡು ಮಾತಾಡ ಬೇಕಾಗಿ ಬಂದಾಗ ದೇಶಾವರಿಯ ನಗೆಯನ್ನು ಅರಳಿಸುತ್ತಾ “ನನಗೇನು ಕ್ಯಾತೆಗಳಿಲ್ಲ ಸಿನೆಮಾದ ಬಗ್ಗೆ. ನಾನು ಮೂಲ ತಮಿಳು ಸಿನೆಮಾ ನೋಡಿಲ್ಲವಾದ್ದರಿಂದ ಹೋಲಿಕೆ ಮಾಡಿ ಪ್ರಶ್ನಿಸುವಂಥದ್ದೂ ಏನು ಇಲ್ಲ.” ಎಂದು ಮೈಕು ದಾಟಿಸಿ ಪಾರಾಗಿದ್ದೆ.

ಕ್ರಮೇಣ ಪರಿಸ್ಥಿತಿಯ ವಿನ್ಯಾಸ ಹಾಗೂ ಆಸಕ್ತಿಗಳ ಹೊಂದಾಣಿಕೆಯಿಂದ ಸಂವಾದ ಡಾಟ್ ಕಾಮ್ ನ ಹಲವು ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುವ ಹಾಗೂ ಅವುಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಒದಗಿ ಬಂದವು. ನನ್ನ ಮತ್ತು ಸಂವಾದ ಡಾಟ್ ಕಾಮ್ ನ ನಂಟು ನಾಲ್ಕಾರು ಸಿನೆಮಾ ಸಂವಾದಗಳು, ಎರಡು ಶಿಬಿರಗಳು, ಚಿತ್ರಕತೆ ಸಿದ್ಧತೆಗೆಂದು ಒಂದು ಪ್ರವಾಸ, ಹತ್ತಾರು ಅರ್ಧಕ್ಕೆ ನಿಂತ ಯೋಜನೆಗಳು, ನೂರಾರು ಒಳನೋಟಗಳುಳ್ಳ ಚರ್ಚೆಗಳು, ಕೆಲವು ಮುನಿಸುಗಳು- ಇವುಗಳೆಲ್ಲವನ್ನು ಬಳಸಿ, ದಾಟಿ ಈಗ ಒಂದು ಘಟ್ಟಕ್ಕೆ ಬಂದು ನಿಂತಿದೆ.

ಬರುವ ಶನಿವಾರ ಡಿಸೆಂಬರ್ ೧, ಸಂವಾದ ಡಾಟ್ ಕಾಂ “ಸ್ವಪ್ನ ಸಾದೃಶ್ಯ” ಎನ್ನುವ ಪುಸ್ತಕವನ್ನು ಹೊರತರಲಿದೆ. ೨೦೦೦-೨೦೧೦ವರೆಗಿನ ಹದಿಮೂರು ಕನ್ನಡ ಜನಪ್ರಿಯ ಚಿತ್ರಗಳನ್ನು ಅತ್ಯಂತ ಶ್ರದ್ಧೆಯಿಂದ, ತುಂಬು ಉತ್ಸಾಹದಿಂದ ತಡವಿ ತಿಕ್ಕಿ ಅರ್ಥ ಹೊಮ್ಮಿಸುವ ಪ್ರಯತ್ನಗಳು ಇದರಲ್ಲಿವೆ.

ಆ ದಿನಗಳು” ಮತ್ತು “ಲೈಫು ಇಷ್ಟೇನೆ” ಎಂಬ ಎರಡು ವಿಶಿಷ್ಟ ಸಿನೆಮಾಗಳ ಕುರಿತ ನನ್ನ ಬರಹಗಳೆರಡು ಈ ಸಂಕಲನದಲ್ಲಿವೆ. ನನಗೇ ಸ್ಪಷ್ಟವಿರದ ಏನನ್ನೋ ಅರಸಿಕೊಂಡು, ಅರಸುತ್ತಿದ್ದುದು ಸಿಕ್ಕಿಯೋ ಅಥವಾ ಸಿಕ್ಕಿತೆಂದು ಕಲ್ಪಿಸಿಕೊಂಡು ನಾನು ಸಿನೆಮಾ ವಿಮರ್ಶೆಯಲ್ಲಿ ತೊಡಗಿಕೊಂಡಿರುವೆ. ಈ ಬಾಲಿಶ ಪ್ರಯತ್ನಗಳಿಗೊಂದು ಶಿಷ್ಟವಾದ ಚೌಕಟ್ಟು ಈ ಪುಸ್ತಕದಿಂದ ದೊರೆಯಲಿದೆ ಎನ್ನುವುದು ನನ್ನ ನಂಬಿಕೆ.

ಶನಿವಾರ ಸಂಜೆ ೬:೩೦ ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವಿದೆ. ದಯವಿಟ್ಟು ಬನ್ನಿ.

ಸ್ಥಳ:

ಬೆಂಗಳೂರ ಸೆಖೆ ಕುರಿತೊಂದು ಹಾಡು

ಬೆಂಗ್ಳೂರಲ್ಲಿ ಸೆಖೆ ಭಾಳ ಅಲ್ವ?
ತಿಳಿದಿಲ್ವ, ಇಲ್ಲಿ ಹಿಂಗೆ ಇದ್ದಿದ್ದೇ ಇಲ್ಲ
ಗಂಡಂಗೆ ಸಿಟ್ಟೇ ಬರದಂಗೆ ಮೆಲ್ಗೆ
ಬದುಕೋ ಹೆಂಡ್ತೀ ಹಂಗೆ
ಮಳೆ ಸುರ್ದೇ ಬಿಡ್ತಿತ್ತಲ್ಲ
ಶಾಖ ತಣಿಸೇ ನಿಲ್ತಿತ್ತಲ್ಲ

ಬೆಂಗ್ಳೂರಲ್ಲಿ ಸೆಖೆ ಭಾಳ ಅಲ್ವ?
ಮೊದ್ಲಂತು ಹಾಕಿದ್ ಅಂಗೀನ
ಹಾಕಿ ಬಿಚ್ಚಿ ಹಾಕಿ ಬಿಚ್ಚಿ ಹಾಕ್ಕೊಂಡ್ರೂನು
ಇನ್ನಸೆಂಟ್ ಮಗು ಇದ್ದಂಗಿರ್ತಿತ್ತಲ್ಲ
ಈಗಂತು ಬೆಳಗಾಗಿ ಹಾಕಿದ್
ಶರ್ಟು ಪ್ಯಾಂಟು ಬೆವರು ಸೆಂಟು
ಕುಡ್ದು ಬಿಟ್ಟು ಸಂಜೆಯಷ್ಟೊತ್ಗೆಲ್ಲ
ತೂರಾಡ್ತವಲ್ಲ
ಓದನ್ನು ಮುಂದುವರೆಸಿ

ಭೈರಪ್ಪನವರ ಆತ್ಮಕತೆ ಭಿತ್ತಿ ಓದುತ್ತ…

ಭೈರಪ್ಪನವರ ಆತ್ಮಕತೆ “ಭಿತ್ತಿ”ಯನ್ನು ಓದುತ್ತಿರುವೆ. ದಿನವಿಡೀ ಕಂಪ್ಯೂಟರ್ ಪರದೆಯನ್ನು ದಿಟ್ಟಿಸಿ ಕಣ್ಣು ದಣಿದಿದ್ದರೂ ಕೈಗಳನ್ನು ತುಂಬುವಂತೆ ಕೂರುವ ಪುಸ್ತಕವನ್ನು ಹಿಡಿದು ಪುಟಗಳೊಡನೆ ಸರಸವಾಡ್ತಾ, ಒಂದು ಬೆರಳಿನಲ್ಲಿ, ಮೂರ್ನಾಲ್ಕು ಬೆರಳುಗಳನ್ನು ಒತ್ತಿ ಪುಟಗಳನ್ನು ಸರಿಸುತ್ತಾ, ನೀಟಾಗಿ ಕೂರದ ಪುಟಗಳನ್ನು ಅಂಗೈಯಲ್ಲಿ ಇಸ್ತ್ರಿ ಮಾಡುತ್ತಾ ಓದುತ್ತಿದ್ದರೆ ಕಣ್ಣುಗಳ ದಣಿವು ಇಳಿದಂತೆ ಭಾಸವಾಗುತ್ತದೆ.

ಆತ್ಮಕತೆ ಎನ್ನುವುದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಅಷ್ಟೇ ವಿಲಕ್ಷಣವಾದದ್ದೂ ಕೂಡ. ಜೀವನದಷ್ಟು ನೀರಸವಾದ, ತರ್ಕರಹಿತವಾದ, ತಾತ್ವಿಕ ಅಂತ್ಯಗಳು ಕಾಣದ ಅಸಂಖ್ಯ ದಿಕ್ಕೆಟ್ಟ ವಿದ್ಯಮಾನಗಳನ್ನು ಸಾಹಿತ್ಯದ ರಸೋತ್ಪತ್ತಿಯ ಶೈಲಿಗೆ ಒಗ್ಗಿಸುವುದು, ಅದಕ್ಕೊಂದು ಸ್ವರೂಪ ಕೊಡುವುದು – ಈ ಪ್ರಕ್ರಿಯೆಗಳಲ್ಲಿ ನುಸುಳುವ ಸುಳ್ಳುಗಳು, ಸುಳ್ಳು ಎಂದು ಹೇಳಲಾಗದಿದ್ದರೂ ಬರೆಯುವ ಮುನ್ನ ಇದ್ದ ನೆನಪಿನ ಅರ್ಥೈಸುವಿಕೆಯನ್ನೇ ಬದಲಿಸುವಂತಹ ಉತ್ಪ್ರೇಕ್ಷೆಗಳು, ಕಲ್ಪನೆ, ಆಶಯ, ಆದರ್ಶಗಳು ಸೇರಿದ ಕೃತಿಗಳು ನಿಜಕ್ಕೂ ಆಸಕ್ತಿಕರ.

ಅಮೇರಿಕಾದ ಪ್ರಸಿದ್ಧ ಕಮಿಡಿಯನ್ ಜೆರ್ರಿ ಸೈನ್ ಫೆಲ್ಡ್ ಹಾಗೂ ಲ್ಯಾರಿ ಡೇವಿಡ್ ಸೇರಿ ನಿರ್ಮಿಸಿದ ‘ಸೈನ್ ಫೆಲ್ಡ್’ ಹೆಸರಿನ ಸಿಟ್ ಕಾಮ್ ನ ಒಂದು ಎಪಿಸೋಡ್ ನಲ್ಲಿ ಒಂದು ಸನ್ನಿವೇಶವಿದೆ. ಪಾತ್ರಗಳೇನು ಮುಖ್ಯವಲ್ಲ. ಒಂದು ಪಾತ್ರ ಬಂದು “ಜೆರ್ರಿ ನಿನಗೆ ಗೊತ್ತಾ, ನಿನ್ನ ಅಂಕಲ್ ಆತ್ಮಕತೆ ಬರೆಯುತ್ತಿದ್ದಾರೆ” ಎಂದು ಹೇಳುತ್ತಾಳೆ. ಗಂಡ, “ಅದು ಪೂರ್ತಿ ನನ್ನ ಜೀವನದ ಘಟನೆಗಳನ್ನು ಆಧರಿಸಿರುವಂಥದ್ದು” ಎನ್ನುತ್ತಾನೆ.

ಆತ್ಮಕತೆಗಳನ್ನು ಓದುವಾಗೆಲ್ಲ ನನಗೆ ಸೋಜಿಗವೆಂದು ತೋರುವ ಸಂಗತಿಯೊಂದಿದೆ. ತಮ್ಮ ಐವತ್ತು, ಅರವತ್ತನೆಯ ವಯಸ್ಸಿನಲ್ಲಿ ಆತ್ಮಕತೆಯನ್ನು ಬರೆಯಲು ತೊಡಗುವವರು ಬಾಲ್ಯದ ಘಟನೆಗಳನ್ನು ನೆನಪಿಸಿಕೊಳ್ಳುವುದು, ನೆನಪುಗಳಿಗೆ ರೂಪ ಕೊಡುವಾಗ ಅಕ್ಷರಗಳಲ್ಲಿ ಅವನ್ನು ಕರಾರುವಾಕ್ಕು ಎನ್ನುವಂತೆ ಪುನರ್ ಸೃಷ್ಟಿ ಮಾಡುವುದು ಹೇಗೆ ಸಾಧ್ಯ ? ಭೈರಪ್ಪ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಕಲ್ಲೇಗೌಡರು ಊರಿನಲ್ಲಿ ಚಂದಾ ಎತ್ತಿಸಿ ಇಪ್ಪತ್ತೆರಡು ರುಪಾಯಿ ಕೊಡಿಸಿದರು. ಮನೆಯ ಬಾಡಿಗೆ ಮೂರು ರುಪಾಯಿ ಇತ್ತು… ಮೊಡವೆಯನ್ನು ಹಿಸುಕಿಕೊಂಡು ಅದು ಕೀವು ತುಂಬಿದ ಗುಳ್ಳೆಯಾಗಿ ಜ್ವರ ಹಿಡಿದು ಮಲಗಿದ್ದಾಗ ನೆರೆಮನೆಯ ಚೆಲುವಮ್ಮ ಏನು ಅಡುಗೆ ಮಾಡಿ ಹಾಕಿದ್ದರು- ಎಂದೆಲ್ಲ ಬರೆಯುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ಒಂದು ತಿಂಗಳ ಹಿಂದಿನ ಘಟನೆಗಳನ್ನು ನೆನೆಯುವಾಗಲೇ ನನಗೆ ಎಲ್ಲವೂ ಕಲಸು ಮೇಲೋಗರವಾಗಿ ಸ್ಪಷ್ಟತೆ ಸಿಕ್ಕದೆ ಹೋಗುತ್ತದೆ.

ವಿವರಗಳಿಗಿಂತ ಹೆಚ್ಚಿನ ಸೋಜಿಗ ಇರುವುದು, ಈ ಆತ್ಮಕತೆಗಳಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ. ಭೈರಪ್ಪ ಮೈಸೂರಿನಲ್ಲಿ ಹೈಸ್ಕೂಲು ಓದುವಾಗ ಗೆಳೆಯ ಚಂದ್ರುವಿನ ಜೊತೆ ಗರಡಿಗೆ ಹೋಗಿ ಕಾಚ ಕಟ್ಟಿ ದಂಡ ಬಸಿಗೆ ತೆಗೆಯುತ್ತಿದ್ದುದನ್ನು ಗರಡಿಯ ಉಸ್ತಾದರು ಒಮ್ಮೆ ನೋಡುತ್ತಾರೆ. ಭೈರಪ್ಪನವರ ಬಗ್ಗೆ ವಿಚಾರಿಸಿದಾಗ ಚಿಕ್ಕಣ್ಣ ಈತ ಶಾಲೆಯಲ್ಲಿ ಒಳ್ಳೆ ಡಿಬೇಟರ್ ಎಂದು ಹೊಗಳುತ್ತಾನೆ ಅದಕ್ಕೆ ಪೈಲ್ವಾನರು ಮುಖ ಹುಳ್ಳಗೆ ಮಾಡಿಕೊಂಡು “ಖುರಾಕ್ ಏನು ಮದಲು ಹೇಳು” ಎಂದು ಕೇಳುತ್ತಾರೆ.

“ವಾರಾನ್ನ. ಎಲ್ಡು ದಿನ ಅನಾಥಾಲಯ, ನಾಕುದಿನ ಕರ್ನಾಟಕ ಹಾಸ್ಟಲು, ಬೆಳಗ್ಗೆ ಸಂಜೆ. ಬಡ ಉಡುಗ” ಎಂದು ಚಂದ್ರು ಹೇಳುತ್ತಾನೆ.

“ಪುಳಚಾರು.”

“ಹೌದು, ಬ್ರಾಹ್ಮಣರು”

“ನಿನ್ನ ದೋಸ್ತೀನ ಸಾಯಿಸಬೇಕು ಅಂತ ಮಾಡಿದೀಯ? ಸರಿಯಾಗಿ ಖುರಾಕ್ ಇಲ್ದೆ ಸಾಮು ಮಾಡಿದರೆ ಕ್ಷಯಾ ತಗಲಿಕತ್ತದೆ, ಟಿಬಿ, ಸಾನಿಟೋರಿಯಂ ಖಾಯಲಾ. ದಿನಾ ಎಲ್ಡು ಸೇರು ಆಲಿ, ಅರ್ದ ಸೇರು ತುಪ್ಪ, ಒಂದೊಂದು ಬೊಗಸೆ ಬಾದಾಮಿ, ದ್ರಾಕ್ಷಿ ಪಿಸ್ತಾ, ಕಲ್ಲು ಸಕ್ಕರೆ ಗೋಧಿ ರೊಟ್ಟಿ, ತಿಳೀತಾ, ತಿನ್ನೂ ಜಾತಿಯಾದರೆ ಕೋಳಿ, ತಿಳೀತಾ?” ಎನ್ನುತ್ತಾರೆ.

ಹೀಗೆ ನಡೆದ ಸಂಭಾಷಣೆಯನ್ನು ನೆನಪಿನಿಂದ ನಿಖರವಾಗಿ ಬರೆಯುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಇವನ್ನು ಹೇಗೆ ಬರೆಯುತ್ತಾರೆ? ನೆನಪಿನಲ್ಲಿರುವ ಸನ್ನಿವೇಶವನ್ನು ಅಸ್ಥಿಯಾಗಿರಿಸಿಕೊಂಡು ಕಲ್ಪನೆಯಲ್ಲಿ ಮಾಂಸ ಮಜ್ಜೆ ತುಂಬುತ್ತಾ ಹೋಗುತ್ತಾರೆಯೇ? ಡೈರಿಗಳಲ್ಲಿ ವಿಸ್ತೃತವಾಗಿ ದಾಖಲಾಗದೆ ಇರುವ ವಿದ್ಯಮಾನಗಳನ್ನು ನಿರೂಪಿಸುವಾಗ ಅವುಗಳಲ್ಲಿ ವಾಸ್ತವದ ಅಸ್ಥಿ ಎಷ್ಟು , ಕಲ್ಪನೆಯ ಮಾಂಸ ಮಜ್ಜೆ ಎಷ್ಟು ಎಂದು ಹೇಗೆ ತಿಳಿಯಲು ಬರುತ್ತೆ?

ಭೈರಪ್ಪನವರ ಸ್ಕೂಲು ದಿನಗಳ ನೆನಪಿನಲ್ಲೇ ನಿಂತಿದೆ ನನ್ನ ಓದು. ಶಾಲೆಯಲ್ಲಿ ಅತ್ಯುತ್ತಮ ಡಿಬೇಟರ್ ಎಂದು ಅವರು ಕೀರ್ತಿ ಗಳಿಸಿದ್ದು, ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದುದನ್ನು ಓದುವಾಗ ಅಪ್ರಯತ್ನಪೂರ್ವಕವಾಗಿ “ಭೈರಪ್ಪ ಒಬ್ಬ ಒಳ್ಳೆಯ ಡಿಬೇಟರ್” ಎಂದು ಹೇಳಿದ್ದ ಅನಂತಮೂರ್ತಿಯರ ಮಾತು ನೆನಪಾಗಿ ನಗೆಯುಕ್ಕಿತು.

ಮುಟ್ಟಲಾಗದು ತಬ್ಬಲಾಗದು

ಹುಡುಗಿ
ನಿನ್ನಹಂಕಾರದ ಜೊಲ್ಲು ನಾಯಿಗೆ
ಸಾಕಾಗಿದೆ ಮೂಳೆ
ಎಸೆದೆಸೆದು
ಕೆಲವೊಮ್ಮೆ
ಮುಗ್ಧವಾಗಿ ನನ್ನದೇ
ಕೈಬೆರಳು, ಎದೆಗೂಡಿನ
ಎಲುಬು ಮುರಿದು
ಮತ್ತೆ ಕೆಲವೊಮ್ಮೆ
ಅಲ್ಯುಮಿನಿಯಂ ಫಾಯಿಲ್
ಅವುಚಿದ ಬಿಕರಿಗಿಟ್ಟ
ಬೋನ್ ಪೀಸು

ನೀನೆಂದೆ
ನನಗೊಂದು
ರಮ್ಯ ಕವನ ಬರೆದುಕೊಡು
ಏಕಾಂತದಲ್ಲಿ
ನಿನ್ನೆದೆಗೊರಗಿರುವಾಗ
ಗಂಟಲು ತಲುಪದ
ಹೃದಯದ ಭಾಷೆಯಲ್ಲಿ
ಹಾಡಿಬಿಡು
ಗೊತ್ತಿಲ್ಲ ನಿನಗೆ
ಬೆತ್ತಲಾಗಿ ಬರುವ ನಿನ್ನೆದುರಿಸಲು
ನನ್ನ ಸೇನೆ ಸನ್ನದ್ಧ
ನೀಶೆ, ಫ್ರಾಯ್ಡು, ಪತಂಜಲಿ
ನಿಂತಲ್ಲಿ ಮುತ್ತು
ಕೊಡೆನ್ನುವೆ ನೀನು ಓದನ್ನು ಮುಂದುವರೆಸಿ

ಇಲ್ಲಿಗೆ ಬಂದು ನಿಲ್ಲುವ ಅನಿವಾರ್ಯತೆಯಾದರೂ ಎಂಥದ್ದು?‌

ನಾವು ಅಪ್ರಯತ್ನಪೂರ್ವಕ ಅನುಭೂತಿ ಎಂದು ಕರೆಯುವುದರ ಹಿಂದೆಲ್ಲ ಕಣ್ಣಿಗೆ ಕಾಣದ ಸಾವಿರ ಎತ್ತು ಹಿಡಿ ತಳ್ಳು ತರ್ಕಗಳಿರುತ್ತವೆ. ಒಂದು ಸ್ಮಾರ್ಟ್ ಫೋನಿನಲ್ಲಿ ನಮ್ಮ ಬೆರಳ ತುದಿಯ ಸನ್ನೆಗೆ ನಾಚಿ ಪಕ್ಕಕ್ಕೆ ಜಾರಿಕೊಳ್ಳುವ ಪರದೆಯ ಹಿಂದೆ ಅದರ ಲಯವನ್ನು, ಚಲನೆಯನ್ನು ನಿರ್ದೇಶಿಸುವ ನಿರ್ದಿಷ್ಟ ನಿಯಮಗಳಿರುತ್ತವೆ. ಈ ಸೌಂದರ್ಯವನ್ನು ನಿರ್ಮಿಸಿಕೊಡಲು ಯಾಂತ್ರಿಕವಾಗಿ ಲಕ್ಷಾಂತರ ಫ್ಲಿಪ್ ಫ್ಲಾಪುಗಳು ತೆರೆದು ಮುಚ್ಚಿಕೊಳ್ಳುತ್ತಿರುತ್ತವೆ.

ಈ ಯಾಂತ್ರಿಕ ನಿಯಮಬದ್ಧ ಕೆಲಸಗಳ್ಯಾವುವನ್ನೂ ಮಾಡದೆ ಸುಮ್ಮನೆ ಇರಬಹುದಲ್ಲವೇ? ಕ್ಲೀಷೆಯಾಗಿ ಹೋಗಿರುವ ನದೀ ದಂಡೆ, ಸ್ವಚ್ಛಂದ ಆಕಾಶದೆದುರು ಈಸಿ ಚೇರಿನಲ್ಲಿ ವ್ಯಕ್ತಿಯೊಬ್ಬ ಕುಳಿತು ತೂಕಡಿಸುತ್ತಿರುವ ದೃಶ್ಯ, ಅದಕ್ಕಿಂತ ಹೆಚ್ಚು ಕ್ಲೀಷೆಯಾಗಿರುವ ಆ ವ್ಯಕ್ತಿ ಹೇಳಿದನೆನ್ನಲಾದ ಸಾಲುಗಳು. ಇಷ್ಟೆಲ್ಲ ದುಡಿದು ಸಂಪಾದಿಸಿ ಅನಂತರ ಮಾಡುವುದನ್ನೇ ತಾನು ಈಗ ಮಾಡುತ್ತಿರುವೆ.

ಈ ದುಡಿಮೆ, ಈ ದುಗುಡ, ಈ ವ್ಯಾಧಿ, ಅಂಟಿಕೊಳ್ಳುವುದು, ನೋವಾಗುವುದು, ಹಿಂಸೆ, ಬೇಸರ ಇವೆಲ್ಲ ಯಾಕೆ ಬೇಕು ಸುಮ್ಮನೆ ಇರೋದು ಕಷ್ಟವೇ? ಹೌದು, ಹೀಗನ್ನಿಸಿದರೂ ಮನುಷ್ಯ ಯಾವಾಗ ಸುಮ್ಮನಿದ್ದ? ಅತೀವ ಹಿಂಸೆಯಲ್ಲಿ ಬೆಳಿಗ್ಗೆ ಎದ್ದು ಆಫೀಸಿಗೆ ಹೊರಡುವುದು ಶಿಲಾಮಾನವನಿಗೇನು ಅನಿವಾರ್ಯವಾಗಿರಲಿಲ್ಲ ಅಲ್ಲವೇ? ಇಲ್ಲಿಗೆ ಬಂದು ತಲುಪುವುದಕ್ಕೆ ಆ ಮಾತು ಗೊತ್ತಿಲ್ಲದ, ಸಭ್ಯತೆಯಿಲ್ಲದ, ಶೂ ಪಾಲಿಶ್ ಮಾಡಲು ತಿಳಿದಿಲ್ಲದ, ಟೈ ಕಟ್ಟಲು ಗೊತ್ತಿಲ್ಲದ, ಸೀನುವ ಮುನ್ನ ಎಲ್ಲಿದ್ದರೂ ಹುಡುಕಿ ತೆಗೆದು ಮೂಗಿಗೆ ಒತ್ತಿ ಹಿಡಿಯುವ ಕರ್ಚೀಫು ಪರಿಚಯವಿಲ್ಲದ, ಸೀನಿದ ತರುವಾಯ ಕ್ಸೂಸ್ ಮಿ ಎನ್ನುವ ಸಂಸ್ಕಾರವಿಲ್ಲದ ಶಿಲಾಮಾನವನಿಗೆ ಇದ್ದ ಅನಿವಾರ್ಯಗಳಾದರೂ ಎಂಥವು?

ಇಲ್ಲಿ ಬಂದು ನಿಂತು ನಾವು ಇದೆಲ್ಲ ಏತಕ್ಕೆ ಎಂದೊಡನೆ ಪರಿಸ್ಥಿತಿ ಸುಧಾರಿಸೀತೇ?‌

ಕುರಿ ವೇಷದಲ್ಲಿರುವ ಪುರುಷ ಸಿಂಹರೇ ಎದ್ದೇಳಿ!

ಇರುವುದನ್ನು ಇರುವಂತೆ ಹೇಳುವುದು ಕೆಲವೊಮ್ಮೆ ಅಪಾಯಕಾರಿ. ಆದರೆ ಹಾಗೆ ಹೇಳುವುದು ಹಲವು ಸಂದರ್ಭಗಳಲ್ಲಿ ಅತ್ಯಗತ್ಯ. ಇರುವುದನ್ನು ಹೇಳದಿರುವುದು ಹಾಗೂ ಇಲ್ಲದಿರುವುದನ್ನು ಹೇಳುವುದು ಸುಳ್ಳು ಎಂದು ಕರೆಸಿಕೊಳ್ಳುತ್ತೆ. ಹಾಗೆ ಹೇಳಿದರೆ ಸಾಚಾ ಅಲ್ಲದ ಉದ್ದೇಶಗಳಿದ್ದೇ ಇರುತ್ತವೆಂಬ ಗುಮಾನಿ ಏಳುತ್ತದೆ. ಹೊಟ್ಟೆ ಸಣ್ಣಗೆ ಕಾಣುವಂತಹ ಕನ್ನಡಿ ಕ್ಷಣ ಮಾತ್ರ ಖುಶಿ ಕೊಡಬಲ್ಲದು ಆದರೆ ಅದನ್ನೇ ಕಣ್ಣ ಚಾಳೀಸು ಮಾಡಿಕೊಂಡರೆ ನೆಟ್ಟಗಿರುವುದನ್ನು ಕಾಣೋದಕ್ಕೇ ಸಾಧ್ಯವಿಲ್ಲ.

ಇದೇ ಸಂಗತಿ ಭಗವದ್ಗೀತೆಯಿಂದ ಹಿಡಿದು ನವಯುಗದ ಆಧ್ಯಾತ್ಮಕ್ಕೂ ಅನ್ವಯಿಸುತ್ತದೆ. ವಿಜಯಕ್ಕೆ ಏಳು, ಎಂಟು, ಇನ್ನೊಂದು ಅರ್ಧ ಮೆಟ್ಟಿಲು ಎಂದು ವ್ಯಕ್ತಿತ್ವ ವಿಕಸನದ ಗಗನ ಚುಂಬಿ ಮೆಟ್ಟಿಲುಗಳನ್ನು ತೋರಿಸುವ ಮಂದಿಗೂ ಅನ್ವಯವಾಗುತ್ತದೆ. ನೀವೆಲ್ಲರೂ ಕುರಿ ವೇಷದಲ್ಲಿರುವ ಸಿಂಹಗಳು ಪುರುಷ ಸಿಂಹಗಳು ಎಂದು ವಿವೇಕಾನಂದ ಉದ್ಘರಿಸಿದ್ದು ಕೇಳಿದೊಡನೆ ನಿಮ್ಮಲ್ಲಿ ಉಬ್ಬರಿಸಿ ಉಕ್ಕಿ ಬರುವ ಆತ್ಮವಿಶ್ವಾಸವನ್ನು ಕೊಂಚ ತಣ್ಣಗಾಗಿಸಿಕೊಂಡು ಕೇಳಿಕೊಳ್ಳಿ ಇದು ಇದ್ದದ್ದು ಹೇಳುವ ವಿಧಾನವಾ ಎಂದು?

ಯಾವತ್ತೂ ಸಾಕ್ಷಾತ್ಕರಿಸಿಕೊಳ್ಳಲಾಗದ ಯುಟೋಪಿಯಾ, ಎಂದೂ ತಲುಪಲಾಗದ ಗಮ್ಯಗಳನ್ನು ಎದುರಿಗಿಟ್ಟುಕೊಂಡು ಮಾತನಾಡುವವರಿಂದ ಕಾಲ್ಕೀಳುವುದು ಸೌಖ್ಯ. ಆತ್ಮವನ್ನು ಪರಿಶುದ್ಧ ಮಾಡಿಕೊಳ್ಳುವುದು ಹೇಗೆ ಎಂದು ಮಾತನಾಡುವವನಿಗಿಂತ ಕುಡಿಯುವ ನೀರನ್ನು ಶುದ್ಧವಾಗಿಸೋದು ಹೇಗೆ ಎಂದು ಹೇಳುತ್ತಿರುವವನಿಗೆ ಗಮನ ಕೊಡಬೇಕು. ನೀವೆಲ್ಲ ಮಲಗಿರುವ ಜ್ವಾಲಾಮುಖಿಗಳು, ಕುರಿ ವೇಷದ ಸಿಂಹಗಳು ಎಂದಾಗ ಸಾಧ್ಯತೆಯನ್ನು ನೆನೆದು ಆರ್ಗಾಸ್ಮಿಕ್ ಆಗಿ ವರ್ತಿಸುವ ಮುನ್ನ ನಿಮ್ಮನ್ನು ನೀವು ಕುರಿ ವೇಷ ತೊಟ್ಟಿರುವವರು, ಮಲಗಿರುವವರು – ಎಚ್ಚರವಿಲ್ಲದವರು ಎಂದು ಹೇಳುತ್ತಿರುವುದು ಯಾವ ಕಾರಣಕ್ಕೆ ತಿಳಿಯಿರಿ. ನಮ್ಮ ಫೇರ್ ನೆಸ್ ಕ್ರೀಮ್ ಹಚ್ಚಿದರೆ ಬೆಳ್ಳಗಾಗುವಿರಿ ಎನ್ನುವುದರಷ್ಟೇ, ನೀವು ಅವಮಾನಕಾರಿಯಾಗುವಷ್ಟು ಕಪ್ಪಗಿದ್ದೀರಿ ಎಂಬ ಭಾವನೆ ಮೂಡಿಸುವ ಪ್ರಯೋಜನಕಾರಿ ವ್ಯಾಪಾರಿ ತಂತ್ರ.

ಕ್ಲಿಷ್ಟವೆನ್ನುವುದದೆಷ್ಟು ಸುಲಭ!

ದ್ವಂದ್ವಗಳೊಡನೆ ಆಟವಾಡುವುದು ಬಲು ಸೊಗಸು. ನಮ್ಮ ಕಪ್ಪು ಬಿಳುಪು ನೈತಿಕತೆ, ಇಬ್ಭಾಗ ಸೀಳುವ ಕತ್ತಿಯಲಗಿನ ಹರಿತ ತರ್ಕಗಳಿಗೆ ದ್ವಂದ್ವ ದುಃಸ್ವಪ್ನ. ಆದರೆ ಬದುಕಿಗೋ ಅದೇ ಸಹಜ ದಾರಿ.

ಸರಳವಾಗಿ ಹೇಳುವುದಾದರೆ ಎರಡು ಸಮಾನಾಂತರ ಕಂಬಿಗಳಿರುವ ರೈಲು ಹಳಿ, ಅದರೆರಡು ಕಂಬಿಗಳು ದ್ವಂದ್ವವೆನ್ನುವುದಾರೆ. ನಮ್ಮ ತರ್ಕ, ನೈತಿಕ ಮೌಲ್ಯಗಳು ಯಾವುದೋ ಒಂದು ಕಂಬಿಯ ಮೇಲಷ್ಟೇ ಸಾಗಬಲ್ಲ ಸೈಕಲ್ಲು. ಬದುಕೋ ಎರಡೂ ಹಳಿ ಮೇಲೆ ಹರಿದು ಸಾಗುವ ರೈಲು ಗಾಡಿ.

ಮನುಷ್ಯನಿಗೆ ಎಲ್ಲವೂ ಅಭ್ಯಾಸ, ಸಿದ್ಧಿ, ಸಾಧನೆಯಿಂದ ಲಭಿಸುವಂಥದ್ದು. ಅಭ್ಯಾಸದಿಂದ ಆನೆಯನ್ನೂ ಪಳಗಿಸಬಹುದು, ವಿಮಾನವನ್ನು ಹಾರಿಸಬಹುದು, ಹಡಗನ್ನು ತೇಲಿಸಬಹುದು. ಆದರೆ ಎಲ್ಲಾ ಅಭ್ಯಾಸ ಮರೆತ ಕ್ಷಣ ಮಾತ್ರದ ಉತ್ಕಟತೆಯಲ್ಲಿ ಮಾತ್ರ ಕಾವ್ಯ ಹುಟ್ಟಲು ಸಾಧ್ಯ. ಸಾಧನೆಯ ಬಿಗು ಸಡಿಲಾದಾಗಲೇ ಅನುಭೂತಿ ದಕ್ಕಲಿಕ್ಕೆ ಸಾಧ್ಯ. ಅವನೊಬ್ಬ ರಜನೀಶ್ ಹೇಳುತ್ತಾನೆ ನಿನ್ನ ಮನಸ್ಸನ್ನೇ ಕೈಬಿಡು.

ಧೈರ್ಯವೆನ್ನುವುದನ್ನು ಬೆಳೆಸಿಕೊಳ್ಳಬೇಕು ನಿಜ. ಪುಕ್ಕಲುತನವೇನು ಸಹಜ ಗುಣವೇ? ಭಯವೇನು ನಮ್ಮ ಸ್ವಭಾವವೇ? ಸಾಧನೆಯಿರದಿದ್ದರೆ ಭಯಪೀಡಿತನಾಗಿರುವುದಕ್ಕೆ ಸಾಧ್ಯವಿಲ್ಲ. ಭಯವೆನ್ನುವುದೇ ಸ್ವಭಾವವಾಗುವುದಕ್ಕೂ ಅಭ್ಯಾಸ ಬೇಕು. ಇಷ್ಟು ಸುಲಭಕ್ಕೆ ಎಲ್ಲವೂ ನಮ್ಮ ಕೈಲಿರುವುದೇ? ಪ್ರಶ್ನಿಸಲೇ ಬೇಡ ಹೀಗೆ. ನೀನ್ಯಾರು ಅನ್ನೋದು ಕೈಬಿಡು, ನೀನೇನಾಗಬೇಕು ಕೇಳಿಕೋ. ಹೀಗೆಂದೊಡನೆ ಅರ್ಥ ಗ್ರಹಿಸುವ ಮುಂಚೆಯೇ ಆರ್ಕೆಸ್ಟ್ರಾದಿಂದ ಉತ್ಸಾಹ ಭರಿತ ಸಂಗೀತ ಧಾರೆಯುಕ್ಕಿ, ಕಣ್ತುಂಬ ಬೆಳಕು ಕವಿಯುವುದು ಅಭ್ಯಾಸ ಬಲದಿಂದಲೇ?

 

ನಾನ್ ಸ್ಟಾಪ್ ಇಂಡಿಯಾ: ಮಾರ್ಕ್ ಟುಲಿಯ ಭಾರತ ದರ್ಶನ

(ಈ ಬರಹ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಕಲಕತ್ತೆಯಲ್ಲಿ ಹುಟ್ಟಿ ಮುವತ್ತು ವರ್ಷಗಳ ಕಾಲ ಬಿಬಿಸಿ ಸುದ್ದಿ ಸಂಸ್ಥೆಯ ವರದಿಗಾರನಾಗಿ ಕೆಲಸ ಮಾಡಿದ ಮಾರ್ಕ್ ಟುಲ್ಲಿಗೆ ಭಾರತದ ಮೇಲಿನ ಅದಮ್ಯ ಪ್ರೀತಿ, ಕಾಳಜಿಗೆ ಅವರು ಭಾರತವನ್ನು ಕುರಿತು ಬರೆದಿರುವ ಪುಸ್ತಕಗಳು ಸಾಕ್ಷಿ. ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯ’ ಅವರ ಮೊದಲ ಕೃತಿ.

ತೀರಾ ಇತ್ತೀಚಿನ ಪ್ರಕಟಣೆ ‘ನಾನ್ ಸ್ಟಾಪ್ ಇಂಡಿಯ’ ಮಾರ್ಕ್ ತಮ್ಮ ಎಪ್ಪತ್ತಾರರ ವಯಸ್ಸಿನಲ್ಲೂ ಕಾಯ್ದಿರಿಕೊಂಡಿರುವ ಮಗುವಿನ ಮುಗ್ಧತೆ, ವರದಿಗಾರಿಕೆಯಲ್ಲಿನ ಅಚ್ಚುಕಟ್ಟು, ತಿಳಿಯಾದ ಚಿಂತನೆಗಳು ‘ನಾನ್ ಸ್ಟಾಪ್ ಇಂಡಿಯ’ ದಲ್ಲಿನ ಹತ್ತೂ ಪ್ರಬಂಧಗಳಲ್ಲಿ ಪ್ರಮುಖವಾಗಿ ಕಾಣುತ್ತವೆ. ಟೀಕೆಗಳನ್ನು ಪ್ರತಿರೋಧವಿಲ್ಲದೆ ಸ್ವೀಕರಿಸುವಂತೆ ಮಾಡುವ ಅವರ ವರದಿಗಾರಿಕೆಯಲ್ಲಿನ ನಂಜಿಲ್ಲದ ಕಾಳಜಿ ಹಾಗೂ ಮಾರ್ದವ ಒಂದು ಸಾಹಿತ್ಯ ಕೃತಿಯಾಗಿಯೂ ನಾವು ಅವರ ವರದಿಗಾರಿಕೆಯನ್ನು ಓದುವಂತೆ ಪ್ರೇರೇಪಿಸುತ್ತವೆ.

ಭಾರತದ ಪ್ರೇಕ್ಷಣೀಯ ಇಲ್ಲವೇ ತೀರ್ಥ ಕ್ಷೇತ್ರಗಳ ಇತಿಹಾಸ, ಪೌರಾಣಿಕ ಹಿನ್ನೆಲೆ ತಿಳಿಸುತ್ತ ಭಾರತ ದರ್ಶನ ಮಾಡಿಸುವುದನ್ನು ನಾವು ಕಂಡಿದ್ದೇವೆ. ಮಾರ್ಕ್ ರದ್ದು ಸಹ ಇಂಥದ್ದೇ ಭಾರತ ದರ್ಶನ. ಆದರಿಲ್ಲಿ ಅನಾವರಣಗೊಳ್ಳುವ ಭಾರತ ವಾಸ್ತವದ್ದು. ತನ್ನ ಶಕ್ತಿ, ಉತ್ಸಾಹ, ಕನಸು, ಆಕಾಂಕ್ಷೆಗಳ ಜೊತೆ ಜೊತೆಗೆ ತನ್ನ ದೌರ್ಬಲ್ಯ, ಆಲಸ್ಯ, ಕ್ರೌರ್ಯಗಳನ್ನು ಭಾರತವೆಂಬ ಸಹಸ್ರ ಮುಖಗಳ ದೇಶ ಪ್ರಕಟಿಸುತ್ತಾ ಹೋಗುತ್ತದೆ.

೨೦೧೧ರಲ್ಲಿ ಪ್ರಕಟವಾದ `ನಾನ್ ಸ್ಟಾಪ್ ಇಂಡಿಯ’  ಭಾರತದವನ್ನು ಒಂದು ದೇಶವಾಗಿ ಅದರ ಎಲ್ಲಾ ಸಮಸ್ಯೆಗಳು ಹಾಗೂ ಅವಕಾಶಗಳೊಂದಿಗೆ ಅರ್ಥ ಮಾಡಿಕೊಳ್ಳುವುದಕ್ಕೆ ಹೊರ ದೇಶದ ಓದುಗರಿಗೆ ಅತ್ಯುತ್ತಮವಾದ ಕೈಪಿಡಿ. ಮಾರ್ಕ್ ಸಹ ಭಾರತದ ಕೆಲವು ಕ್ಲಿಷ್ಟ ಸಂಗತಿಗಳನ್ನು  ಭಿನ್ನ ಸಂಸ್ಕೃತಿಯ, ಭಿನ್ನ ನಾಗರೀಕತೆಯ ಓದುಗ ಅರ್ಥ ಮಾಡಿಕೊಳ್ಳುವಂತೆ ಕೆಲವೆಡೆ ಸರಳಗೊಳಿಸಿದ್ದಾರೆ. ಆದರೆ ಭಾರತೀಯರಿಗೆ ಇದು ಹೊರಗಿನವನೊಬ್ಬನ (ಮಾರ್ಕ್ ಭಾರತದಲ್ಲೇ ಹುಟ್ಟಿ ವಾಸಿಸಿದ್ದರೂ) ಪೂರ್ವಗ್ರಹ ಪೀಡಿತ ಅಭಿಪ್ರಾಯಗಳ ಮೂಟೆ ಅನ್ನಿಸುವುದಿಲ್ಲ. ಏಕೆಂದರೆ ಮಾರ್ಕ್ ತಮ್ಮ ಅಭಿಪ್ರಾಯ, ಮಾತುಗಳನ್ನು ತೀರಾ ಕ್ಲುಪ್ತವಾಗಿಸಿ, ಭಾರತೀಯರನ್ನೇ ಮಾತಿಗೆ ಹಚ್ಚುತ್ತಾರೆ. ಸಮಸ್ಯೆಯ ನಾನಾ ಆಯಾಮಗಳನ್ನು ತೆರೆದಿರಿಸುತ್ತಾ ಬಾಧ್ಯಸ್ಥರ ಅಭಿಪ್ರಾಯಗಳನ್ನೆಲ್ಲ ಸಂಗ್ರಹಿಸಿ ನೇರವಾಗಿ ಕ್ಷೇತ್ರ ಅಧ್ಯಯನದಿಂದ ಗ್ರಹಿಸಿದ ಸಂಗತಿಗಳನ್ನು ನಿರ್ಮೋಹದಿಂದ ದಾಖಲಿಸುತ್ತಾರೆ. ಅವರ ಅಭಿಪ್ರಾಯವೇನಿದ್ದರೂ ಪ್ರಬಂಧಕ್ಕೆ ಒಂದು ಕಟ್ಟು ಒದಗಿಸುವುದಕ್ಕೆ ಮಾತ್ರ ಸೀಮಿತ. ಇದು ಸ್ಥಳೀಯ ಭಾಷೆಗಳು ಹಿಂದಿ ಹಾಗೂ ಇಂಗ್ಲೀಷ್ ಪ್ರಭಾವದಲ್ಲಿ ಎದುರಿಸುತ್ತಿರುವ ಸವಾಲನ್ನು ಕುರಿತ ಪ್ರಬಂಧ ‘ಇಂಗ್ಲೀಷ್ ರಾಜ್’ ನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಭಾರತವನ್ನು ಕಾಡುತ್ತಿರುವ, ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಿರುವ ನಕ್ಸಲ್ ಸಮಸ್ಯೆ, ಕೋಮುವಾದ, ವೋಟ್ ಬ್ಯಾಂಕ್ ರಾಜಕೀಯ, ರಾಮನ ಹೆಸರಿನಲ್ಲಿನ ರಾಜಕಾರಣ ಇವುಗಳ ಚರ್ಚೆಯಿಂದ ಪುಸ್ತಕ ಪ್ರಾರಂಭವಾಗುತ್ತದೆ. ಈ ಸಂಗತಿಗಳನ್ನು ಭಾರತೀಯರಾದ ನಮಗೆ ಚರ್ವಿತ ಚರ್ವಣವೆನಿಸಿದ್ದರೂ ಮಾರ್ಕ್ ಸುದ್ದಿ ಗ್ರಹಿಸುವ ಮೂಲಗಳ ಹೊಸತನ ಹಾಗೂ ನಿರೂಪಣೆ ಕೊಡುವ ಹೊಸ ಹೊಳವುಗಳಿಂದ ಈ ಪ್ರಬಂಧಗಳು ನಮ್ಮನ್ನು ಹಿಡಿದಿಡುತ್ತವೆ. ‘ದಿ ರಾಮಾಯಣ ರೀವಿಸಿಟೆಡ್’ ಪ್ರಬಂಧದಲ್ಲಿ ಕೇಂದ್ರ ಸರಕಾರದ ಒಡೆತನದಲ್ಲಿದ್ದ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರವಾಗಲು ತೊಡಗಿದಾಗ ಅದು ಭಾರತದ ಸೆಕ್ಯುಲರ್ ಮನಸ್ಥಿತಿಗೆ ಘಾತುಕವಾದ ವಿದ್ಯಮಾನ ಎಂದು ಚಿಂತಕರು ವಿರೋಧಿಸಿದ್ದು, ಆ ರಾಮಾಯಣ ಹುಟ್ಟಿಸಿರಬಹುದಾದ ರಾಷ್ಟ್ರೀಯತೆಯ ಅಸ್ಮಿತೆಯ ಅಲೆಯಲ್ಲಿ ರಕ್ತದ ಹೊಳೆ ಹರಿಸಿದ ಅಯೋಧ್ಯಾ ಚಳುವಳಿಗಳ ಹಿನ್ನೆಲೆಯನ್ನು ವಿವರಿಸುತ್ತ ಇಂದು ದಿನದ ಇಪ್ಪತ್ನಾಲ್ಕು ಗಂಟೆ ಧರ್ಮವನ್ನು ನಿರ್ಲಜ್ಜವಾಗಿ ಟಿವಿ ಚಾನಲುಗಳಲ್ಲಿ ಬಿತ್ತರಿಸುತ್ತಿರುವ ಕುರಿತು ಯಾರೂ ಧ್ವನಿಯೆತ್ತದಿರುವುದನ್ನು ಗುರುತಿಸುತ್ತಾರೆ.

ಬಿಸಿ ಬಿಸಿ ಚರ್ಚೆಗಳಿಗೆ ಎಂದಿಗೂ ಅವಕಾಶ ಕಲ್ಪಿಸಿಕೊಡುವ ವಿವಾದಾಸ್ಪದ ಸಂಗತಿಗಳನ್ನು ತಟ್ಟುತ್ತಾ ಹೋಗಿ ಮಾರ್ಕ್ ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮುಟ್ಟುತ್ತಾರೆ. ಮೂಲಭೂತವಾಗಿ ವೈವಿಧ್ಯಮಯವಾದ ಭಾರತದಲ್ಲಿ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಒಡ್ಡುತ್ತಿರುವ ಸಮಸ್ಯೆಗಳನ್ನು ಚರ್ಚಿಸುತ್ತಾ ಸಣ್ಣ ಸಣ್ಣ ಸಮುದಾಯಗಳ ಜವಾಬ್ದಾರಿಗಳನ್ನು, ಅವಕಾಶಗಳನ್ನು ವಿವರಿಸುತ್ತಾರೆ. ಸರಕಾರದ NREGA ಯೋಜನೆಯ ಫಲಶ್ರುತಿ, ಅದರ ಲೋಪಗಳು, ಸೇವಾ ಮಂದಿರದಂತಹ ಸರಕಾರೇತರ ಸಂಸ್ಥೆಗಳ ಕೊಡುಗೆ , ಪಂಜಾಬಿನಲ್ಲಿ ಪೆಪ್ಸಿಕೋ ಕಂಪೆನಿ ಕೈಗೊಂಡಿರುವ ಒಪ್ಪಂದದ ವ್ಯವಸಾಯ, ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸುದ್ದಿ  ಮಾಡಿದ ಮೈಕ್ರೋ ಫೈನಾನ್ಸ್ ಖಾಸಗಿ ಉದ್ದಿಮೆಯ ಹಗರಣ ಮುಂತಾದ ವರದಿಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಸರಕಾರ, ಖಾಸಗಿ ಹಾಗೂ ಎನ್ ಜಿ ಓಗಳ ಪಾತ್ರಗಳೇನು ಅವುಗಳ ಮಿತಿಗಳೇನು ಎಂಬುದನ್ನು ಚರ್ಚಿಸುತ್ತಾರೆ.

ಭಾರತದ ಆರ್ಥಿಕ ಪ್ರಗತಿಗೆ, ಸೂಪರ್ ಪವರ್ ಆಗುವ ಅದರ ಕನಸಿಗೆ ಚೈತನ್ಯ ಕೇಂದ್ರ ಖಾಸಗಿ ಉದ್ದಿಮೆಗಳು. ೧೯೯೧ರ ಮುಕ್ತ ಆರ್ಥಿಕ ನೀತಿಯಿಂದ ಪಡೆದ ಪ್ರೋತ್ಸಾಹನ್ನು , ಆ ಮುಂಚಿನ ಲೈಸೆನ್ಸ್ ಪರ್ಮಿಟ್ ರಾಜ್ ಯುಗದಲ್ಲಿ ತನ್ನ ಸಾಮರ್ಥ್ಯವನ್ನು ಸಂಪೂರ್ಣ ಬಳಸಿಕೊಳ್ಳಲಾಗದೆ ನರಳಿ ಹೊಸ ಸ್ವಾತಂತ್ರ್ಯದಲ್ಲಿ ಐವತ್ತಕ್ಕೂ ಹೆಚ್ಚು ದೇಶಗಳಿಗೆ ವಹಿವಾಟು ವಿಸ್ತರಿಸಿಕೊಂಡು ಅರಳಿದ ಟಾಟಾ ಸ್ಟೀಲ್ ಸಂಸ್ಥೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ೨ಜಿ ತರಂಗಾಂತರ ಹಂಚಿಕೆಯ ಹಗರಣದಲ್ಲಿ ಸುದ್ದಿಗೆ ಬಂದ ರತನ್ ಟಾಟಾ ರಾಡಿಯಾ ಟೇಪ್ ಕುರಿತು ಅವರು ಟಾಟಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡುವುದರ ಮೂಲಕ ಆ ಪ್ರಬಂಧ ಪಿ. ಆರ್ ಆಗುವುದನ್ನು ತಪ್ಪಿಸಿದ್ದಾರೆ.  ಅವಸಾನದ ಅಂಚಿನಲ್ಲಿರುವ ಹುಲಿಗಳ ರಕ್ಷಣೆ ಹಾಗೂ ಸ್ವಾತಂತ್ರಾನಂತರದ ದಿನಗಳಿಂದಲೂ ಅವಗಣನೆಗೆ ಒಳಗಾಗಿರುವ ಪೂರ್ವೋತ್ತರ ರಾಜ್ಯಗಳ ಪರಿಸ್ಥಿತಿಯ ಕುರಿತ ಪ್ರಬಂಧಗಳೊಂದಿಗೆ ಪುಸ್ತಕ ಮುಗಿಯುತ್ತದೆ.

ಮಾರ್ಕ್ ಬರಹದಲ್ಲಿ ಹರಿತವಾದ ಚಿಂತನೆಗಳಿಗಿಂತ ವಿಶಾಲವಾದ ತಳಹದಿಯ ಅಧ್ಯಯನ, ವರದಿಗಾರಿಕೆ ಇರುತ್ತವೆ. ಬರವಣಿಗೆಯಲ್ಲಿನ ಮಾರ್ದವ, ಸಹಜವಾದ ಹಾಸ್ಯ, ಊಹಿಸಲಸಾಧ್ಯವಾದ ದಿಕ್ಕುಗಳಿಂದ ಒದಗಿ ಬರುವ ರೆಫರೆನ್ಸುಗಳು ಅವರ ಪುಸ್ತಕದ ಓದನ್ನು ಅರ್ಥಪೂರ್ಣವಾಗಿಸುತ್ತವೆ. ಮಾಗಿದ ಪತ್ರಕರ್ತನ ಪ್ರಬುದ್ಧ ವರದಿಗಾರಿಕೆಯಲ್ಲಿ ಭಾರತವನ್ನು ಕಾಣುವುದು ನಿಜಕ್ಕೂ ಉಲ್ಲಾಸದಾಯಕ!

(ಚಿತ್ರ ಕೃಪೆ: http://ibnlive.in.co… )